ಹುಬ್ಬಳ್ಳಿ: ರೀಲ್ಸ್ ಹುಚ್ಚಾಟಕ್ಕೆ ಬಿದ್ದು ಬಾಲಕ ಪ್ರಾಣ ಕಳೆದುಕೊಂಡಿದ್ದಾನೆ. ಆಡಿ ಕಾರ್ ಮತ್ತು ಬೈಕ್ ನಲ್ಲಿ ರೀಲ್ಸ್ ಮಾಡಲು ಹೋಗಿದ್ದಾಗ ಘಟನೆ ನಡೆದಿದೆ.
ಬಿಜೆಪಿ ಮುಖಂಡನ ಪುತ್ರ ನಮಿಷ್ ಸಂಗಳದ(15) ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ಹುಬ್ಬಳ್ಳಿಯ ಲಕ್ಷ್ಮೀ ನಗರದ ವೀರೇಶ್ ಸಂಗಳದ ಅವರ ಪುತ್ರ ನಮಿಷ್ ಸ್ಟಂಟ್ ಮತ್ತು ಕ್ರ್ಯಾಷ್ ರೀಲ್ಸ್ ಮಾಡುತ್ತಿದ್ದಾಗ ಅಪಘಾತವಾಗಿ ಸಾವನ್ನಪ್ಪಿದ್ದಾರೆ.
ಮೈಸೂರಿನಲ್ಲಿ ಒಂಬತ್ತನೇ ತರಗತಿ ಓದುತ್ತಿದ್ದ ನಮಿಷ್ ಯುಗಾದಿ ಹಬ್ಬಕ್ಕೆ ಊರಿಗೆ ಬಂದಾಗ ರೀಲ್ಸ್ ಮಾಡಲು ತೆರಳಿದ್ದರು. ವೇಗವಾಗಿ ಆಡಿ ಕಾರ್ ಓಡಿಸುವ ಬಗ್ಗೆ ರೀಲ್ಸ್ ಮಾಡಲು ತೆರಳಿದ್ದು, ಅತಿ ವೇಗವಾಗಿ ಬಂದು ಬೈಕ್ ನಲ್ಲಿದ್ದ ನಮಿಷ್ ಗೆ ಕಾರ್ ಡಿಕ್ಕಿ ಹೊಡೆದಿದೆ.
ಬೈಕ್ ನಲ್ಲಿದ್ದ ನಮಿಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಹುಬ್ಬಳ್ಳಿ -ಧಾರವಾಡ ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತ ಮಾಡಿದ ಬಾಲಕನನ್ನು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




