ಅಥಣಿ : ಪಟ್ಟಣದಲ್ಲಿ ಭರವಸೆ ಬೆಳಕು ಫೌಂಡೇಶನ್ ವತಿಯಿಂದ ನಡೆಯಲಿರುವ ದ್ವಿತೀಯ ವರ್ಷದ ವಾರ್ಷಿಕೋತ್ಸವ ಹಾಗೂ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕುರಿತು ಇಂದು ಪ್ರೆಸ್ ಮೀಟ್ ನಡೆಸಿ ಕಾರ್ಯಕ್ರಮದ ಉದ್ದೇಶ ಹಾಗೂ ವಿಶೇಷತೆಗಳ ಬಗ್ಗೆ ವಿವರಿಸಲಾಯಿತು. ಈ ಕಾರ್ಯಕ್ರಮವು ಇದೇ ತಿಂಗಳ 31ರಂದು ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸುಕ್ಷೇತ್ರ ಶ್ರೀ ಗಚ್ಚಿನ ಮಠ, ಅಥಣಿಯಲ್ಲಿ ನಡೆಯಲಿದೆ. ಈ ಸಂದರ್ಭದಲ್ಲಿ ಮುತ್ತೈದೆಯರಿಗೆ ಉಡಿ ತುಂಬುವ ವಿಶೇಷ ಕಾರ್ಯಕ್ರಮವೂ ಆಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ದಿವ್ಯ ಸಾನಿಧ್ಯವಾಗಿ ಮ ನೀ ಪ್ರ ಸ್ವಾಮಿಜಿಗಳು ಭಾಗವಹಿಸಲಿದ್ದು, ಉದ್ಘಾಟಕರಾಗಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಗೌರವಾನ್ವಿತ ಅಧ್ಯಕ್ಷರಾದ ಡಾಕ್ಟರ್ ನಾಗಲಕ್ಷ್ಮಿ ಚೌದರಿ ಅವರು ಆಗಮಿಸಲಿದ್ದಾರೆ. ಇದೇ ವೇಳೆ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿ ಜನಪ್ರಿಯ ಶಾಸಕರಾದ ಲಕ್ಷ್ಮಣ ಸವದಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಜೊತೆಗೆ ವಿವಿಧ ಇಲಾಖೆಗಳ ಆಡಳಿತಾಧಿಕಾರಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರೆಸ್ ಮೀಟ್ನಲ್ಲಿ ಭರವಸೆ ಬೆಳಕು ಫೌಂಡೇಶನ್ ಸಂಸ್ಥಾಪಕಿ ಹಾಗೂ ಅಧ್ಯಕ್ಷರಾದ ಶ್ರೀಮತಿ ರೂಪಾ ಕಾಂಬಳೆ, ಕಾರ್ಯದರ್ಶಿ ಶ್ರೀಮತಿ ಕಾದಂಬರಿ ಅಕ್ಕೋಳ, ಕರುನಾಡ ಕಾರ್ಮಿಕರ ವೇದಿಕೆ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ರಾಣಿ ಮೋಹನ್ ಬಡಿಗೇರ, ಸಮಾಜಸೇವಕಿ ಹಾಗೂ ಕಾಂಗ್ರೆಸ್ ಮಹಿಳಾ ಮುಖಂಡೆ ಶ್ರೀಮತಿ ಸವಿತಾ ಕಾಂಬಳೆ, ಸದಸ್ಯೆ ಶ್ರೀಮತಿ ವೈಶಾಲಿ ಮೇಲ್ಗಡೆ, ಹ್ಯೂಮನ್ ರೈಟ್ಸ್ ತಾಲೂಕು ಅಧ್ಯಕ್ಷೆ ಶ್ರೀಮತಿ ಗೀತಾ ಮಡ್ಡಿ ಹಾಗೂ ಡಾ. ಭಾರತಿ ಬಿಜಾಪೂರೆ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಮೂಲಕ ಮಹಿಳೆಯರ ಸಬಲೀಕರಣ, ಸಮಾಜದಲ್ಲಿ ಅವರ ಪಾತ್ರದ ಮಹತ್ವ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿದ್ದು, ಎಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಯೋಜಕರು ಮನವಿ ಮಾಡಿಕೊಂಡಿದ್ದಾರೆ.
ವರದಿ :ಅಜಯ ಕಾಂಬಳೆ




