ಸಿರುಗುಪ್ಪ : ನಗರದ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿನ ಶ್ರಮಿಕ ಭವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಸಮಿತಿಯ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಇದೇ ತಿಂಗಳ 28,29 ರಂದು ತಾಲೂಕು ಕೇಂದ್ರದಿಂದ ಜಿಲ್ಲಾ ಕಛೇರಿವರೆಗೂ ಪಾದಯಾತ್ರೆ ಮಾಡುವ ಮೂಲಕ ಭೂಗಳ್ಳತನದಲ್ಲಿ ಬಾಗಿಯಾಗಿರುವ ಅಧಿಕಾರಿಯ ವಿರುದ್ದ ಪ್ರತಿಭಟನೆ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕಾಧ್ಯಕ್ಷ ವಿ.ಮಾರುತಿ ಅವರು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಂ.64 ಹಳೇಕೋಟೆ ಮತ್ತು ಸಿರಿಗೇರಿ ಗ್ರಾಮಗಳಲ್ಲಿ ನೂರಾರು ಎಕರೆ ಜಮೀನುಗಳನ್ನು ತಮ್ಮ ಸಂಬಂಧಿಕರಿಗೆ ಅಕ್ರಮವಾಗಿ ನೋಂಧಣಿ ಮಾಡಿಸಿರುವ ಅಧಿಕಾರಿಗಳನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಜಿಲ್ಲಾ ಉಪಾಧ್ಯಕ್ಷ ಶಿವಶಂಕರ ಅವರು ಮಾತನಾಡಿ ತಾಲೂಕಿನ ನಂ.64 ಹಳೇಕೋಟೆ ಗ್ರಾಮದಲ್ಲಿನ ಮದ್ರಾಸ್ ಕುಟುಂಬದವರ ಹೆಸರಿನಲ್ಲಿ ಇಲ್ಲಿನ ಸಬ್ ರಿಜಿಸ್ಟ್ರಾರ್ ಯಲ್ಲಾರೆಡ್ಡೆಪ್ಪ ಬಳ್ಳಾರಿ ಹೃದಯಾಲದಲ್ಲಿ ಸಾವಿನಂಚಿನಲ್ಲಿರುವ ವೃದ್ದ ವ್ಯಕ್ತಿಯನ್ನು ಕರೆತಂದು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ, ಕಾನೂನು ಬಾಹಿರವಾಗಿ ತಮ್ಮದೇ ಸಂಬಂಧಿಕರ ಹೆಸರಿನಲ್ಲಿ ಭೂಮಿಯನ್ನು ನೋಂಧಣಿ ಮಾಡಿಸಿರುತ್ತಾರೆಂದು ಆರೋಪಿಸಿದರು.
ತಾಲೂಕಿನಲ್ಲಿ ಸರ್ಕಾರಕ್ಕೆ ಬರಬೇಕಾದ ಒಟ್ಟು 130ಕ್ಕೂ ಅಧಿಕ ಎಕರೆ ಜಮೀನನ್ನು ಅಕ್ರಮವಾಗಿ ನೋಂಧಣಿ ಮಾಡಿಸಿಕೊಂಡು ಭೂ ಒಡೆತನ ಯೋಜನೆಯಡಿ ಮಾರಾಟ ಮಾಡಿ 60ಕೋಟಿ ಯಷ್ಟು ಮೊತ್ತವನ್ನು ಲಪಟಾಯಿಸುತ್ತಿರುವ ಸಬ್ ರಿಜಿಸ್ಟ್ರಾರ್ ಯಲ್ಲಾರೆಡ್ಡೆಪ್ಪ ಹಾಗೂ ಇನ್ನಿತರ ಭೂಗಳ್ಳರಾದ ರಾಮನಗೌಡ, ಮಹಾಂತೇಶ್, ಶಿವುಕುಮಾರ್ ಅವರನ್ನು ತಕ್ಷಣವೇ ಬಂಧಿಸಿ ಕ್ರಮಿನಲ್ ಮೊಕದ್ದಮೆ ದಾಖಲಿಸಬೇಕು.
ನಂ.64 ಹಳೇಕೋಟೆ ಗ್ರಾಮದಲ್ಲಿ ಸುಮಾರು 70, 80 ವರ್ಷಗಳಿಂದ ಉಳುಮೆ ಮಾಡುತ್ತಾ ಬಂದಿರುತ್ತಾರೆ. ಅಕ್ರಮವಾಗಿ ಕಬಳಿಸಿರುವ ಜಮೀನಿನಲ್ಲಿ, ಮಾಜಿ ಸೈನಿಕರಿಗೆ ಎಸ್.ಸಿ ಮತ್ತು ಎಸ್.ಟಿ ರೈತರಿಗೆ, ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿದರು.
ಇಲ್ಲಿನ ಅಕ್ರಮ ಭೂಮಾಫಿಯಾ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯ, ಕಂದಾಯ ಇಲಾಖೆಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಇವರೆಲ್ಲಾ ಭೂಗಳ್ಳರ ಆಮಿಷಕ್ಕೆ ಒಳಗಾಗಿರುವ ಶಂಕೆ ವ್ಯಕ್ತವಾಗುತ್ತಿದೆ.
ಇನ್ನು ಮುಂದೆಯಾದರೂ ಸಮಗ್ರ ತನಿಖೆ ನಡೆಸಿ ಸರ್ಕಾರಕ್ಕೆ ಸೇರಬೇಕಾದ ಜಮೀನುಗಳನ್ನು ವಶಪಡಿಸಿಕೊಂಡು ಉಳುಮೆದಾರರಿಗೆ ನೀಡಬೇಕು.
ಅಕ್ರಮ ಭೂಗಳ್ಳರು ಮತ್ತು ಅಕ್ರಮಕ್ಕೆ ಪ್ರೋತ್ಸಾಹಿಸಿದ ಅಧಿಕಾರಿಗಳ ವಿರುದ್ದ ಕಠಿಣ ಕಾನೂನು ಕ್ರಮಕೈಗೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ರೈತ ಸಂಘದ ಪದಾಧಿಕಾರಿಗಳು, ರೈತರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ.




