ಗುರುಮಠಕಲ್: ಪಟ್ಟಣದ ಕಟ್ಟಲಗೇರಾ ನಿವಾಸಿ ಅಂಜಪ್ಪ ಅವರು ಮಂಗಳವಾರ ಅನಾರೋಗ್ಯದಿಂದ ನಿಧನರಾಗಿರುವ ಹಿನ್ನೆಲೆಯಲ್ಲಿ ಕುಟುಂಬದಲ್ಲಿ ಶೋಕಮಯ ವಾತಾವರಣ ನಿರ್ಮಾಣವಾಗಿದೆ. ಈ ದುಃಖದ ನಡುವೆಯೇ ಅವರ ಪುತ್ರಿ ಅನುಷಾ ಎಸ್ಎಸ್ಎಲ್ಸಿ ಪರೀಕ್ಷೆಗೆ ಹಾಜರಾಗಿರುವುದು ಗಮನಾರ್ಹವಾಗಿದೆ.
ತಂದೆಯ ಅಗಲಿಕೆಯಿಂದ ಮನನೊಂದುಕೊಂಡಿದ್ದ ವಿದ್ಯಾರ್ಥಿನಿಯನ್ನು ಬಡಾವಣೆಯ ಹಿರಿಯರು, ಶಾಲೆಯ ಮುಖ್ಯಗುರುಗಳು ಹಾಗೂ ಶಿಕ್ಷಕರು ಸಮಾಧಾನಪಡಿಸಿ ಪರೀಕ್ಷೆ ಬರೆಯಲು ಮನವೊಲಿಸಿದರು. ಅವರ ಪ್ರೇರಣೆಯಿಂದ ‘ವಿದ್ಯಾಭ್ಯಾಸವೇ ಭವಿಷ್ಯದ ದಾರಿ’ ಎಂಬ ನಂಬಿಕೆಯನ್ನು ಹಿಡಿದಿಟ್ಟುಕೊಂಡು, ಅನುಷಾ ಕಣ್ಣೀರಿನ ನಡುವೆಯೇ ಪರೀಕ್ಷೆ ಬರೆದಳು.
ವಿದ್ಯಾರ್ಥಿನಿಯ ಆತ್ಮಸ್ಥೈರ್ಯ ಹಾಗೂ ಸಂಕಲ್ಪವನ್ನು ಸ್ಥಳೀಯರು ಮತ್ತು ಶಿಕ್ಷಕರು ಶ್ಲಾಘಿಸಿದ್ದಾರೆ. ಇಂತಹ ಸಂಕಷ್ಟದ ಸಂದರ್ಭದಲ್ಲೂ ಶಿಕ್ಷಣದತ್ತ ತೋರಿದ ಬದ್ಧತೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ವರದಿ : ರವಿ ಬುರನೋಳ್




