ಗಂಗಾವತಿ (ಕೊಪ್ಪಳ): ಬಾಲಕನಿಗೆ ಸಾರ್ವಜನಿಕ ಸ್ಥಳದಲ್ಲಿ ಓಡಿಸಲು ಬೈಕ್ ನೀಡಿದ್ದಕ್ಕಾಗಿ ಪಾಲಕರಿಗೆ 25 ಸಾವಿರ ರೂಪಾಯಿ ದಂಡ ವಿಧಿಸಿ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಆದೇಶ ಮಾಡಿದ್ದಾರೆ. ಗಂಗಾವತಿಯಲ್ಲಿ ಇಷ್ಟು ಮೊತ್ತದ ದಂಡ ವಿಧಿಸುತ್ತಿರುವ ಮೊದಲ ಪ್ರಕರಣ ಇದಾಗಿದೆ.
ಜಯನಗರದ ನಿವೃತ್ತ ಸರ್ಕಾರಿ ನೌಕರರೊಬ್ಬರ 16 ವರ್ಷದ ಬಾಲಕ ಬೈಕ್ ಚಲಾಯಿಸಿಕೊಂಡು ಬಂದಿದ್ದ. ಮಾರ್ಚ್ 23ರಂದು ನಗರದ ಪಂಪಾನಗರದಲ್ಲಿ ತಡೆದು ನಿಲ್ಲಿಸಿದ್ದ ಸಂಚಾರ ಠಾಣೆಯ ಪಿಎಸ್ಐ ಶಾರದಮ್ಮ, ಬಾಲಕನಿಗೆ ದಂಡ ಹಾಕಿದ್ದರು. ಈ ಬಗ್ಗೆ ಗುರುವಾರ ವಿಚಾರಣೆ ನಡೆಸಿದ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ನಾಗೇಶ ಪಾಟೀಲ್, ದಾಖಲಾದ ದೋಷಾರೂಪ ಪಟ್ಟಿಯ ಹಿನ್ನೆಲೆಯಲ್ಲಿ ಮೊಟಾರು ವಾಹನ ಕಾಯ್ದೆ ಉಲ್ಲಂಘನೆಯ ಆರೋಪದಡಿ ಬಾಲಕನ ಪಾಲಕರಿಗೆ 25 ಸಾವಿರ ರೂ. ದಂಡ ವಿಧಿಸಿ ಆದೇಶ ಮಾಡಿದ್ದಾರೆ.
ಇತ್ತೀಚೆಗಿನ ಪ್ರಕರಣ: ಅಪ್ರಾಪ್ತರು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದು ಅವರ ಪೋಷಕರು ದಂಡ ಕಟ್ಟಿರುವ ಮೂರು ಪ್ರಕರಣಗಳು ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಟ್ರಾಫಿಕ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದವು. ಪ್ರಕರಣವೊಂದರಲ್ಲಿ ವಾಹನದ ಆರ್.ಸಿ.ಯಲ್ಲಿ ಯಾರ ಹೆಸರಿತ್ತೋ ಅವರು ದಂಡ ಕಟ್ಟಿದ್ದರು.
ಮೆಲ್ಕಾರ್ನಲ್ಲಿ ಪೊಲೀಸರು ವಾಹನಗಳ ತಪಾಸಣಾ ಕಾರ್ಯದಲ್ಲಿ ತೊಡಗಿದ್ದ ವೇಳೆ ಬಾಲಕನೋರ್ವ ಸಿಕ್ಕಿಬಿದ್ದಿದ್ದ. ಬಳಿಕ, ಬೈಕ್ ಯಾರ ಹೆಸರಲ್ಲಿದೆಯೋ ಅವರಿಗೆ ಕೋರ್ಟ್ 26,500 ದಂಡ ವಿಧಿಸಿತ್ತು. ಅದರಂತೆ, ಮೆಲ್ಕಾರ್ನ ಮಹಮ್ಮದ್ ಅಶ್ರಫ್ ದಂಡ ಕಟ್ಟಿದ್ದರು. ವಾಸ್ತವವಾಗಿ ಅವರು ಬೈಕ್ ಅನ್ನು 6 ತಿಂಗಳ ಹಿಂದೆಯೇ ಮತ್ತೊಬ್ಬರಿಗೆ ಮಾರಾಟ ಮಾಡಿದ್ದರು.
ದಂಡ ವಿಧಿಸಿದ ಕೋರ್ಟ್: ಪಡೆದುಕೊಂಡ ವ್ಯಕ್ತಿಯಿಂದ 20 ಮತ್ತು 30ರ ನಿಯಮದ ಫಾರ್ಮ್ ಸಹಿ ಹಾಕಿಸಿಕೊಂಡು ವಾಹನದ ಹಣ ನೀಡಿದ್ದರು. ಆದರೆ, ಬೈಕ್ ಪಡೆದುಕೊಂಡ ವ್ಯಕ್ತಿ ಈವರೆಗೆ ಬೈಕ್ನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡಿರಲಿಲ್ಲ. ಅಲ್ಲದೆ, ಅಪ್ರಾಪ್ತನಿಗೆ ಚಾಲನೆ ಮಾಡುವುದಕ್ಕೆ ಬೈಕ್ ನೀಡಿದ್ದರು. ಬಾಲಕ ವಾಹನ ಓಡಿಸಿದ್ದಕ್ಕೆ ಆರ್.ಸಿ. ಮಾಲೀಕನಿಗೆ ಅಡಿಷನಲ್ ಸಿವಿಲ್ ನ್ಯಾಯಾಲಯ ಹಾಗೂ ಜೆ.ಎಂ.ಎಫ್.ಸಿ ಬಂಟ್ವಾಳ 26,500 ಸಾವಿರ ರೂ. ದಂಡ ವಿಧಿಸಿತ್ತು.