ಲಿಂಗಸುಗೂರು: ದನದ ಕೊಟ್ಟಿಗೆ ನಿರ್ಮಾಣಕ್ಕೆ ಸಹಾಯಧನ ಬಿಡುಗಡೆ ಮಾಡಲು ₹15 ಸಾವಿರ ಲಂಚ ಸ್ವೀಕರಿಸಿದ್ದ ಗೊರೆಬಾಳ ಗ್ರಾಮ ಪಂಚಾಯಿತಿ ಪಿಡಿಒ ಮಹಮ್ಮದ್ ಖಾಜಾಗೆ ಲಿಂಗಸುಗೂರಿನ ಮೂರನೇ ಅಧಿಕ ಮತ್ತು ಜಿಲ್ಲಾ ಸೆಷೆನ್ಸ್ ನ್ಯಾಯಾಲಯವು ಶುಕ್ರವಾರ ನಾಲ್ಕು ವರ್ಷ ಜೈಲು ಶಿಕ್ಷೆ ಹಾಗೂ ₹ 75 ಸಾವಿರ ದಂಡ ವಿಧಿಸಿದೆ.
ನ್ಯಾಯಾಧೀಶ ಬಿ.ಬಿ.ಜಕಾತಿ ಅವರು ಅಪರಾಧಿ ಪಿಡಿಒ ಮಹಮ್ಮದ್ ಖಾಜಾಗೆ ಭ್ರಷ್ಟಚಾರ ಪ್ರತಿಬಂಧ ಕಾಯ್ದೆ 1988 ರ ಕಲಂ 7 ರಡಿಯಲ್ಲಿ ಮೂರು ವರ್ಷ ಜೈಲು ಶಿಕ್ಷೆ ಹಾಗೂ ₹ 25 ಸಾವಿರ ದಂಡ ಹಾಗೂ ಕಲಂ 13(1)(ಡಿ) ಸಹಿತ 13(2) ಅಡಿಯಲ್ಲಿ 4ವರ್ಷ ಜೈಲು ಶಿಕ್ಷೆ ₹ 50 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಲಿಂಗಸುಗೂರು ತಾಲ್ಲೂಕಿನ ಗೊರೆಬಾಳ ತಾಂಡಾದ ಚೇತನ್ ಲೋಕಪ್ಪ ಅವರು ದನದ ಕೊಟ್ಟಿಗೆ ನಿರ್ಮಿಸಲು ಅಗತ್ಯವಿದ್ದ ಸಹಾಯಧನ ಬಿಡುಗಡೆ ಮಾಡಲು ಗೊರೆಬಾಳ ಪಿಡಿಒ ಮಹಮ್ಮದ್ ಖಾಜಾ ಅವರಿಗೆ ಮನವಿ ಮಾಡಿದ್ದರು.
ಆದರೆ, ಅವರು ಸಹಾಯಧನ ಬಿಡುಗಡೆಗೆ ₹ 15 ಸಾವಿರ ಲಂಚ ಕೇಳಿದ್ದರು. ಚೇತನ್, 2017ರ ನವೆಂಬರ್ 22ರಂದು ಎಸಿಬಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಚೇತನ್ ಅವರಿಂದ ಪಿಡಿಒ ಮಹಮ್ಮದ್ ಖಾಜಾ ₹15 ಸಾವಿರ ಲಂಚ ಪಡೆಯುವಾಗ ಎಸಿಬಿಗೆ ಬಲೆಗೆ ಬಿದ್ದಿದ್ದರು. ಆರೋಪಿಯನ್ನು ಬಂಧಿಸಿ ಪೋಲಿಸ್ ಇನ್ಸ್ಪೆಕ್ಟರ್ ಶ್ರೀಧರ ದೊಡ್ಡಿ ಅವರು ದೋಷಾರೋಪ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಈ ಪ್ರಕರಣದಲ್ಲಿ ಪಿರ್ಯಾದಿ ಚೇತನ್ ಲೋಕಪ್ಪ ನ್ಯಾಯಾಲಯದಲ್ಲಿ ಪ್ರತಿಕೂಲ ಸಾಕ್ಷಿ ನೀಡಿದ್ದಕ್ಕೆ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಿ ಅಭಿಯೋಜಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಾಲಯವು ಅರ್ಜಿಯನ್ನು ಪರಿಗಣಿಸಿ ನ್ಯಾಯಾಲಯದ ಶಿರಸ್ತೇದಾರರಿಗೆ ಪಿರ್ಯಾದಿ ಚೇತನ್ ಲೋಕಪ್ಪ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ. ಲೋಕಾಯುಕ್ತ ಪರವಾಗಿ ಸರ್ಕಾರಿ ಅಭಿಯೋಜಕ ಬಸವರಾಜ ಹೊಸಳ್ಳಿ ವಾದ ಮಂಡಿಸಿದ್ದರು.




