ಸಿರುಗುಪ್ಪ : ನಗರದ ತಾಲೂಕು ಕಛೇರಿಯಲ್ಲಿ ತಾಲೂಕಾಡಳಿತ ಹಾಗೂ ಪದ್ಮಶಾಲಿ, ಸ್ವಕುಳಶಾಲಿ, ಕುರುಹಿನಶೆಟ್ಟಿ, ತೊಗಟಿವೀರ, ದೇವಾಂಗ ಮತ್ತು ನೇಕಾರ ಸಮುದಾಯಗಳ ಒಕ್ಕೂಟದ ವತಿಯಿಂದ ನಡೆದ ದೇವರ ದಾಸಿಮಯ್ಯ ಜಯಂತ್ಯೋತ್ಸವವನ್ನು ಶಿರಸ್ಥೆದಾರ ಸಿದ್ದಾರ್ಥ್ ಕಾರಂಜಿಯವರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ದೇವರ ದಾಸಿಮಯ್ಯನವರು ಉತ್ತಮ ನಡತೆ, ನೀತಿ, ನ್ಯಾಯ, ಧರ್ಮ ಹಾಗೂ ಜೀವನದ ಮೂಲ ಉದ್ದೇಶವನ್ನು ತಮ್ಮ ವಚನಗಳಲ್ಲಿ ಉಲ್ಲೇಸುತ್ತಾ ನೇಯ್ಗೆ ಕಾಯಕದ ಮೂಲಕ ಶಿವನನ್ನು ಒಲಿಸಿಕೊಂಡು ದೇವರ ದಾಸಿಮಯ್ಯನೆಂದು ಪ್ರಖ್ಯಾತಿಯಾಗಿದ್ದಾರೆ.
ಅವರಂತೆ ಸಮಾಜ ಹಿತಚಿಂತನೆಯ ಮಾರ್ಗದಲ್ಲಿ ನಮ್ಮೆಲ್ಲರಿಗೆ ಆದರ್ಶರಾಗಿರುವ ಸಂತರು, ದಾರ್ಶನಿಕರು, ಶರಣರ ತತ್ವಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನವನ್ನು ನಡೆಸೋಣವೆಂದು ತಿಳಿಸಿದರು.
ಪದ್ಮಶಾಲಿ, ಸ್ವಕುಳಶಾಲಿ, ಕುರುಹಿನಶೆಟ್ಟಿ, ತೊಗಟಿವೀರ, ದೇವಾಂಗ ಮತ್ತು ನೇಕಾರ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಬಿ.ಸತ್ಯನಾರಾಯಣ ಅವರು ಮಾತನಾಡಿ ಚೈತ್ರಶುದ್ದ ಪಂಚಮಿಯಂದು ಯಾದಗಿರಿ ಜಿಲ್ಲೆಯ ಮುದನೂರು ಗ್ರಾಮದಲ್ಲಿ ಜನಿಸಿದ ದೇವರ ದಾಸಿಮಯ್ಯ ಅವರು ಭಗವಂತನ ಅನುಕರಣೆಯೊಂದಿಗೆ ಶಿವ ಪರಮಾತ್ಮನನ್ನು ಒಲಿಸಿಕೊಂಡಿದ್ದಾರೆ.
176ಕ್ಕೂ ಅಧಿಕ ವಚನಗಳನ್ನು ಬರೆದಿರುವ ಅವರ ಅಂಕಿತ ನಾಮ ರಾಮನಾಥ ಎಂಬುದಾಗಿದೆ. ನೇಯ್ಗೆ ವೃತ್ತಿಯ ಮೂಲಕ ಹಲವು ಜೀವನದ ಸಾರಾಂಶವನ್ನು ತಿಳಿಸಿದ ಇವರು ನಮ್ಮ ನೇಯ್ಗೆ ಸಮುದಾಯಗಳ ಆರಾಧ್ಯ ದೇವ ಪುರುಷರಾಗಿದ್ದಾರೆಂದು ತಿಳಿಸಿದರು.
ಇದೇ ವೇಳೆ ನೇಯ್ಗೆ ಒಕ್ಕೂಟ ಸಮುದಾಯಗಳ ಗೌರವಾಧ್ಯಕ್ಷ ಶಿವಶಂಕರ ರೋಖಡೆ, ಮುಖಂಡರುಗಳಾದ ಶ್ರೀರಾಮುಲು, ಶರಣಪ್ಪ, ರಮೇಶ, ಗೋಪಾಲಕೃಷ್ಣ, ವೆಂಕಟೇಶ, ರಾಧಾದೇವಿ, ಲಕ್ಷ್ಮಿ ಸೇರಿದಂತೆ ಇನ್ನಿತರರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




