ಭಾಲ್ಕಿ : ಅವತಾ ರ ಪುರುಷ ಶ್ರೀ ಸಿದ್ದಾರೂಢರ ಮಹಿಮೆ ಅಪಾರವಾಗಿದೆ ಎಂದು ಚಿದಂಬರಾಶ್ರಮ ಶ್ರೀ ಸಿದ್ದಾರೂಢ ಮಠದ ಡಾ| ಶಿವಕುಮಾರ ಮಹಾಸ್ವಾಮಿಗಳು ಪ್ರತಿಪಾದಿಸಿದರು.

ತಾಲೂಕಿನ ಚಳಕಾಪೂರ ಗ್ರಾಮದ ಬ್ರಹ್ಮವಿದ್ಯಾಶ್ರಮ ಶ್ರೀ ಸಿದ್ಧಾರೂಢ ಮಠದಲ್ಲಿ ಸದ್ಗುರು ಶ್ರೀ ಸಿದ್ದಾರೂಢರ 190ನೇ ಜಯಂತಿ ಮಹೋತ್ಸವ ನಿಮಿತ್ಯ ಶುಕ್ರವಾರ ಆಯೋಜಿಸಿದ್ದ ಕರಪತ್ರ ಬಿಡುಗಡೆ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು. ಅವತಾರ ಪುರುಷ ಸದ್ಗುರು ಶ್ರೀ ಸಿದ್ದಾರೂಢರು ಶರಣರ ನಾಡು ಬೀದರಿನ ಚಳಕಾಪೂರದಲ್ಲಿ ರಾಮನವಮಿಯಂದು ಜನ್ಮ ತಳಿದು, ಬಾಲ್ಯದಲ್ಲಿಯೇ ಅನಂತ ಪವಾಡ ಮಾಡಿ, ಭಕ್ತರ ಇಷ್ಟಾರ್ಥ ಸಿದ್ದಿಗಳನ್ನು ನೆರವೇರಿಸಿದ್ದಾರೆ. ಇಂತಹ ಮಹಾಪುರುಷರ ಜಾತ್ರಾ ಮಹೋತ್ಸವ ನಿಮಿತ್ಯ ಮಾ.21 ರಿಂದ 27 ರ ವರೆಗೆ ಜ್ಞಾನ ದಾಸೋಹ, ಅನ್ನ ದಾಸೋಹ ನಡೆಸಲಾಗುವುದು.
ನಾಡಿನ ಮಠಾಧೀಶರು, ಜ್ಞಾನಿಗಳು ಪ್ರವಚನ ನೀಡಲಿದ್ದಾರೆ, ಕರ್ನಾಟಕ, ಮಹಾರಾಷ್ಟç, ತೆಲಂಗಾಣ, ಗೋವಾ, ಆಂದ್ರಪ್ರದೇಶ ಸೇರಿದಂತೆ ಎಲ್ಲಾ ರಾಜ್ಯದ ಭಕ್ತಾದಿಗಳು ಸಿದ್ಧಾರೂಢರ ಜನ್ಮಸ್ಥಳದಲ್ಲಿ ನಡೆಯುವ ಜಾತ್ರೆಗೆ ಆಗಮಿಸಿ ಪುನಿತರಾಗುವರು ಎಂದು ಹೇಳಿದರು. ಶ್ರೀಮಠದ ಶ್ರೀ ಶಂಕರಾನಂದ ಮಹಾಸ್ವಾಮಿಗಳು ಮಾತನಾಡಿ, ಸದ್ಗುರು ಶ್ರೀ ಸಿದ್ಧಾರೂಢರ ಜಾತ್ರಾ ಮಹೋತ್ಸವ ನಿಮಿತ್ಯ ಪ್ರತಿನಿತ್ಯ ಸದ್ಗುರು ಶ್ರೀ ಸಿದ್ಧಾರೂಢರ ಗ್ರಂಥಪಾರಾಯಣ, ತುಲಾಭಾರ ಸೇವೆ, ಪಲ್ಲಕ್ಕಿ ಉತ್ಸವ ಸೇರಿದಂತೆ ಕೊನೆಯ ದಿನ ರಾಮನವಮಿಯಂದು ಪೂಜ್ಯರ ತೊಟ್ಟಿಲು ಕಾರ್ಯಕ್ರಮ ಮತ್ತು ರಥೋತ್ಸವ ನಡೆಯುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿನಾಯಕ ಸಾಧಕರು, ಉಪನ್ಯಾಸಕ ನರೇಂದ್ರ ಪಾಟೀಲ, ಗ್ರಾ.ಪಂ. ಅಧ್ಯಕ್ಷ ಶ್ರೀಮಂತ ಕಲ್ಲೂರೆ ಉಪಸ್ಥಿತರಿದ್ದರು.
ವರದಿ : ಸಂತೋಷ ಬಿಜಿ ಪಾಟೀಲ್




