ಚೇಳೂರು : ಸ್ಥಳೀಯ ನಾಡಕಚೇರಿಯಲ್ಲಿ ಭಾನುವಾರ ಭಗವಾನ್ ಮಹಾವೀರ ಜಯಂತಿಯನ್ನು ಆಚರಿಸದೆ ಅಧಿಕಾರಿಗಳು ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಅಧಿಕಾರಿಗಳ ಈ ನಡೆಯ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಹಸೀಲ್ದಾರ್ ಅವರು ಸಂಬಂಧಪಟ್ಟ ಸಿಬ್ಬಂದಿಗೆ ನೋಟಿಸ್ ನೀಡಲು ಮುಂದಾಗಿದ್ದಾರೆ.
ಸರ್ಕಾರಿ ನಿಯಮದಂತೆ ಸಕಲ ಗೌರವಗಳೊಂದಿಗೆ ಜಯಂತಿ ಆಚರಿಸಬೇಕಿದ್ದರೂ, ನಾಡಕಚೇರಿಯಲ್ಲಿ ಯಾವುದೇ ಸಿದ್ಧತೆ ನಡೆಸಿರಲಿಲ್ಲ. ಈ ಬಗ್ಗೆ ಸ್ಥಳೀಯ ಕಂದಾಯ ನಿರೀಕ್ಷಕ (ಆರ್.ಐ) ಮುನಿರಾಜು ಅವರನ್ನು ಪ್ರಶ್ನಿಸಿದಾಗ,
ತಹಸೀಲ್ದಾರ್ ಅವರು ಗ್ಯಾಸ್ ಏಜೆನ್ಸಿ ಗೋಡೌನ್ ಮೇಲೆ ದಾಳಿ ನಡೆಸಲು ಸೂಚನೆ ನೀಡಿದ್ದಾರೆ, ಆ ಕೆಲಸದಲ್ಲಿ ತೊಡಗಿದ್ದೇವೆ ಎಂಬ ಹಾರಿಕೆ ಉತ್ತರ ನೀಡುವ ಮೂಲಕ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎನ್ನಲಾಗಿದೆ.
ತಹಸೀಲ್ದಾರ್ ಸ್ಪಷ್ಟನೆ: ಘಟನೆ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ಅವರು, ನಾನು ದಾಳಿ ನಡೆಸಲು ಹೇಳಿದ್ದು ನಿಜ, ಆದರೆ ಜಯಂತಿ ಆಚರಿಸಬೇಡಿ ಎಂದು ಯಾರಿಗೂ ಹೇಳಿಲ್ಲ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಸಾರ್ವಜನಿಕರ ಆಕ್ರೋಶ:
ಕರ್ತವ್ಯದ ನೆಪವೊಡ್ಡಿ ಮಹಾಪುರುಷರ ಜಯಂತಿಯನ್ನೇ ಕೈಬಿಡುವುದು ಸರಿಯಲ್ಲ. ದಾಳಿ ನಡೆಸುವ ತುರ್ತು ಕೆಲಸವಿದ್ದರೂ ಕನಿಷ್ಠ ಭಾವಚಿತ್ರಕ್ಕೆ ಗೌರವ ಸಲ್ಲಿಸುವ ಸೌಜನ್ಯವನ್ನು ಅಧಿಕಾರಿಗಳು ತೋರಿಲ್ಲ. ಇದು ಮಹಾಪುರುಷರಿಗೆ ಮಾಡಿದ ಅಪಮಾನ ಎಂದು ಸ್ಥಳೀಯ ಮುಖಂಡರು ಕಿಡಿಕಾರಿದ್ದಾರೆ.
ಜಯಂತಿಗೆ ಹಾಜರಾಗಬೇಡಿ ಎಂದು ನಾನು ಹೇಳಿಲ್ಲ. ಕಾರ್ಯಕ್ರಮಕ್ಕೆ ಗೈರಾದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗುವುದು.
– ಶ್ವೇತ ಬಿಕೆ
ತಹಸೀಲ್ದಾರ್ ಚೇಳೂರು.
ದಾಳಿಯ ನೆಪವೊಡ್ಡಿ ಜಯಂತಿ ಆಚರಿಸದೆ ಇರುವುದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಸಾಕ್ಷಿ. ಇವರ ಮೇಲೆ ಶಿಸ್ತು ಕ್ರಮವಾಗಲಿ.
– ಸಾರ್ವಜನಿಕರು
ವರದಿ :ಯಾರಬ್. ಎಂ.




