ಚೇಳೂರು: ತಾಲೂಕಿನ ಚಿಲಕಲನೇರ್ಪು ಗ್ರಾಮದಲ್ಲಿ ಮಂಗಳವಾರ ಶ್ರೀ ವೀರಾಂಜನೇಯಸ್ವಾಮಿ ದೇವರ ರಥೋತ್ಸವವು ಅತ್ಯಂತ ಸಡಗರ ಹಾಗೂ ಧಾರ್ಮಿಕ ಶ್ರದ್ಧಾಭಕ್ತಿಯೊಂದಿಗೆ ನೆರವೇರಿತು.
ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿದ ಈ ರಥೋತ್ಸವಕ್ಕೆ ತಾಲೂಕು ಶಿರಸ್ತೇದಾರ ಸತೀಶ್ ಹಾಗೂ ಕಂದಾಯ ನಿರೀಕ್ಷಕ (ಆರ್.ಐ) ಮುನಿರಾಜು ಅವರು ಚಾಲನೆ ನೀಡಿದರು.
ರಥೋತ್ಸವದ ಅಂಗವಾಗಿ ಬೃಹತ್ ರಥವನ್ನು ವಿವಿಧ ಬಗೆಯ ನೈಸರ್ಗಿಕ ಹೂವುಗಳಿಂದ ಅತ್ಯಂತ ಸುಂದರವಾಗಿ ಅಲಂಕರಿಸಲಾಗಿತ್ತು. ಹೂವಿನ ಸಿಂಗಾರದಿಂದ ಕಂಗೊಳಿಸುತ್ತಿದ್ದ ರಥವು ಭಕ್ತರ ಕಣ್ಮನ ಸೆಳೆಯಿತು.
ರಥೋತ್ಸವವು ಬೀದಿಗಳಲ್ಲಿ ಸಾಗುತ್ತಿದ್ದಂತೆ ಭಕ್ತಾದಿಗಳು ಭಕ್ತಿ ಪರವಶರಾಗಿ ಹೂವು, ದವನ ಹಾಗೂ ಬಾಳೆಹಣ್ಣುಗಳನ್ನು ರಥದ ಮೇಲೆ ಎಸೆಯುವ ಮೂಲಕ ತಮ್ಮ ಹರಕೆ ಹಾಗೂ ಭಕ್ತಿಯನ್ನು ಸಮರ್ಪಿಸಿದರು. ರಥದ ಚಕ್ರಕ್ಕೆ ತೆಂಗಿನಕಾಯಿ ಒಡೆದು ಭಕ್ತರು ಮಣಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅರ್ಚಕ ವಿಜಯ್ ಕುಮಾರ್ ಶ್ರೀನಾಥ್ ಭಟ್, ಗ್ರಾಮದ ಶಾಂತಿ, ಸಮೃದ್ಧಿ ಹಾಗೂ ಸಕಲ ಜೀವರಾಶಿಗಳ ಕಲ್ಯಾಣಕ್ಕಾಗಿ ಪ್ರತಿ ವರ್ಷದಂತೆ ಈ ವರ್ಷವೂ ರಥೋತ್ಸವವನ್ನು ಶ್ರದ್ಧಾಭಕ್ತಿಯಿಂದ ಆಚರಿಸಲಾಗುತ್ತಿದೆ. ದೈವದ ಅನುಗ್ರಹ ಎಲ್ಲರ ಮೇಲಿರಲಿ ಎಂದು ಪ್ರಾರ್ಥಿಸಿದರು.

ಉರಿಬಿಸಿಲನ್ನೂ ಲೆಕ್ಕಿಸದೆ ಆಗಮಿಸಿದ್ದ ನೂರಾರು ಭಕ್ತಾದಿಗಳಿಗೆ ಕಮಿಟಿಯ ವತಿಯಿಂದ ತಂಪು ಪಾನಕ, ಮಜ್ಜಿಗೆ ಹಾಗೂ ಹೆಸರುಬೇಳೆ ವಿತರಿಸಲಾಯಿತು. ನಂತರ ಸಾರ್ವಜನಿಕ ಅನ್ನಸಂತರ್ಪಣೆ (ಊಟದ ವ್ಯವಸ್ಥೆ) ಏರ್ಪಡಿಸಲಾಗಿತ್ತು.
ಕೆಂಚರ್ಲಹಳ್ಳಿ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಕ್ತ ಬಂದೋಬಸ್ತ್ ಕಲ್ಪಿಸಿದ್ದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಬಿ. ಶೇಖರ್, ಎ.ಎನ್.ಆರ್. ಅಂಜಿ, ಮಾಜಿ ಅಧ್ಯಕ್ಷರಾದ ಭಾಗ್ಯಮ್ಮ ಜಿ.ಎಸ್. ರಾಮಾಂಜನೇಯ, ಗಿನ್ನಿ ಶ್ರೀನಿವಾಸ್, ಕೆ.ಜಿ. ರಾಮಾಂಜಿ, ಪುರುಷೋತ್ತಮ ರಾವ್, ಅಂಜಿ ಸ್ವಾಮಿ, ಕೆ.ಎನ್. ಸಂಜೀವಪ್ಪ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ವರದಿ : ಯಾರಬ್. ಎಂ




