ಕಾಸ್ಗಂಜ್: ವಿವಾಹವಾಗಬೇಕಿದ್ದ ಭಾವಿ ಗಂಡನ ಮುಂದೆಯೇ ಯುವತಿಯೊಬ್ಬಳನ್ನು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಮಾಡಿರುವ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶದ ಕಾಸ್ಗಂಜ್ ನಲ್ಲಿ ಈ ಘಟನೆ ವರದಿಯಾಗಿದ್ದು, ಯುವತಿಯ ಭಾವಿ ಗಂಡನ ಎದುರೇ ಯುವತಿಯನ್ನು 8 ಮಂದಿಯ ದುಷ್ಕರ್ಮಿಗಳ ತಂಡ ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.
ಮೂಲಗಳ ಪ್ರಕಾರ ಸಂತ್ರಸ್ಥ ಯುವತಿ ಮತ್ತು ದುಷ್ಕರ್ಮಿಗಳಿಂದ ಹಲ್ಲೆಗೊಳಗಾದ ಯುವಕ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಅವರ ವಿವಾಹ ಶೀಘ್ರದಲ್ಲೇ ನಿಶ್ಚಯವಾಗಿತ್ತು. ಆದರೆ ಆತನ ಎದುರೇ ಯುವತಿಯನ್ನು ವಿವಸ್ತ್ರಗೊಳಿಸಿ ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ವೆಸಗಿದ್ದಾರೆ.
ಏಪ್ರಿಲ್ 10 ರಂದು ಮಧ್ಯಾಹ್ನ ಸುಮಾರು 2.30ರ ವೇಳೆಗೆ, ಸಂತ್ರಸ್ಥ ಯುವತಿ ಮತ್ತು ತನ್ನ ನಿಶ್ಚಿತ ವರ ಪಡಿತರ ಚೀಟಿ ಕೆಲಸ ಮುಗಿಸಿ ಹಿಂತಿರುಗುತ್ತಿದ್ದಾಗ ಕಾಲುವೆಯ ಬಳಿಯ ಮರದ ಕೆಳಗೆ ಊಟ ಮಾಡಲು ನಿಂತಿದ್ದರು. ಈ ವೇಳೆ ರಸ್ತೆಯ ಬದಿಯ ಕಾಲುವೆ ಬಳಿ ಕುಳಿತು ಮಾತನಾಡುತ್ತಿದ್ದರು. ಅವರಿಬ್ಬರೇ ಅಲ್ಲಿರುವುದನ್ನು ನೋಡಿದ ಗುಂಪೊಂದು ಅವರ ಹತ್ತಿರ ಹೋಗಿ ಅಸಭ್ಯವಾಗಿ ಮಾತನಾಡಿದ್ದಾರೆ.
ಬಳಿಕ ವರನನ್ನು ಒತ್ತಾಯಾಳಾಗಿಟ್ಟುಕೊಂಡು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ. ಮಾತ್ರವಲ್ಲದೇ ದುಷ್ಕರ್ಮಿಗಳು ಅವರ ಬಳಿ ಇದ್ದ ಹಣವನ್ನು ಕಸಿದುಕೊಂಡು ಪರಾರಿಯಾಗಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಅಂತೆಯೇ ದೂರಿನ ಪ್ರಕಾರ, ಹಲವು ಪುರುಷರು ಆಕೆಯನ್ನು ಪ್ರತ್ಯೇಕ ಸ್ಥಳಕ್ಕೆ ಕರೆದೊಯ್ದು ಒಬ್ಬೊಬ್ಬರಾಗಿ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ.
ಇನ್ನು ಈ ಪ್ರಕರಣ ಸಂಬಂಧ ಸ್ಥಳೀಯ ಬಿಜೆಪಿ ಮುಖಂಡ ಅಖಿಲೇಶ್ ಪ್ರತಾಪ್ ಸಿಂಗ್ ( Akhilesh Pratap Singh) ಎಂಬಾತ ಸೇರಿದಂತೆ ಒಟ್ಟು 8 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ತ್ವರಿತ ನ್ಯಾಯಕ್ಕಾಗಿ ಪೊಲೀಸರು ತ್ವರಿತ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಸಲು ಯೋಜಿಸುತ್ತಿದ್ದಾರೆ.