ಬೆಳಗಾವಿ: ವಿಚ್ಛೇದಿತ ಮಹಿಳೆಯನ್ನು ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದ ವ್ಯಕ್ತಿಯೋರ್ವ ಆಕೆಯ ಆಸ್ತಿ ಲಪಟಾಯಿಸುವ ಆಸೆಯಿಂದ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಕಳೆದ ಮಾರ್ಚ್ 12ರಂದು ಅಥಣಿ ಪಟ್ಟಣದ ಹೊರ ವಲಯದ ಕಬ್ಬಿನ ಗದ್ದೆಯೊಂದರಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಮೃತಳನ್ನು ಅಥಣಿ ಪಟ್ಟಣದ ನಿವಾಸಿ ಸುಜಾತಾ ಪವಾರ್ (35) ಎಂದು ಗುರುತಿಸಿದ್ದು, ಈಕೆಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಆರೋಪಿ ಕುಮಾರ್ ಹವಾಲ್ದಾರ್ ಎಂಬಾತನನ್ನು ಬಂಧಿಸಿದ್ದಾರೆ.
ಇನ್ನು ಕೊಲೆಯಾಗಿರುವ ಸುಜಾತಳನ್ನ 16 ವರ್ಷಗಳ ಹಿಂದೆ ಹಾರೂಗೇರಿ ಯುವಕನೊಬ್ಬನ ಜೊತೆಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಗಂಡು ಮಗುವೂ ಇತ್ತು.
ಆದರೆ ಕುಡಿದು ಬಂದು ಗಂಡ ಕಿರುಕುಳ ನೀಡುತ್ತಾನೆ ಎಂಬ ಕಾರಣಕ್ಕೆ 13 ವರ್ಷಗಳ ಬಳಿಕ ಪತಿ ತೊರೆದು ಸುಜಾತಾ ವಿಚ್ಛೇದನ ಪಡೆದು ತವರು ಸೇರಿದ್ದಳು. ಪತಿಯಿಂದ ಸಿಕ್ಕಿದ್ದ ಮನೆ ಕೂಡ ಮಾರಿ ಅದರಿಂದ ಬಂದ ಹಣದಿಂದ ಅಥಣಿ ಹೊರ ವಲಯದಲ್ಲಿ ಸೈಟ್ ಕೂಡ ಖರೀದಿಸಿದ್ದಳು.
ಗಂಡು ದಿಕ್ಕಿಲ್ಲದ ತವರು ಮನೆಗೆ ಆಧಾರವಾಗಿದ್ದ ಈಕೆ ತಾಯಿ ಬಾಡಿಗೆ ಮನೆಯಲ್ಲಿದ್ದ ಕಾರಣ ಸ್ವಂತದ್ದೊಂದು ಮನೆ ಬೇಕು ಎಂದು ಖರೀದಿಸಿದ್ದ ಜಾಗದಲ್ಲಿ ಹೊಸ ಮನೆ ಕಟ್ಟಲು ಮುಂದಾಗಿದ್ದಳು. ಈ ವೇಳೆ ಗೌಂಡಿ ಕುಮಾರ್ ಹವಾಲ್ದಾರನ ಪರಿಚಯ ಸುಜಾತಾಳಿಗಾಗಿತ್ತು.
ಮನೆ ಕಟ್ಟಲು ಸಹಾಯ ಮಾಡವ ನೆಪದಲ್ಲಿ ಸುಜಾತಾಳ ವಿಶ್ವಾಸ ಗಳಿಸಿದ್ದ ಈತ, ನಿನ್ನ ಮದುವೆ ಆಗ್ತೀನಿ ಎಂದು ಹೇಳಿ ದೈಹಿಕ ಸಂಬಂಧ ಬೆಳೆಸಿದ್ದ. ಆದರೆ ಕಳೆದ 2 ವರ್ಷಗಳಿಂದ ಇವರ ನಡುವಿನ ಸಂಬಂಧ ಹಳಸಿತ್ತು .
ಮದುವೆ ಆಗಬೇಕು ಎಂದರೆ ಕಟ್ಟಿದ ಮನೆಯನ್ನ ತನ್ನ ಹೆಸರಿಗೆ ಮಾಡಬೇಕು ಎಂದು ಕುಮಾರ್ ಸುಜಾತಾಗೆ ಒತ್ತಡ ಹಾಕಲಾರಂಭಿಸಿದ್ದ. ಆದರೆ ಮಗನಿದ್ದಾನೆ, ತಾನು ಮನೆ ಕೊಡಲ್ಲ ಎಂದು ಸುಜಾತಾ ಹೇಳಿದ್ದಳು. ಇದರಿಂದ ಕೋಪಗೊಂಡಿದ್ದ ಈತ ಮಾರ್ಚ್ 5ರಂದು ಮಧ್ಯಾಹ್ನ ಕುಡಿದು ಬಂದು ಸುಜಾತ ಜೊತೆಗೆ ಗಲಾಟೆ ಮಾಡಿದ್ದಾನೆ. ಮಾತಾಡೋದಿದೆ ಅಂತಾ ಬೈಕ್ ಮೇಲೆ ಕರೆದುಕೊಂಡು ಹೋಗಿ ಕೊಲೆ ಮಾಡಿ ವಾಪಾಸ್ ಆಕೆಯ ಮನೆಗೆ ಬಂದು ಸಾಮಗ್ರಿಗಳ ಸಮೇತ ಹೊರ ನಡೆದಿದ್ದಾನೆ.
ಈ ವೇಳೆ ಸುಜಾತಾಳ 15ವರ್ಷದ ಮಗ ಪ್ರಶ್ನೆ ಮಾಡಿದಾಗ ತನ್ನ ಜೊತೆಗೆ ಜಗಳ ಮಾಡಿ ಗೆಳತಿ ಮನೆಗೆ ನಿಮ್ಮಮ್ಮ ಹೋಗಿದ್ದಾಳೆ.
ನಾನು ಬೈಯುತ್ತೇನೆಂದು ಪೋನ್ ಸ್ವಿಚ್ಛ್ ಆಫ್ ಮಾಡಿದ್ದಾಳೆ. ತಾನು ಕೂಡ ಜಾತ್ರೆ ಹೋಗುತ್ತೇನೆಂದು ಸುಳ್ಳು ಹೇಳಿ ತೆರಳಿದ್ದ. ಇತ್ತ ಸುಜಾತಾ ತಾಯಿ ಕೂಡ ಏನೋ ಬೇಜಾರಾಗಿ ಮಗಳು ಪ್ರತಿ ವರ್ಷದಂತೆ ಈ ಬಾರಿಯೂ ಗೆಳೆತಿಯರ ಜೊತೆಗೆ ಶ್ರೀಶೈಲಕ್ಕೆ ಹೋಗಿದ್ದಾಳೆ ಎಂದು ಸುಮ್ಮನಾಗಿದ್ದಳು. ಆದರೆ ಮನೆಗೆ ಪೊಲೀಸರು ಬಂದು ಸುಜಾತಾ ಸಾವಿನ ವಿಷಯ ತಿಳಿಸಿದಾಗಲೇ ಕುಮಾರ ಕೊಲೆ ಮಾಡಿರುವ ವಿಷಯ ಬಹಿರಂಗವಾಗಿತ್ತು.




