ಗದಗ: ಇಲ್ಲಿನ ಬೆಟಗೇರಿ ಶರಣ ಬಸವೇಶ್ವರ ನಗರದಲ್ಲಿ ಪೂಜಾ ಅಮರೇಶ ಅಯ್ಯನಗೌಡರ್(27) ಎಂಬ ನವ ವಿವಾಹಿತ ಯುವತಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಪೂಜಾ ಅಮರೇಶ ಅಯ್ಯನಗೌಡರ್ ತಮ್ಮ ಸಾವಿಗೆ ಕಾರಣ ತಿಳಿಸಿ ಡೆತ್ನೋಟ್ ಬರೆದಿಟ್ಟು ತಮ್ಮ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಡೆತ್ ನೋಟ್ ನ ಪ್ರಕಾರ ಪೂಜಾ ಅವರಿಗೆ ಗಂಡನ ಕುಟುಂಬದವರು ನಿತ್ಯ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ.ಅತ್ತೆ ಶಶಿಕಲಾ, ಬಾವ ವೀರನಗೌಡ ಹಾಗೂ ಮಾವ ನಿತ್ಯ ಕಿರುಕುಳ ನೀಡುತ್ತಿದ್ದರು.
ಪೂಜಾ ಬಣ್ಣದಲ್ಲಿ ಕಪ್ಪು ಇದ್ದುದರಿಂದ ಆಕೆಯ ಅತ್ತೆ ಚರ್ಮದ ಬಣ್ಣದ ಕುರಿತು ಅಪಹಾಸ್ಯ ಮಾಡುತ್ತಿದ್ದರು ಎಂದು ಮೃತ ಪೂಜಾ ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ಇನ್ನು ಇದು ಆತ್ಮಹತ್ಯೆಯಲ್ಲ.ಆಕೆಯ ಅತ್ತೆ, ಮಾವ, ಬಾವ ಒಟ್ಟಾಗಿ ಆಕೆಯನ್ನು ಕೊಂದು ನೇಣು ಹಾಕಿರುವುದಾಗಿ ಪೂಜಾ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ ಮತ್ತು ಪೂಜಾಳ ಬಾವ ವೀರನಗೌಡನ ಮೇಲೆ ಹಲ್ಲೆ ಮಾಡಿದ್ದಾರೆ.
ಮೃತ ಪೂಜಾ ಅವರು ಕಳೆದ 4 ತಿಂಗಳ ಹಿಂದೆ ಅಮರೇಶರನ್ನ ವಿವಾಹವಾಗಿದ್ದರು. ಅಮರೇಶ ಖಾಸಗಿ ಕಂಪನಿಯ ಉದ್ಯೋಗಿ ಎನ್ನಲಾಗಿದ್ದು ಚೆನ್ನೈಗೆ ಕೆಲಸಕ್ಕೆ ತೆರಳಿದ್ದರು ಎನ್ನಲಾಗಿದೆ.ಸದ್ಯ ಘಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಬೆಟಗೇರಿ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.