ಇಂದೋರ್ : ನಗರದಲ್ಲಿ ಬುಧವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಏಳು ಮಂದಿ ಸಜೀವ ದಹನವಾಗಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮನೆಯ ಹೊರಗೆ ಚಾರ್ಜಿಂಗ್ ಪಾಯಿಂಟ್ನಲ್ಲಿ ನಿಲ್ಲಿಸಿದ್ದ ಎಲೆಕ್ಟ್ರಿಕ್ ಕಾರ್ ಸ್ಫೋಟಗೊಂಡು ಈ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಜೇಶ್ವರಿ ಅನೆಕ್ಸ್ ಕಾಲೋನಿಯಲ್ಲಿರುವ ಮೂರು ಅಂತಸ್ತಿನ ಮನೆಯಲ್ಲಿ ಬುಧವಾರ ಮುಂಜಾನೆ ಸುಮಾರು 3:30 ಗಂಟೆಗೆ ಈ ಘಟನೆ ನಡೆದಿದೆ. ಎಲೆಕ್ಟ್ರಿಕ್ ಕಾರ್ ಚಾರ್ಜ್ ಆಗುತ್ತಿದ್ದಾಗ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ.
ಬೆಂಕಿ ವೇಗವಾಗಿ ಹರಡಿದ್ದರಿಂದ ಮನೆಯಲ್ಲಿದ್ದ ಎಲ್ಪಿಜಿ (LPG) ಸಿಲಿಂಡರ್ಗಳು ಸ್ಫೋಟಗೊಂಡಿವೆ. ಇದರಿಂದಾಗಿ ಇಡೀ ಕಟ್ಟಡ ಮತ್ತು ಕೆಳಗೆ ನಿಲ್ಲಿಸಿದ್ದ ಕಾರುಗಳು ಹಾಗೂ ಮೋಟಾರ್ ಸೈಕಲ್ಗಳು ಬೆಂಕಿಯ ಕೆನ್ನಾಲಗೆಗೆ ಸಿಲುಕಿವೆ.
ನೆರೆಹೊರೆಯವರ ಪ್ರಕಾರ, ಮುಂಜಾನೆ ಜೋರಾದ ಸ್ಫೋಟದ ಶಬ್ದ ಕೇಳಿಸಿತು, ನಂತರ ಮನೆಯೊಳಗಿದ್ದವರ ಕಿರುಚಾಟ ಮತ್ತು ಸಹಾಯಕ್ಕಾಗಿ ಮೊರೆ ಇಡುತ್ತಿದ್ದ ಸದ್ದು ಕೇಳಿಬಂದಿದೆ.
ಎಲೆಕ್ಟ್ರಾನಿಕ್ ಲಾಕ್ನಿಂದ ತಪ್ಪಿಸಿಕೊಳ್ಳಲು ಅಸಾಧ್ಯವಾಯ್ತು
ಪೊಲೀಸ್ ಕಮಿಷನರ್ ಸಂತೋಷ್ ಸಿಂಗ್ ಅವರ ಪ್ರಕಾರ, ಬೆಂಕಿ ಕಾಣಿಸಿಕೊಂಡಾಗ ಮನೆಯಲ್ಲಿ ಪುಗಾಲಿಯಾ ಕುಟುಂಬದ ಸದಸ್ಯರು ಮತ್ತು ಅತಿಥಿಗಳು ಸೇರಿದಂತೆ ಸುಮಾರು 8 ರಿಂದ 10 ಜನರು ಇದ್ದರು.
“ಮನೆಯ ಬಾಗಿಲುಗಳಿಗೆ ಎಲೆಕ್ಟ್ರಾನಿಕ್ ಲಾಕ್ ಹಾಕಲಾಗಿತ್ತು. ಬೆಂಕಿ ಹೊತ್ತಿಕೊಂಡಾಗ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದರಿಂದ ಅಥವಾ ತಾಂತ್ರಿಕ ಕಾರಣದಿಂದಾಗಿ ಬಾಗಿಲುಗಳನ್ನು ತೆಗೆಯಲು ಸಾಧ್ಯವಾಗಲಿಲ್ಲ. ಇದು ಒಳಗೆ ಸಿಲುಕಿದ್ದವರಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ನೀಡಲಿಲ್ಲ,” ಎಂದು ಅವರು ತಿಳಿಸಿದ್ದಾರೆ.
ಪೊಲೀಸರು ಕಷ್ಟಪಟ್ಟು ಬಾಗಿಲು ಮುರಿದು ಒಳಗೆ ಸಿಲುಕಿದ್ದ ಮೂವರನ್ನು ರಕ್ಷಿಸಿದ್ದಾರೆ. ಇಂದೋರ್ ಜಿಲ್ಲಾಧಿಕಾರಿ ಶಿವಂ ವರ್ಮಾ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ.
ಕಾರಿನ ಬೆಂಕಿಯಿಂದಾಗಿ ಮನೆಯಲ್ಲಿದ್ದ ಸಿಲಿಂಡರ್ಗಳು ಸ್ಫೋಟಗೊಂಡು ಬೆಂಕಿ ಇಡೀ ಕಟ್ಟಡಕ್ಕೆ ವ್ಯಾಪಿಸಿತು.ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.




