ಬಾಗಲಕೋಟೆ: ‘ಬಿಜೆಪಿಯವರ ಸುಳ್ಳು ಜನರಿಗೆ ಗೊತ್ತಾಗುತ್ತಿದೆ. ಹಿಂದೆ ನಡೆದಿದ್ದ ಮೂರು ಉಪ ಚುನಾವಣೆಗಳಲ್ಲಿ ನಾವು ಗೆದ್ದಿದ್ದೇವೆ. ಈಗಲೂ ಎರಡೂ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. 2028ಕ್ಕೂ ನಾವೇ ಗೆಲ್ಲುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಪ್ರತಿಪಾದಿಸಿದರು.
ಶುಕ್ರವಾರ ತಾಲ್ಲೂಕಿನ ಬೇವಿನ ಮಟ್ಟಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಉಮೇಶ ಮೇಟಿ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ನವರು ಸಾಲ ಮಾಡಿದ್ದಾರೆ. ಖಜಾನೆ ಖಾಲಿಯಾಗಿದೆ. ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ ಎಂದು ಬಿಜೆಪಿಯವರು ಹೇಳುತ್ತಿರುವುದೆಲ್ಲವೂ ಸುಳ್ಳು’ ಎಂದರು. ‘
ಬಿಜೆಪಿ ಹಿಂದೆ ಒಂಬತ್ತು ವರ್ಷ ಅಧಿಕಾರದಲ್ಲಿದ್ದಾಗ ರೈತರು, ದಲಿತರು, ಬಡವರಿಗೆ ಏನು ಮಾಡಿದ್ದೇವೆ ಎಂದು ತಿಳಿಸಿ ಮತ ಕೇಳಬೇಕಿತ್ತು. ಏನೂ ಮಾಡದ್ದರಿಂದಲೇ ಈಗ ಸುಳ್ಳು ಹೇಳುತ್ತಿದ್ದಾರೆ’ ಎಂದರು.
‘ಸಾಲದ ಪ್ರಮಾಣ, ವಿತ್ತೀಯ ಕೊರತೆ ಕಾಯ್ದೆ ಪ್ರಕಾರ ಇದೆ. ಆದಾಯ ಸರ್ಪ್ಲಸ್ ಇಲ್ಲ ಎಂದು ಒಪ್ಪುತ್ತೇನೆ. ಏಕೆ ಆಗಿಲ್ಲವೆಂದರೆ ಬಿಹಾರ ಚುನಾವಣೆಗೆ ಜಿಎಸ್ಟಿ ಕಡಿಮೆ ಮಾಡಿದ್ದರಿಂದ ತೆರಿಗೆ ಸಂಗ್ರಹದಲ್ಲಿ ₹10 ಸಾವಿರ ಕೋಟಿ ಕಡಿಮೆಯಾಯಿತು.
ಜಲಜೀವನ್ ಮಿಷನ್ ಯೋಜನೆಗೆ ನೀಡಬೇಕಿದ್ದ ₹15 ಸಾವಿರ ಕೋಟಿ ಕೊಡಲಿಲ್ಲ. ಜಿಎಸ್ಟಿ ಪರಿಹಾರ ನಿಲ್ಲಿಸಿದ್ದರಿಂದ ವಿತ್ತೀಯ ಕೊರತೆಯಾಗಿದೆ’ ಎಂದು ಸಮರ್ಥಿಸಿಕೊಂಡರು.
‘ನುಡಿದಂತೆ ನಡೆದ ಪಕ್ಷ ಕಾಂಗ್ರೆಸ್ ಮಾತ್ರ. ಯಾವ ಕಾರಣಕ್ಕೂ ಬಿಜೆಪಿ ಮತ ಹಾಕಬೇಡಿ. ಅವರು ಕೆಲಸ ಮಾಡುವುದಿಲ್ಲ. ಕೆಲಸ ಮಾಡುವವರನ್ನು ಕಂಡರೆ ಅವರಿಗೆ ಹೊಟ್ಟೆಕಿಚ್ಚು’ ಎಂದು ಟೀಕಿಸಿದರು.




