ಬೆಂಗಳೂರು: ಆಗಸ್ಟ್ 25, 2025ರಂದು ಹೊರಡಿಸಲಾದ ಸರ್ಕಾರಿ ಆದೇಶದ ಹಿನ್ನೆಲೆಯಲ್ಲಿ, ಎಸ್ ಸಿ ಸಮುದಾಯದ ಆಂತರಿಕ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದ ವಿಷಯದಲ್ಲಿ ತುರ್ತು ಪರಿಷ್ಕರಣೆ ಅಗತ್ಯವಿದೆ ಎಂದು ಅಲ್ ಇಂಡಿಯಾ ಬಹುಜನ ಸಮಾಜ ಪಕ್ಷ ರಾಜ್ಯ ಘಟಕ ಉಪಾಧ್ಯಕ್ಷರಾದ ಕೆಬಿ ವಾಸು ಒತ್ತಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿದ ಅವರು ಸರ್ಕಾರವು 17% ಮೀಸಲಾತಿ ಕೋಟಾವನ್ನು ಗುಂಪು ಎ, ಬಿ ಮತ್ತು ಸಿ ಗಳಿಗೆ 6:6:5 ಅನುಪಾತದಲ್ಲಿ ಹಂಚಿಕೆ ಮಾಡಿರುವುದು ತಿಳಿದಿದೆ.
ಆದರೆ, ಕರ್ನಾಟಕ ಹೈ ಕೋರ್ಟ್ ನೀಡಿರುವ ಮಧ್ಯಂತರ ಆದೇಶದ ಅನ್ವಯ, ಎಸ್ ಸಿ ಗಳಿಗೆ ಒಟ್ಟು ಮೀಸಲಾತಿ ಪ್ರಮಾಣವನ್ನು 15%ಕ್ಕೆ ಸೀಮಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿನ್ನೆಲೆಯಲ್ಲಿ, 17% ಆಧಾರದ ಮೇಲೆ ಹೊರಡಿಸಲಾದ ಹಿಂದಿನ ಆದೇಶವನ್ನು ತಕ್ಷಣ ಪರಿಷ್ಕರಿಸಿ, 15% ಮೀಸಲಾತಿಯ ಆಧಾರದ ಮೇಲೆ ಎಸ್ ಸಿ ಜಾತಿ ಗುಂಪುಗಳ ನಡುವೆ ಮರುಹಂಚಿಕೆ ಮಾಡಬೇಕು ಎಂದು ಹೇಳಿದರು.
ನಮ್ಮ ಪ್ರಮುಖ ಆಗ್ರಹಗಳು ಇಂತಿವೆ: ರಾಜ್ಯ ಸಚಿವ ಸಂಪುಟವು ತುರ್ತುವಾಗಿ ಸಭೆ ಸೇರಿ 15% ಮೀಸಲಾತಿಯ ಅನುಪಾತವನ್ನು ಅಂತಿಮಗೊಳಿಸಬೇಕು.
ಆಗಸ್ಟ್ 25, 2025ರ ಹಿಂದಿನ ಸರ್ಕಾರಿ ಆದೇಶವನ್ನು ರದ್ದುಗೊಳಿಸಿ, ಪರಿಷ್ಕೃತ ಹೊಸ ಆದೇಶವನ್ನು ಹೊರಡಿಸಬೇಕು.
ಅಗತ್ಯವಿದ್ದಲ್ಲಿ ಎಸ್ ಸಿ ಜಾತಿಗಳ ಮರುಸಂಘಟನೆ ಹಾಗೂ ಗುಂಪುಗಳ ಮರುವ್ಯವಸ್ಥೆ ಕುರಿತು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕು.
ಸೆಪ್ಟೆಂಬರ್ 3, 2025ರಂದು ಡಿ ಪಿ ಎ ಆರ್ ಇಲಾಖೆಯಿಂದ ಹೊರಡಿಸಲಾದ ಆದೇಶವನ್ನು ರದ್ದುಗೊಳಿಸಿ, 15% ಮೀಸಲಾತಿಗೆ ಅನುಗುಣವಾದ ಪರಿಷ್ಕೃತ ರೋಸ್ಟರ್ ಅಂಕಿಗಳನ್ನು ಬಿಡುಗಡೆ ಮಾಡಬೇಕು.
ಪ್ರಸ್ತುತ ರಾಜ್ಯದ ವಿವಿಧ ಇಲಾಖೆಗಳಲ್ಲಿನ ಸುಮಾರು 56,000 ಖಾಲಿ ಹುದ್ದೆಗಳು ಭರ್ತಿಗಾಗಿ ನಿರೀಕ್ಷೆಯಲ್ಲಿವೆ. ಕಳೆದ ಎರಡು ವರ್ಷಗಳಿಂದ ಆಂತರಿಕ ಒಳ ಮೀಸಲಾತಿ ಸಮಸ್ಯೆ ಬಗೆಹರಿಯದ ಕಾರಣ ನೇಮಕಾತಿ ಪ್ರಕ್ರಿಯೆಗಳು ಸ್ಥಗಿತಗೊಂಡಿದ್ದು, ವಿದ್ಯಾವಂತ ಯುವಕರಲ್ಲಿ ಭಾರೀ ಅಸಮಾಧಾನ ಉಂಟಾಗಿದೆ.
ಆದ್ದರಿಂದ, ರಾಜ್ಯ ಸರ್ಕಾರವು ತಕ್ಷಣ ಕ್ರಮ ಕೈಗೊಂಡು, 15% ಮೀಸಲಾತಿಯ ಆಧಾರದ ಮೇಲೆ ಆಂತರಿಕ ಒಳ ಮೀಸಲಾತಿ ಜಾರಿಗೆ ತರಬೇಕು ಹಾಗೂ ನೇಮಕಾತಿ ಪ್ರಕ್ರಿಯೆಗಳನ್ನು ಶೀಘ್ರ ಪುನರಾರಂಭಿಸಬೇಕು ಎಂದು ನಾವು ಆಗ್ರಹಿಸುತ್ತೇವೆ.
ರಾಜ್ಯದ ಲಕ್ಷಾಂತರ ವಿದ್ಯಾವಂತ ಯುವಕರ ಭವಿಷ್ಯ ಹಿತದೃಷ್ಟಿಯಿಂದ ಈ ವಿಷಯದಲ್ಲಿ ತಕ್ಷಣದ ನಿರ್ಧಾರ ಕೈಗೊಳ್ಳುವಂತೆ ಸರ್ಕಾರವನ್ನು ವಿನಂತಿಸುತ್ತೇವೆ ಎಂದು ಕೆಬಿ ವಾಸು ಅವರು ಪ್ರಕಟಣೆಯಲ್ಲಿ ತಿಳಿಸಿದರು.
ವರದಿ :ವೆಂಕಟಪ್ಪ ಕೆ ಸುಗ್ಗಾಲ್




