ವೆಕಟೇಶ್ವರನ ದರ್ಶನಕ್ಕೆ ಬರುವ ಲಕ್ಷಾಂತರ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ (TTD) ಮತ್ತೊಂದು ಸಂತಸದ ಸುದ್ದಿ ನೀಡಿದೆ.
ತಿರುಮಲದಲ್ಲಿ ಈಗಾಗಲೇ ಇರುವ ಅನ್ನಪ್ರಸಾದ ಕೇಂದ್ರಗಳ ಜೊತೆಗೆ, ಶೀಘ್ರದಲ್ಲೇ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ಮತ್ತೊಂದು ಬೃಹತ್ ಊಟದ ಹಾಲ್ತ್ತು ಅಡುಗೆಮನೆ ಭಕ್ತರ ಸೇವೆಗೆ ಲಭ್ಯವಾಗಲಿದೆ.
ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಆಶಯದಂತೆ, ಅನ್ನಪ್ರಸಾದ ವಿತರಣೆಯಲ್ಲಿ ಸಂಪೂರ್ಣ ಯಾಂತ್ರೀಕರಣ ಮತ್ತು ಆಧುನಿಕತೆಯನ್ನು ತರಲು ಟಿಟಿಡಿ ಮುಂದಾಗಿದೆ.
ಈ ಮಹತ್ವಾಕಾಂಕ್ಷೆಯ ಯೋಜನೆಗೆ ಭಾರತದ ಪ್ರತಿಷ್ಠಿತ ರಿಲಯನ್ಸ್ ಸಂಸ್ಥೆಯು ಸುಮಾರು 120 ಕೋಟಿ ರೂಪಾಯಿಗಳ ಬೃಹತ್ ದೇಣಿಗೆಯನ್ನು ಘೋಷಿಸಿದ್ದು, ಈ ಮೂಲಕ ತಿರುಮಲದ ಅನ್ನದಾನ ಸೇವೆ ಹೊಸ ರೂಪ ಪಡೆಯಲಿದೆ.
ಕಳೆದ ವರ್ಷ ತಿರುಮಲಕ್ಕೆ ಭೇಟಿ ನೀಡಿದ್ದ ರಿಲಯನ್ಸ್ ಅಧ್ಯಕ್ಷ ಮುಖೇಶ್ ಅಂಬಾನಿ ಅವರು ಭಕ್ತರ ಅನುಕೂಲಕ್ಕಾಗಿ ಈ ದೇಣಿಗೆಯನ್ನು ನೀಡುವ ಭರವಸೆ ನೀಡಿದ್ದರು.
ಅದರಂತೆ ಈಗ 120 ಕೋಟಿ ವೆಚ್ಚದಲ್ಲಿ ತಂತ್ರಜ್ಞಾನ ಆಧಾರಿತ ‘ಮೆಡ್ರಾನ್’ ಅಡುಗೆಮನೆ ಮತ್ತು ಅನ್ನಪ್ರಸಾದ ಕೇಂದ್ರದ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗಲಿದೆ. ಪ್ರಸ್ತುತ ಕಾರ್ಯಾಚರಿಸುತ್ತಿರುವ ತಾರಿಗೊಂಡ ವೆಂಕಮಾಂಬ ಅನ್ನಪ್ರಸಾದ ಕೇಂದ್ರವನ್ನು ಕೂಡ ಆಧುನೀಕರಿಸಲಾಗುತ್ತಿದ್ದು, ಏಕಕಾಲದಲ್ಲಿ 4 ಸಾವಿರ ಭಕ್ತರಿಗೆ ಆಸನ ವ್ಯವಸ್ಥೆ ಕಲ್ಪಿಸಲು ಟಿಟಿಡಿ ಸಿದ್ಧತೆ ನಡೆಸುತ್ತಿದೆ. ಆಧುನಿಕ ಅಡುಗೆಮನೆಯು ಆಹಾರ ತಯಾರಿಕೆಯಲ್ಲಿ ಗರಿಷ್ಠ ಶುಚಿತ್ವ ಮತ್ತು ಗುಣಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡಲಿದೆ.
ಇತ್ತೀಚೆಗೆ ನಡೆದ ಟಿಟಿಡಿ ಟ್ರಸ್ಟಿಗಳ ಮಂಡಳಿ ಸಭೆಯಲ್ಲಿ ಈ ಯೋಜನೆಗೆ ಅಧಿಕೃತ ಅನುಮೋದನೆ ದೊರೆತಿದ್ದು, ಶೀಘ್ರದಲ್ಲೇ ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಈ ಹೊಸ ಕೇಂದ್ರದ ಸ್ಥಾಪನೆಯಿಂದಾಗಿ ತಿರುಮಲಕ್ಕೆ ಬರುವ ಭಕ್ತರು ಸಾಲಿನಲ್ಲಿ ಹೆಚ್ಚು ಹೊತ್ತು ಕಾಯುವ ಅಗತ್ಯವಿಲ್ಲದೆ, ಅತ್ಯಂತ ಸುಸಜ್ಜಿತ ಪರಿಸರದಲ್ಲಿ ಪ್ರಸಾದವನ್ನು ಸ್ವೀಕರಿಸಬಹುದಾಗಿದೆ.




