ಸಿರುಗುಪ್ಪ : ನಗರದ ಸಿ.ಡಿ.ಪಿ.ಓ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣ ಸಂಘ ತಾಲೂಕು ಸಮಿತಿಯಿಂದ ವಿವಿಧ ಹಕ್ಕುಗಳಿಗಾಗಿ ಒತ್ತಾಯಿಸಿ ಮುಖ್ಯಮಂತ್ರಿಯವರಿಗೆ ಹಾಗೂ ಮಹಿಳಾ ಮತ್ತು ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವರಿಗೆ ಸಿಡಿಪಿಓ ಪ್ರದೀಪ್ ಅವರ ಮೂಲಕ ಮನವಿ ಸಲ್ಲಿಸಲಾಯಿತು.
ತಾಲೂಕು ಸಂಚಾಲಕರಾದ ಕೆ.ಈರಮ್ಮ ಅವರು ಮಾತನಾಡಿ ಒಂಟಿ ಮಹಿಳೆಯರಿಗೆ ದೇವದಾಸಿ ಮಹಿಳೆಯರ ತರಹ ಗಣತಿ ಮಾಡಿ ಪುನರ್ ವಸತಿ ಕಲ್ಪಿಸಬೇಕು. ಒಂಟಿ ಮಹಿಳೆಯರ ಮಾಸಿಕ ಪಿಂಚಣಿ ಹಣ ಕನಿಷ್ಟ 6ಸಾವಿರಕ್ಕೆ ಹೆಚ್ಚಿಸಬೇಕು.
ಗಂಡಬಿಟ್ಟ, ಗಂಡಸತ್ತ ಯುವತಿಯರು ಹಾಗೂ ಐವತ್ತು ವರ್ಷದ ಒಳಗಿನ ಮಹಿಳೆಯರನ್ನು ಸಾಮಾಜಿಕವಾಗಿ ಬಹಿಷ್ಕಾರ ಹಾಕಿದ್ದಲ್ಲಿ ಪರಿಹಾರವಾಗಿ 10ಲಕ್ಷ ರೂಪಾಯಿ ಇಡುಗಂಟು ಘೋಷಿಸಬೇಕು. ಅವರ ಮಕ್ಕಳ ರಕ್ಷಣೆಗಾಗಿ, ಶಿಕ್ಷಣ, ಉದ್ಯೋಗಕ್ಕಾಗಿ ಅಗತ್ಯ ಸೂಕ್ತ ಕಾನೂನು ರಚಿಸಬೇಕು.
ಇಂತಹ ಬಹಿಷ್ಕೃತರನ್ನು ಮರುವಿವಾಹವಾಗಲು ಮುಂದೆ ಬರುವ ಪುರುಷರಿಗೆ ಪ್ರೋತ್ಸಾಹ ಧನ ನೀಡಬೇಕು. ವಿದ್ಯಾವಂತ ಒಂಟಿ ಮಹಿಳೆಗೆ ಉದ್ಯೋಗವನ್ನು ಒದಗಿಸಬೇಕು ಇಲ್ಲವೇ ನಿರುದ್ಯೋಗ ಭತ್ಯೆಯನ್ನು ನೀಡಬೇಕು.
ಸಮಾಜದಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಗರ್ಭಿಣಿ ಹಾಗೂ ಭಾಣಂತಿಯರಾದ ಒಂಟಿ ಮಹಿಳೆಯರಿಗೆ ಕನಿಷ್ಠ 18 ತಿಂಗಳುಗಳ ಕಾಲ ಮಾಸಿಕ 10 ಸಾವಿರ ರೂಪಾಯಿಗಳ ವಿಶೇಷ ನೆರವು ಹಾಗೂ ವೈದ್ಯಕೀಯ ರಕ್ಷಣೆ ಒದಗಿಸಬೇಕು.
ಒಂಟಿ ಮಹಿಳೆಯರ ಸಾಮಾಹಿಕ ಬಹಿಷ್ಕಾರ ನಿಷೇಧ ಕಾಯ್ದೆ ಹಾಗೂ ಅವರ ಮೇಲಿನ ದೌರ್ಜನ್ಯ ತಡೆ ಕಾಯ್ದೆಗೆ ಕ್ರಮವಹಿಸಬೇಕು. ಹಿತ್ತಲು ಹಾಗೂ ನಿವೇಶನ ಸಹಿತ ಉಚಿತ ಮನೆಯನ್ನು ಒದಗಿಸಿ ಬಿ.ಪಿ.ಎಲ್ ಕಾರ್ಡ್ ಇನ್ನಿತರ ಅಗತ್ಯತೆಗಳ ನೆರವು ನೀಡಬೇಕು.
ಸ್ವಯಂ ಉದ್ಯೋಗ ತರಬೇತಿ ನೀಡಿ ಶೇ.75ರಷ್ಟು ಆರ್ಥಿಕ ಸಹಾಯಧನ ಒದಗಿಸಿ ಉಳಿದ ಶೇ.25ರಷ್ಟು ಸಾಲಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡಿ ಮಹಿಳಾ ಶಿಕ್ಷಣ, ಉದ್ಯೋಗ ಹಾಗೂ ರಾಜಕೀಯ ಮೀಸಲಾತಿಗಳಲ್ಲಿ ಒಂಟಿ ಮಹಿಳೆಯರಿಗೆ ಆಧ್ಯತೆಯನ್ನು ನೀಡಬೆಕೆಂದು ತಿಳಿಸಿದರು.
ಇದೇ ವೇಳೆ ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣ ಸಂಘ ತಾಲೂಕು ಸಮಿತಿ ಸದಸ್ಯರಾದ ಹಂಪಮ್ಮ, ಅಂಬಮ್ಮ, ಈರಮ್ಮ, ಹೊನ್ನಮ್ಮ, ಗಂಗಮ್ಮ, ಲಕ್ಷ್ಮಿ, ಬಸಮ್ಮ, ಹುಲಿಗೆಮ್ಮ ಸರೋಜ, ಮಾರೆಮ್ಮ, ಸೇರಿದಂತೆ ಇನ್ನಿತರ ಒಂಟಿ ಮಹಿಳೆಯರು ಹಾಗೂ ಮುಖಂಡರಾದ ಹೆಚ್.ತಿಪ್ಪಯ್ಯ, ವಿ.ಮಾರುತಿ ಇದ್ದರು.
ವರದಿ : ಶ್ರೀನಿವಾಸ ನಾಯ್ಕ




