ಸಿರುಗುಪ್ಪ : ತಾಲೂಕಿನ ಸಿರಿಗೇರಿ ಗ್ರಾಮದ ಆರಾಧ್ಯ ದೈವ ಶ್ರೀ ನಾಗನಾಥೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವವು ಮಾ.25 ಬುಧವಾರದಂದು ಅದ್ದೂರಿಯಾಗಿ ಜರುಗಿತು.
ಜಾತ್ರಾ ಮಹೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಅಭಿಷೇಕ, ವಿವಿಧ ಫಲಪುಷ್ಪ, ಆಭರಣಗಳು ಹಾಗೂ ವೀಳ್ಯದೆಲೆಯಿಂದ ಅಲಂಕರಿಸಿ ಮಹಾಮಂಗಳಾರತಿಗೈದು ವಿಶೇಷ ಪೂಜೆ ಸಲ್ಲಿಸಲಾಯಿತು.
ಸಾಯಂಕಾಲ ಭಕ್ತರು ಬೃಹತ್ ಗಾತ್ರದ ಹೂಮಾಲೆಯನ್ನು ಮೆರವಣಿಗೆಯ ಮೂಲಕ ತಂದು ರಥಕ್ಕೆ ಸಮರ್ಪಿಸಿದರು.
ಹಗಲುವೇಷ ಕಲಾತಂಡದವರಿಂದ ಶ್ರೀ ರಾಮ, ಶ್ರೀ ಆಂಜನೇಯ, ರಾಕ್ಷಸಿ, ಶ್ರೀ ವಾಲ್ಮೀಕಿ, ಸೇರಿದಂತೆ ಇನ್ನಿತರ ವೇಷಗಳ ಧರಿಸಿ ನೃತ್ಯೆಗೈಯುತ್ತಾ ಜಾತ್ರೆಗೆ ಸೇರಿದ ಜನಸಮೂಹವನ್ನು ಆಕರ್ಷಿಸಿದರು.
ಸಾಯಂಕಾಲ ಶ್ರೀನಾಗನಾಥೇಶ್ವರ ದೇವಸ್ಥಾನ ಆಡಳಿತ ಮಂಡಳಿಯಿಂದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ರಥದಲ್ಲಿರಿಸಿ ವಿಶೇಷ ಪೂಜೆ ಸಲ್ಲಿಸಿ ಮಹಾ ಮಂಗಳಾರತಿಗೈದು ರಥೋತ್ಸವವಕ್ಕೆ ಚಾಲನೆ ನೀಡಲಾಯಿತು.
ವಿವಿಧ ವಾದ್ಯಗಳೊಂದಿಗೆ ದೇವಸ್ಥಾನದ ತೇರು ಮನೆಯಿಂದ ಎದುರು ಬಸವಣ್ಣ ದೇವಸ್ಥಾನದವರೆಗೆ ರಥವನ್ನು ಭಕ್ತರು ಎಳೆದು ಪೂಜೆ ಸಲ್ಲಿಸಿ ಮಹಾಮಂಗಳಾರತಿ ಮಾಡಿ ಮತ್ತೆ ದೇವಸ್ಥಾನದ ತೇರುಮನೆ ಕಡೆ ಸುವ್ಯವಸ್ಥಿತವಾಗಿ ಎಳೆತಂದರು.
ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಾದ ದಾಸಾಪುರ, ಗುಂಡಿಗನೂರು, ಶಾನವಾಸಪುರ, ನಡವಿ, ತೆಕ್ಕಲಕೋಟೆ, ಉಡೇಗೋಳ, ನಿಟ್ಟೂರು, ಹಾವಿನಾಳ್, ಮುದ್ದಟನೂರು, ಕೊಂಚಿಗೇರಿ, ಕ್ಯಾದಿಗೆಹಾಳ್, ಗೆಣಿಕೆಹಾಳ್, ಮಣ್ಣೂರು, ಎಮ್.ಸೂಗೂರ್, ದರೂರು, ಕರೂರು, ಬೈರಾಪುರ ಸೇರಿದಂತೆ ಇನ್ನಿತರ ಗ್ರಾಮದ ಭಕ್ತಾದಿಗಳು ಆಗಮಿಸಿ ಹರಕೆಯನ್ನು ಸಲ್ಲಿಸಿ ರಥಕ್ಕೆ ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿದರು.
ರಾಮನವಮಿಯಂದು ಸಾಯಂಕಾಲ ಸಿರಿಗೇರಮ್ಮ ದೇವಿ ರಥೋತ್ಸವವು ಜರುಗುವುದಾಗಿ ಗ್ರಾಮಸ್ಥರು ತಿಳಿಸಿದರು.
ವರದಿ : ಶ್ರೀನಿವಾಸ ನಾಯ್ಕ




