ಹುಬ್ಬಳ್ಳಿ: ಹುಬ್ಬಳ್ಳಿ ವಿಮಾನ ನಿಲ್ದಾಣ ವಿಸ್ತರಣೆಯಲ್ಲಿ ಜಮೀನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ನಿವೇಶನದಾರರಿಗೆ ನಿವೇಶನ ಹಾಗೂ ಅಕ್ರಮ-ಸಕ್ರಮ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಂತೆ ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟದ ಆಗ್ರಹಿಸಿದೆ.
ಈ ಕುರಿತು ನಗರದಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ರಘೋತ್ತಮ ಕುಲಕರ್ಣಿ ನಿವೇಶನ ಕಳೆದುಕೊಂಡವರಿಗೆ ಹಾಗೂ ಅತೀ ಕಡುಬಡವ ಸಂತ್ರಸ್ತರಿಗೂ ಪುನರ್ವಸತಿ ಕಲ್ಪಿಸಿಕೊಟ್ಟು ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸರ್ಕಾರ ಹಾಗೂ ಹೈಕೋರ್ಟ್ಗೂ ತಪ್ಪು ಮಾಹಿತಿ ಕೊಟ್ಟಿದ್ದರಿಂದ ಸಂತ್ರಸ್ತರು ಪುನರ್ವಸತಿ ನಿವೇಶನ ಪಡೆಯದೇ ಇರುವಂತಾಗಿದೆ. ಹೈಕೋರ್ಟ್ ಆದೇಶವಿದ್ದರೂ ನಿವೇಶನವನ್ನು ವಿತರಿಸದೇ ಆದೇಶವನ್ನು ಪಾಲಿಸಿರುವುದಿಲ್ಲ ಎಂದು ದೂರಿದರು.
ಸಂತ್ರಸ್ತರಿಗೆ ಕೆ.ಐ.ಎ.ಡಿ.ಬಿ. ಯವರು ಉಣಕಲ್ ಗ್ರಾಮದ ಸರ್ವೇ ನಂ ೫೯೪ ಬ ದಲ್ಲಿ ಬರುವ ನಿವೇಶನಕ್ಕೆ ೨೦೦೮ ರಲ್ಲಿ ಪ್ರತಿ ಚದರ ಅಡಿಗೆ ೬೦೦ ರೂ. ಅಂತ ಪರಿಹಾರ ವಿತರಿಸಿ ಅದೇ ಸರ್ವೇ ನಂಬರಿನಲ್ಲಿ ಬರುವ ನಿವೇಶನಗಳಿಗೆ ೨೦೧೧-೧೨ ರಲ್ಲಿ ೪೫೦ ರೂ. ಎಂದು ನಿಗದಿಪಡಿಸಿದ್ದು ಎಷ್ಟು ಸರಿ. ಸಂತ್ರಸ್ತರಿಗೆ ೪೫೦ ರೂ. ಪರಿಹಾರ ಕೊಟ್ಟು ಪುನರ್ವಸತಿ ಎಂದು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನ ಹಂಚಿಕೆ ಮಾಡಿ ನಿವೇಶನದ ಬೆಲೆಯನ್ನು ಪ್ರತಿ ಚದರ ಅಡಿಗೆ ೪೮೫ ರೂ. ಎಂದು ನಿಗದಿಪಡಿಸಿದ್ದು ಯಾವ ನ್ಯಾಯ ಎಂದು ಪ್ರಶ್ನಿಸಿದರಲ್ಲದೇ, ಕೂಡಲೇ ಸಮಸ್ಯೆ ಬಗೆ ಹರಿಸುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಸ್.ಎ. ಜಹಾಗೀರದಾರ, ಐ.ಬಿ. ಚಡಿಹಾಳ, ಎಂ.ಜಿ. ರಾಯ್ಕರ, ಆರ್.ಎಂ. ಅಣ್ವೇಕರ, ಗುರುನಾಥ ಎಲಿವಾಳ, ಬಸವರಾಜ ಖಾನಾಪುರ ಸೇರಿದಂತೆ ಹಲವಾರು ಸಂತ್ರಸ್ತರು ಪಾಲ್ಗೊಂಡಿದ್ದರು.
ವರದಿ: ಸುಧೀರ್ ಕುಲಕರ್ಣಿ




