ಸಿರುಗುಪ್ಪ : ಮುಖಕ್ಕೆ ಬಣ್ಣ ಹಚ್ಚಿಕೊಂಡು ಸಂಗೀತ ನೀಡುವ ಸಲಕರಣೆಗಳನ್ನು ಹಾಕಿಕೊಂಡು ವಿವಿಧ ಪಾತ್ರಗಳಿಂದ ಜನಮನ ರಂಜಿಸುವ ಮೂಲಕ ಮಹಾ ಕಾವ್ಯಗಳಾದ ರಾಮಾಯಣ, ಮಹಾಭಾರತದಲ್ಲಿ ಬರುವ ಸಾರಾಂಶವನ್ನು ನೀಡುವ ಹಗಲುವೇಷದಾರಿಗಳು ಕಾವ್ಯಗಳ ಸಾರಾಂಶವನ್ನು ಇಂದಿಗೂ ಜೀವಂತವಾಗಿರಿಸಿದ್ದಾರೆಂಬುದು ಪ್ರೇಕ್ಷಕರ ಅಭಿಮತವಾಗಿದೆ.
ಇಂದಿನ ಆಧುನಿಕ ಭರಾಟೆಯಲ್ಲೂ ಕೆಲವು ಕಲಾ ತಂಡಗಳು ಹಲವಾರು ವರ್ಷಗಳ ಹಿಂದೆಯೇ ಗತಿಸಿ ಹೋದ ರಾಮಾಯಣ, ಮಹಾಭಾರತದ ಕಾಲದಲ್ಲಿನ ಘಟನೆಗಳನ್ನು ಕಣ್ಣ ಮುಂದೆಯೇ ಕಟ್ಟುವಂತೆ ವಿವಿಧ ಪಾತ್ರಗಳಿಂದ ದೃಶ್ಯವನ್ನು ನೀಡುವ ಇವರು ಒಳಿತು ಕೆಡಕುಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ.
ಮರೆಮಾಚುತ್ತಿರುವ ಜಾನಪದ ಸಾಹಿತ್ಯ, ಮಹಾ ಕಾವ್ಯಗಳ ಸಂಸ್ಕೃತಿಯನ್ನು ಉಳಿಸಿಕೊಂಡು ಬರುತ್ತಿರುವ ಇವರು ವಂಶ ಪಾರಂಪರ್ಯವಾಗಿ ಕಲೆಯೇ ತಮ್ಮ ಜೀವನದ ಆಧಾಯದ ಮೂಲವನ್ನಾಗಿಸಿಕೊಂಡಿದ್ದಾರೆ.

ಕಲೆಗೆ ಕಲಾಸಕ್ತಿಯುಳ್ಳ ಪ್ರೇಕ್ಷಕರ ಅಭಿಮಾನದ ಹರ್ಷೋದ್ಘಾರ ಮತ್ತು ಗೌರವ ಸಮರ್ಪಣೆಯು ದೊರೆಯುತ್ತದೆ.
ನಂ.64 ಹಳೆಕೋಟೆ ಗ್ರಾಮದ ಹಗಲು ವೇಷಧಾರಿಗಳ ಕಲಾ ತಂಡದ ಅಧ್ಯಕ್ಷ ಅಂಬಣ್ಣ ಮಾತನಾಡಿ ಎರಡು ವರ್ಷಕೊಮ್ಮೆ ಪ್ರತಿಯೊಂದು ಹಳ್ಳಿ ಪಟ್ಟಣಗಳಲ್ಲಿ ಹಾಡಿ ಕುಣಿದುಕೊಂಡು ಬರುವವರು ನಾವು.
ರಾಮಲಕ್ಷ್ಮಣ, ಭೀಮಾ ಆಂಜನೇಯ ಯುದ್ದ, ಮೋಹಿನಿ ಭಸ್ಮಾಸುರ, ಸುಂಧೋಪ ಸುಂದರ ಸಿಂಧೂರ ಲಕ್ಷ್ಮಣದಂತಹ ಪಾತ್ರಗಳನ್ನು ಎಂಟು ದಿನಗಳ ಕಾಲ ಮಾಡುತ್ತಾ ಬರುತ್ತೇವೆ. ನಮ್ಮ ಕಲೆಯನ್ನು ಮೆಚ್ಚಿ ಜನರು ನೀಡುವ ಕಾಣಿಕೆಗಳೇ ನಮ್ಮ ಜೀವನಾಧಾರವೆಂದು ತಿಳಿಸಿದರು.
ನಗರ ಮತ್ತು ಗ್ರಾಮೀಣ ಭಾಗಗಳಲ್ಲಿ ಅಲೆದಾಡುತ್ತಾ ರಾಮಾಯಣ, ಮಹಾಭಾರತದಂತಹ ಮಹಾಕಾವ್ಯಗಳಲ್ಲಿನ ಸಾರಾಂಶವನ್ನು ಕಂಠದಿಂದ ಕಂಠದ ಮೂಲಕ ಹಾಡುತ್ತಾ ನೃತ್ಯದಿಂದಲೂ ಇಂದಿಗೂ ಜೀವಂತವಾಗಿಸುತ್ತಿರುವ ಇವರ ಕಲೆಗೆ ನಾವು ಕೊಟ್ಟಷ್ಟು ಕಾಣಿಕೆ ತೆಗೆದುಕೊಳ್ಳುತ್ತಾರೆ.
ಸರ್ಕಾರವು ಸಹ ಇವರಿಗೆ ನೆರವಾಗಬೇಕು ಎಂದು ಅಂಗಡಿಗಳ ಮಾಲಿಕರು ತಿಳಿಸಿದರು.
ವರದಿ : ಶ್ರೀನಿವಾಸ ನಾಯ್ಕ




