ಸಿರುಗುಪ್ಪ : ನಗರಕ್ಕೆ ಆಗಮಿಸಿದ ಕೊಪ್ಪಳ ಕ್ಷೇತ್ರ ಸಂಸದ ರಾಜಶೇಖರ್ ಬಸವರಾಜ್ ಹಿಟ್ನಾಳ್ ಅವರಿಗೆ ಸಾರ್ವಜನಿಕರಿಂದ ಸಮಸ್ಯೆಗಳ ಸುರಿಮಳೆ ಸುರಿದಂತಾಯಿತು. ಬಹುಮುಖ್ಯವಾಗಿ ತಾಲೂಕಿನಲ್ಲಿ ಹಾದುಹೋಗಿರುವ ಹೆದ್ದಾರಿ 150ಎ ನಗರದಲ್ಲಿ ತೀವ್ರ ಹದಗೆಟ್ಟು ಬೃಹತ್ ಗುಂಡಿಗಳು ಬಿದ್ದಿರುವ ಬಗ್ಗೆ ಗಮನಕ್ಕೆ ತರಲಾಯಿತು.

ನಗರವನ್ನು ಸುತ್ತು ಹಾಕಿ ನಿಮಗೆ ಇಲ್ಲಿನ ಜನರ ಸಂಕಷ್ಟಗಳು ನಿಮಗೆ ತಿಳಿಯುತ್ತದೆಂದು ಗುಂಡಿಗಳು ಬಿದ್ದಿರುವ ಸ್ಥಳಗಳ ಪರಿಶೀಲನೆಗೆ ಮುಖಂಡರು ಒತ್ತಾಯಿಸಿದರು. ಅದರಂತೆ ರಸ್ತೆಯಲ್ಲಿ ಸಂಚರಿಸಿದ ಸಂಸದರು ಬೃಹದಾಕಾರದ ಗುಂಡಿಗಳಿಂದ ತುಂಬಿದ ರಸ್ತೆಯಿಂದಾಗುವ ಗಂಭೀರತೆಯ ಬಗ್ಗೆ ಮಾಹಿತಿ ಪಡೆದರು.

ರಸ್ತೆಯಲ್ಲಿ ಕಾರು, ಬಸ್ಗಳು, ದ್ವಿಚಕ್ರ ವಾಹನಗಳು, ಭತ್ತ ಸಾಗಿಸುವ ಟ್ರ್ಯಾಕ್ಟರ್ ಗಳು ಸಂಚಾರಕ್ಕೆ ಹರಸಾಹಸ ಪಡುವಂತಾಗಿದ್ದು, ಅನೇಕ ಸಾವು ನೋವುಗಳು ಹೆಚ್ಚಾಗಿವೆ. ಸಾಮಾಜಿಕ ಜಾಲತಾಣಗಳಲ್ಲಿ ಪತ್ರಿಕಾ, ಟಿ.ವಿ ಮಾಧ್ಯಮಗಳಲ್ಲಿ ತುಂಬಾ ವೈರಲ್ ಆಗಿದ್ದರಿಂದ ಇಲ್ಲಿನ ಜನಪ್ರತಿನಿಧಿಗಳು, ಮುಖಂಡರಿಗಂತೂ ತಲೆಯೆತ್ತಿ ತಿರುಗಾಡದಂತಾಗಿದೆಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಸದರು ಬರುವ ಸುದ್ದಿಯನ್ನು ತಿಳಿದು ರಸ್ತೆ ದುರಸ್ತಿಯ ಕಚ್ಚಾ ಮಣ್ಣು ತಂದು ಹಾಕಿದನ್ನು ಕಂಡ ಕೆಲವು ನಗರಸಭೆ ಸದಸ್ಯರು ಇದೇನು ಹೆದ್ದಾರಿಯೋ? ನಿಮ್ಮಿಂದ ಸರಿಮಾಡಲು ಆಗದಿದ್ದರೆ ಬರೆದುಕೊಡಿ ನಗರಸಭೆಯಿಂದ ಮಾಡುತ್ತೇವೆ.
ನಾಳೆ ಪ್ರತಿಭಟನೆ ನಡೆಯಲಿದೇ ಇಲ್ಲಿಯೇ ಇದ್ದು ಅವರಿಗೆ ಉತ್ತರವನ್ನು ನೀಡಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ತರಾಟೆಯನ್ನು ತೆಗೆದುಕೊಳ್ಳಲಾಯಿತು. ರಸ್ತೆಯಲ್ಲಿ ಭತ್ತವನ್ನು ನಾಟಿ ಮಾಡಿದ ಚಿತ್ರೀಕರಣವನ್ನು ಸಂಸದರಿಗೆ ಕಾರ್ಯಕರ್ತರು ತೋರಿಸಿದರು.
ಆಗ ಸಂಸದರು ನೋಡ್ರಿ ಜನರು ನಮ್ಮನ್ನು ಅಣುಕಿಸುವಂತಾಗಿದೆ. ಹಣವಿದ್ದರೂ ನೀವ್ಯಾಕೆ ದುರಸ್ತಿ ಮಾಡುತ್ತಿಲ್ಲ. ನೀವೇನು ಕ್ರಮ ಕೈಗೊಂಡಿದ್ದೀರಿ. ಈ ಕೂಡಲೇ ಗುಂಡಿಗಳನ್ನು ಮುಚ್ಚಿಸುವ ಕಾರ್ಯವನ್ನು ಕೈಗೊಂಡು ಸಮತಟ್ಟುಗೊಳಿಸಿ ರಸ್ತೆಯ ಅಭಿವೃದ್ದಿಪಡಿಸಬೇಕೆಂದು ಸೂಚಿಸಿದರು. ಇದೇ ವೇಳೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಚಿತ್ರದುರ್ಗ ಕಛೇರಿಯ ಇಇ ಶೇಷಾದ್ರಿ, ಹೊಸಪೇಟೆ ಕಛೇರಿಯ ಎಇಇ ಸುಂದರ್ ನಗರಸಭೆ ಸದಸ್ಯರು ಕಾಂಗ್ರೇಸ್ ಮುಖಂಡರು ಹಾಗೂ ಸಾರ್ವಜನಿಕರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




