ಸಿರುಗುಪ್ಪ : ನಗರದ ಶ್ರೀ ರೇಣುಕಾಶ್ರಮ ಆವರಣದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ತಾಲೂಕಾಡಳಿತ, ಹಾಗೂ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ನಡೆದ ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಜಯಂತ್ಯೋತ್ಸವ ಸಮಾರಂಭವನ್ನು ಹಳೇಕೋಟೆ ಮರಿಶಿವಯೋಗಿ ಮಠದ ಸಿದ್ದಬಸವ ಸ್ವಾಮೀಜಿ ಅವರು ಉದ್ಘಾಟಿಸಿದರು.
ನಂತರ ಆಶೀವರ್ಚನ ನೀಡಿದ ಅವರು ವೀರಶೈವ ತತ್ವ ಸಿದ್ದಾಂತವನ್ನು ಪ್ರಚುರ ಪಡಿಸುತ್ತಾ ಇಡೀ ಜಗತ್ತಿಗೆ ವೀರಶೈವದ ಮಹತ್ವವನ್ನು ಸಾರಿದ ರೇಣುಕಾಚಾರ್ಯರು ಪ್ರತಿಯೊಬ್ಬರು ಶಿವಲಿಂಗವನ್ನು ಪೂಜೆಯ ಪ್ರಾಮುಖ್ಯತೆ ತಿಳಿಸಿಕೊಟ್ಟಿದ್ದಾರೆ. ಅಂತಹವರ ಜೀವನದ ಮಹತ್ವನ್ನು ಜಯಂತ್ಯೋತ್ಸವ ಸಮಾರಂಭದಲ್ಲಿ ತಿಳಿಯಬೇಕಾಗಿದೆಂದರು.
ಬಸವಭೂಷಣ ಶ್ರೀಗಳು ತಮ್ಮ ಆಶೀರ್ವಚನದಲ್ಲಿ ರೇಣುಕಾಚಾರ್ಯ ಜಗದ್ಗುರುಗಳು ಶರಣ ಬಸವಣ್ಣನವರ ಪೂರ್ವಿಕ ಕಾಲದಿಂದಲೂ ಇಡೀ ಮನುಕುಲಕ್ಕೆ ಮಹತ್ತರವಾದ ದಾರ್ಶನಿಕ ತತ್ವಗಳನ್ನು ನೀಡಿದ್ದು, ಅವರ ಸ್ಮರಣೆಯನ್ನು ಮಾಡಬೇಕಾಗಿದೆ. ಆದ್ದರಿಂದ ನಾವೆಲ್ಲರೂ ಅವರು ಸ್ಥಾಪಿಸಿದ ಪಂಚಪೀಠಗಳ ತತ್ವಗಳನ್ನು ಅನುಸರಣೆ ಮಾಡಬೇಕೆಂದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾಲೂಕಾಧ್ಯಕ್ಷ, ತಹಶೀಲ್ದಾರ್ ಹೆಚ್.ವಿಶ್ವನಾಥ ಅವರು ಮಾತನಾಡಿ ಅಂದಿನ ಕಾಲದಲ್ಲಿದ್ದ ಸ್ತ್ರೀ ಪುರುಷರ ನಡುವಿನ ಅಸಮಾನತೆಯನ್ನು ಹೋಗಲಾಡಿಸುವ ಮೂಲಕ ಸಮಾಜದಲ್ಲಿ ಸ್ತ್ರೀಯರ ಪಾವಿತ್ರ್ಯತೆಯನ್ನು ಎತ್ತಿಹಿಡಿದ ಮಹಾನ್ ಚೇತನವಾಗಿರುವ ಶ್ರೀ ರೇಣುಕಾಚಾರ್ಯ ಜಗದ್ಗುರು ಶೈವತತ್ವದ ಶಾಸ್ತ್ರವನ್ನು ಸಮಾಜಕ್ಕೆ ಪ್ರಚಾರ ಪಡಿಸಿದ್ದಾರೆ.
ವೀರಶೈವದ ಚಿಂತನೆಗಳ ಅಧ್ಯಯನ ಹಾಗೂ ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡು ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸಬೇಕಾಗಿದೆ ಎಂದು ತಿಳಿಸಿದರು.
ಜಯಂತ್ಯೋತ್ಸವ ನಿಮಿತ್ತ ಶ್ರೀ ಪ್ಯಾಟೆ ಆಂಜನೇಯ್ಯ ಸ್ವಾಮಿ ದೇವಸ್ಥಾನದಿಂದ ರೇಣುಕಾಶ್ರಮದವರೆಗೂ ರಾಜಬೀದಿಗಳಲ್ಲಿ ಅದ್ದೂರಿ ಮೆರವಣಿಗೆ ನಡೆದಿದ್ದು, ಸಮಾಜದ ಬಾಂಧವರು ಭಾಗವಹಿಸಿದ್ದರು. ನಾ.ಮಾ ಜಗಧೀಶ್ ಅವರ ತಂಡದಿಂದ ಸಂಗೀತ ಕಾರ್ಯಕ್ರಮ ಜರುಗಿತು.
ಇದೇ ವೇಳೆ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಮಲ್ಲಿಕಾರ್ಜುನ, ಹಿರಿಯ ನ್ಯಾಯವಾದಿ ಹೆಚ್.ಕೆ.ಮಲ್ಲಿಕಾರ್ಜುನ, ಬಿಜೆಪಿ ಪಕ್ಷದ ತಾಲೂಕಾಧ್ಯಕ್ಷ ಕುಂಟ್ನಾಳ್ ಮಲ್ಲಿಕಾರ್ಜುನ ಸ್ವಾಮಿ, ಅಕ್ಕಿಗಿರಣಿ ಮಾಲಿಕರ ಸಂಘದ ಅಧ್ಯಕ್ಷ ಎನ್.ಜಿ.ಬಸವರಾಜಪ್ಪ, ವೀರಶೈವ ತರುಣ ಸಂಘದ ಅಧ್ಯಕ್ಷ ಶಿವಕುಮಾರ, ಜಂಗಮ ಸಂಘದ ತಾಲೂಕಾಧ್ಯಕ್ಷ ಟಿ.ಎಮ್.ಸಿದ್ದಲಿಂಗಯ್ಯಸ್ವಾಮಿ, ವೀರಶೈವ ನೌಕರರ ಸಂಘದ ಅಧ್ಯಕ್ಷ ಎಮ್.ಬಸವನಗೌಡ, ಬಣಜಿಗ ಸಂಘದ ಅಧ್ಯಕ್ಷ ಬೆಳಗಲ್ ಮಲ್ಲಿಕಾರ್ಜುನ, ಲಾಳಗೊಂಡ ಸಂಘದ ಅಧ್ಯಕ್ಷ ಮುರವಣಿ ಬಸವನಗೌಡ, ಬಸವ ಬಳಗದ ಅಧ್ಯಕ್ಷ ಡಾ.ಶಿವಪ್ರಕಾಶ ಇನ್ನಿತರ ಮುಖಂಡರು ಇದ್ದರು.
ವರದಿ : ಶ್ರೀನಿವಾಸ ನಾಯ್ಕ




