ನವದೆಹಲಿ: ಖ್ಯಾತ ಚಿತ್ರಕಲಾವಿದ ರಾಜಾ ರವಿವರ್ಮ ಅವರ ಕುಂಚದಲ್ಲಿ ಅರಳಿದ ಅಮೂಲ್ಯ ಕಲಾಕೃತಿಯೊಂದುಈಗ ವಿಶ್ವಮಟ್ಟದಲ್ಲಿ ಹೊಸ ದಾಖಲೆ ಬರೆದಿದೆ.
ಮುಂಬೈನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಅವರ ‘ಯಶೋದಾ ಮತ್ತು ಕೃಷ್ಣ ಎಂಬ ತೈಲಚಿತ್ರ ಬರೋಬ್ಬರಿ 167.2 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಭಾರತೀಯ ಕಲಾ ಲೋಕದಲ್ಲಿ ಅಚ್ಚರಿ ಮೂಡಿಸಿದೆ.
ಭಾರತೀಯ ಕಲಾ ಇತಿಹಾಸದಲ್ಲೇ ಇಷ್ಟು ದೊಡ್ಡ ಮೊತ್ತಕ್ಕೆ ಹರಾಜಾದ ಅತ್ಯಂತ ದುಬಾರಿ ಚಿತ್ರ ಎಂಬ ಹೆಗ್ಗಳಿಕೆಗೆ ಈ ಕಲಾಕೃತಿ ಪಾತ್ರವಾಗಿದೆ. ಸಫ್ರಾನ್ ಆರ್ಟ್ ಸಂಸ್ಥೆಯು ಆಯೋಜಿಸಿದ್ದ ಈ ಹರಾಜಿನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಅಂತಿಮವಾಗಿ ಪ್ರಸಿದ್ಧ ಉದ್ಯಮಿ ಹಾಗೂ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಂಸ್ಥಾಪಕ ಸೈರಸ್ ಪೂನಾವಾಲಾ ಅವರು ಈ ಅದ್ಭುತ ಚಿತ್ರವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಖರೀದಿಸಿದ ಬಳಿಕ ಸೈರಸ್ ಪೂನಾವಾಲಾ ಅವರು ಮಾಹಿತಿ ಹಂಚಿಕೊಂಡಿದ್ದು, ಇದನ್ನು ಖರೀದಿಸುವುದು ಹಕ್ಕು ಹಾಗೂ ಒಂದು ಜವಾಬ್ದಾರಿಯೂ ಹೌದು. ಇದು ಕೇವಲಕ್ಕೆ ಚಿತ್ರಕಲೆಯಲ್ಲ. ರಾಷ್ಟ್ರೀಯ ಸಂಪತ್ತು. ಹಾಗಾಗಿ ಸಾರ್ವಜನಿಕ ವೀಕ್ಷಣೆಗೆ ಇದು ಲಭ್ಯವಾಗಬೇಕು. ಜನರಿಗೆ ನೋಡಲು ಸಿಗುವಂತೆ ನನ್ನ ಕೈಲಾದಷ್ಟು ನಾನು ಪ್ರಯತ್ನಿಸುತ್ತೇನೆ ಎಂದಿದ್ದಾರೆ.
1848ರಲ್ಲಿ ತಿರುವಾಂಕೂರು ರಾಜಪ್ರಭುತ್ವದ ಶ್ರೀಮಂತ ಕುಟುಂಬದಲ್ಲಿ ರಾಜ ರವಿವರ್ಮ ಜನಿಸಿದರು. ಯುರೋಪಿಯನ್ ತೈಲವನ್ನು ಬಳಸಿ ವರ್ಣಚಿತ್ರಗಳನ್ನು ರಚಿಸುತ್ತಿದ್ದರು. ಭಾರತೀಯ ಚಿತ್ರಕಲೆಗೆ ಆಧುನಿಕ ಸ್ಪರ್ಶ ನೀಡಿದ ರಾಜಾ ರವಿವರ್ಮ ಅವರು, ಪುರಾಣದ ಕಥೆಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಿದ್ದರು.
1890ರ ದಶಕದಲ್ಲಿ ರಚಿಸಿದ ಈ ಕಲಾಕೃತಿಯಲ್ಲಿ ತಾಯಿ ಯಶೋದೆಯು ಬಾಲಕೃಷ್ಣನನ್ನು ಪ್ರೀತಿಯಿಂದ ಅಪ್ಪಿಕೊಂಡಿರುವ ದೃಶ್ಯವು ಅತ್ಯಂತ ಮನಮೋಹಕವಾಗಿ ಮೂಡಿಬಂದಿದೆ. ಮಾನವೀಯ ಸಂಬಂಧಗಳು ಮತ್ತು ದೈವಿಕತೆಯನ್ನು ಮೇಳೈಸಿದ ಈ ಚಿತ್ರವು ದಶಕಗಳಿಂದ ಕಲಾ ಪ್ರೇಮಿಗಳ ಮೆಚ್ಚುಗೆಗೆ ಪಾತ್ರವಾಗಿತ್ತು.
ಇದು ಕೇವಲ ಒಂದು ಚಿತ್ರವಾಗಿರದೆ, ಭಾರತೀಯ ಪರಂಪರೆಯನ್ನು ಎತ್ತಿ ಹಿಡಿಯುವ ಇಂತಹ ಕಲಾಕೃತಿಗಳು ಇಂದು ಜಾಗತಿಕ ಮಾರುಕಟ್ಟೆಯಲ್ಲಿ ಕೋಟಿ ಕೋಟಿ ಬೆಲೆ ಪಡೆಯುತ್ತಿರುವುದು ನಮ್ಮ ದೇಶದ ಕಲೆಗೆ ಸಿಕ್ಕ ದೊಡ್ಡ ಗೌರವವಾಗಿದೆ. ಈ ಹಿಂದೆ ಕೂಡ ಅನೇಕ ಚಿತ್ರಗಳು ದಾಖಲೆ ಬೆಲೆಗೆ ಮಾರಾಟವಾಗಿದ್ದರೂ, ರವಿವರ್ಮ ಅವರ ಈ ಕೃತಿ ಆ ಎಲ್ಲಾ ಹಳೆಯ ದಾಖಲೆಗಳನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದೆ.




