ಸಿರುಗುಪ್ಪ : ನಗರದ ಆದೋನಿ ರಸ್ತೆಯಲ್ಲಿರುವ ಶ್ರೀ ತಾಯಮ್ಮ ದೇವಿ 43ನೇ ಜಾತ್ರಾ ಮಹೋತ್ಸವವು ಮಾ.19 ಗುರುವಾರದಂದು ಅದ್ದೂರಿಯಾಗಿ ಜರುಗಿತು.
ಪ್ರತಿವರ್ಷ ಯುಗಾದಿ ಪಾಡ್ಯದಂದೇ ಜಾತ್ರೆ ನಡೆಯಲ್ಲಿದ್ದು ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಅಭಿಷೇಕ, ಕುಂಕುಮಾರ್ಚನೆ, ವಿವಿಧ ಫಲಪುಷ್ಪ, ಆಭರಣಗಳು ಹಾಗೂ ವೀಳ್ಯದೆಲೆಯಿಂದ ಅಲಂಕರಿಸಿ ಮಹಾಮಂಗಳಾರತಿಗೈದು ವಿಶೇಷ ಪೂಜೆ ಸಲ್ಲಿಸಲಾಯಿತು.

ಸಾಯಂಕಾಲ ಭಕ್ತರು ಬೃಹತ್ ಗಾತ್ರದ ಹೂಮಾಲೆಯನ್ನು ಮೆರವಣಿಗೆಯ ಮೂಲಕ ತಂದು ರಥಕ್ಕೆ ಸಮರ್ಪಿಸಿದರು. ಶ್ರೀ ತಾಯಮ್ಮ ದೇವಿ ದೇವಸ್ಥಾನ ಆಡಳಿತ ಮಂಡಳಿಯಿಂದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ರಥದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿಗೈದು ರಥೋತ್ಸವವಕ್ಕೆ ಚಾಲನೆ ನೀಡಲಾಯಿತು.

ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ಹಳೇಕೋಟೆ, ಅರಳಿಗನೂರು, ಪೊಪ್ಪನಾಳ್, ರಾರಾವಿ, ಬಗ್ಗೂರು, ಇಬ್ರಾಹಿಂಪುರ, ಬಾಗೇವಾಡಿ, ಚಾಣಕನೂರು, ಗಜಗಿನಹಾಳ್, ಕರ್ಚಿಗನೂರು, ದೇಶನೂರು, ದೇವಲಾಪುರ, ಸೇರಿದಂತೆ ಇನ್ನಿತರ ಗ್ರಾಮದ ಭಕ್ತಾದಿಗಳು ಆಗಮಿಸಿ ಹರಕೆಯನ್ನು ಸಲ್ಲಿಸಿ ರಥಕ್ಕೆ ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿದರು.
ಜಾತ್ರೆಗೆ ಬಂದಂತಹ ಭಕ್ತರಿಗೆ ದಾನಿಗಳಿಂದ ಕುಡಿಯುವ ನೀರು ಮತ್ತು ಮಜ್ಜಿಗೆ ವಿತರಣೆ ಮಾಡಲಾಯಿತು.
ವರದಿ : ಶ್ರೀನಿವಾಸ ನಾಯ್ಕ




