ಜಮ್ಶೆಡ್ಪುರ : ಮದುವೆಯ ಸಂಭ್ರಮದಲ್ಲಿದ್ದ ಮನೆಯಲ್ಲಿ ರಸಗುಲ್ಲಾ ಸೇವನೆಯು ವ್ಯಕ್ತಿಯೊಬ್ಬರ ಪಾಲಿಗೆ ಮೃತ್ಯುವಾಗಿ ಪರಿಣಮಿಸಿದ ಘಟನೆ ಜಾರ್ಖಂಡ್ನ ಜಮ್ಶೆಡ್ಪುರ ಸಮೀಪದ ಮಲಿಯಂತ ಗ್ರಾಮದಲ್ಲಿ ಶುಕ್ರವಾರ (ಮಾ.13) ನಡೆದಿದೆ.
ಲಲಿತ್ ಸಿಂಗ್ (41) ಮೃತ ದುರ್ದೈವಿ. ತಡರಾತ್ರಿ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಲಲಿತ್ ಸಿಂಗ್ ಕೂಡ ಪಾಲ್ಗೊಂಡಿದ್ದರು.
ಊಟದ ಸಮಯದಲ್ಲಿ ರಸಗುಲ್ಲಾ ತಿನ್ನುತ್ತಿದ್ದಾಗ, ಅದು ಅವರ ಗಂಟಲಿನಲ್ಲಿ ಸಿಲುಕಿಕೊಂಡಿದೆ. ಇದರಿಂದಾಗಿ ಅವರಿಗೆ ತಕ್ಷಣವೇ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ.
ಸಿಂಗ್ ಅವರು ಉಸಿರಾಡಲು ಕಷ್ಟಪಡುತ್ತಿರುವುದನ್ನು ಕಂಡು ಅಲ್ಲಿದ್ದ ಅತಿಥಿಗಳು ಮತ್ತು ಸಂಬಂಧಿಕರು ಅವರ ಗಂಟಲಿನಲ್ಲಿ ಸಿಲುಕಿದ್ದ ರಸಗುಲ್ಲಾವನ್ನು ಹೊರತೆಗೆಯಲು ಪ್ರಯತ್ನಿಸಿದ್ದಾರೆ ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಅವರ ಸ್ಥಿತಿ ಗಂಭೀರವಾಗುತ್ತಿದ್ದಂತೆ ತಕ್ಷಣ ಅವರನ್ನು ಜಮ್ಶೆಡ್ಪುರದ ಎಂಜಿಎಂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಪರಿಶೀಲಿಸಿದ ವೈದ್ಯರು ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ಸಂಭ್ರಮದ ಮದುವೆ ಮನೆಯು ಈ ಹಠಾತ್ ಸಾವಿನಿಂದಾಗಿ ಸ್ಮಶಾನ ಮೌನಕ್ಕೆ ಶರಣಾಗಿದೆ. ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಗ್ರಾಮವೇ ದುಃಖದಲ್ಲಿ ಮುಳುಗಿದೆ.




