ಚೇಳೂರು : ನೂತನ ತಾಲೂಕು ರಚನೆಯ ನಂತರ ಭೂಮಿ ಇಲಾಖೆಯ ತಾಂತ್ರಿಕ ದೋಷದಿಂದಾಗಿ ಚೇಳೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಒಂದು ವರ್ಷದಿಂದ ಕಾಡುತ್ತಿದ್ದ ಪಹಣಿ ಸಮಸ್ಯೆಗೆ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ.
ತಹಸೀಲ್ದಾರ್ ಶ್ವೇತಾ ಬಿ.ಕೆ. ಅವರ ವಿಶೇಷ ಮುತುವರ್ಜಿಯಿಂದಾಗಿ ಈ ಸಮಸ್ಯೆ ಬಗೆಹರಿದಿದ್ದು, ವಾರದೊಳಗೆ ರೈತರ ಕೈಗೆ ಪಹಣಿ ಸಿಗಲಿದೆ.
ತಾಂತ್ರಿಕ ಅಡಚಣೆ: ಚೇಳೂರು ತಾಲೂಕು ಕೇಂದ್ರವಾದ ನಂತರ ಭೂಮಿ ಇಲಾಖೆಯ ವ್ಯಾಪ್ತಿಯಲ್ಲಿ ತಾಂತ್ರಿಕ ಬದಲಾವಣೆಗಳಾಗಿದ್ದವು. ಇದರಿಂದಾಗಿ ಎಂ. ನಲ್ಲಗುಟ್ಲಪಲ್ಲಿ, ಚಾಕವೇಲು ಪಂಚಾಯಿತಿ ವ್ಯಾಪ್ತಿಯ ಆರ್. ನಲ್ಲಗುಟ್ಲಪಲ್ಲಿ, ಪೋಲನಾಯಕನಪಲ್ಲಿ ವ್ಯಾಪ್ತಿಯ ಗುಮ್ಮಳಪಲ್ಲಿ ಮತ್ತು ಹೊಸಹುಡ್ಯ ಹಾಗೂ ಚೇಳೂರು ಪಂಚಾಯಿತಿ ವ್ಯಾಪ್ತಿಯ ಗುಮ್ಮಳಪಲ್ಲಿ ಮತ್ತು ಹೊಸಹುಡ್ಯ ಗ್ರಾಮಗಳ ರೈತರಿಗೆ ಪಹಣಿ ಲಭ್ಯವಾಗುತ್ತಿರಲಿಲ್ಲ.
ಇದರಿಂದ ಕೃಷಿ ಸಾಲ ಹಾಗೂ ಇತರ ಸೌಲಭ್ಯ ಪಡೆಯಲು ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದರು.
ಸಮಸ್ಯೆಯ ಗಾಂಭೀರ್ಯತೆಯನ್ನು ಅರಿತ ತಹಸೀಲ್ದಾರ್ ಶ್ವೇತಾ ಬಿ.ಕೆ. ಅವರು, ಇದನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಮುಂದಾದರು.
ಈ ನಿಟ್ಟಿನಲ್ಲಿ ತಾಲೂಕಿನ ಶಾಸಕರು ಹಾಗೂ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ, ತಾಂತ್ರಿಕ ಅಡೆತಡೆಗಳನ್ನು ನಿವಾರಿಸಲು ಸರ್ಕಾರದ ಮಟ್ಟದಲ್ಲಿ ಸತತ ಪ್ರಯತ್ನ ನಡೆಸಿದರು.
ಅವರ ಈ ಸಕ್ರಿಯ ಪ್ರಯತ್ನದ ಫಲವಾಗಿ ಭೂಮಿ ಇಲಾಖೆಯ ಸಾಫ್ಟ್ವೇರ್ ದೋಷಗಳು ಇದೀಗ ನಿವಾರಣೆಯಾಗಿವೆ.
ವಾರದಲ್ಲಿ ಪಹಣಿ ಲಭ್ಯ: ಈ ಕುರಿತು ಪ್ರತಿಕ್ರಿಯಿಸಿರುವ ತಹಸೀಲ್ದಾರ್ ಶ್ವೇತಾ ಬಿ.ಕೆ., ಕಳೆದ ಒಂದು ವರ್ಷದಿಂದ ಪಹಣಿ ಸಮಸ್ಯೆಯಿಂದ ರೈತರು ಅನುಭವಿಸುತ್ತಿದ್ದ ತೊಂದರೆ ನನ್ನ ಗಮನಕ್ಕೆ ಬಂದಿತ್ತು.
ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಸಹಕಾರದೊಂದಿಗೆ ಈ ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸಲಾಗಿದೆ. ಇನ್ನು ಒಂದು ವಾರದೊಳಗೆ ಪಹಣಿ ವಿತರಣೆ ಪ್ರಕ್ರಿಯೆ ಸುಗಮಗೊಳ್ಳಲಿದ್ದು, ರೈತರ ಅಲೆದಾಟ ತಪ್ಪಲಿದೆ ಎಂದು ಭರವಸೆ ನೀಡಿದ್ದಾರೆ.
ತಹಸೀಲ್ದಾರ್ ಅವರ ಈ ಜನಪರ ನಿರ್ಧಾರ ಮತ್ತು ಶಾಸಕರು ಹಾಗೂ ಜಿಲ್ಲಾಧಿಕಾರಿಗಳ ಸಮನ್ವಯದೊಂದಿಗೆ ಸಮಸ್ಯೆ ಬಗೆಹರಿಸಿದ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ವರದಿ :ಯಾರಬ್. ಎಂ.




