ಹುಬ್ಬಳ್ಳಿ : ವಿಮಾನ ನಿಲ್ದಾಣ ವಿಸ್ತರಣೆಯಲ್ಲಿ ವಶಪಡಿಸಿಕೊಂಡಿರುವ ನಿವೇಶನದಾರರಿಗೆ ನಿವೇಶನ ಹಾಗೂ ಅಕ್ರಮ-ಸಕ್ರಮ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸುವಂತೆ ಆಗ್ರಹಿಸಿ ನಗರದದ ಗೋಉಲ ರಸ್ತೆಯ ವಿಮಾನ ನಿಲ್ದಾಣದೆದುರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣ ಸಂತ್ರಸ್ತರ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಿವೇಶನ ಕಳೆದುಕೊಂಡವರಿಗೆ ಹಾಗೂ ಅತೀ ಕಡುಬಡವರಾದ ಅಕ್ರಮ ಸಕ್ರಮ ಸಂತ್ರಸ್ತರಿಗೂ ಪುನರವಸತಿ ಕಲ್ಪಿಸಿಕೊಟ್ಟು ಆಗಿರುವ ಅನ್ಯಾಯವನ್ನು ಸರಿಪಡಿಸಬೇಕು. ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸರ್ಕಾರಕ್ಕೂ ಹಾಗೂ ಮಾನ್ಯ ಉಚ್ಚನ್ಯಾಯಲಯಕ್ಕೂ ತಪ್ಪು ಮಾಹಿತಿ ಕೊಟ್ಟಿದ್ದರಿಂದ ಸಂತ್ರಸ್ತರು ಪುನರ್ವಸತಿ ನಿವೇಶನ ಪಡೆಯದೇ ಇರುವಂತಾಗಿದೆ. ಉಚ್ಚನ್ಯಾಯಾಲಯದ ಆದೇಶವಿದ್ದರೂ ನಿವೇಶನವನ್ನು ವಿತರಿಸದೇ ಆದೇಶವನ್ನು ಪಾಲಿಸಿರುವುದಿಲ್ಲ.

ಸಂತ್ರಸ್ತರಿಗೆ ಕೆ.ಐ.ಎ.ಡಿ.ಬಿ. ಯವರು ಉಣಕಲ್ ಗ್ರಾಮದ ಸರ್ವೇ ನಂ ೫೯೪ ಬ ದಲ್ಲಿ ಬರುವ ನಿವೇಶನಕ್ಕೆ ೨೦೦೮ ರಲ್ಲಿ ಪ್ರತಿ ಚದರ ಅಡಿಗೆ ೬೦೦ ರೂ. ಅಂತ ಪರಿಹಾರ ವಿತರಿಸಿ ಅದೇ ಸರ್ವೇ ನಂಬರಿನಲ್ಲಿ ಬರುವ ನಿವೇಶನಗಳಿಗೆ ೨೦೧೧-೧೨ ರಲ್ಲಿ ೪೫೦ ರೂ. ಎಂದು ನಿಗದಿಪಡಿಸಿದ್ದು ಎಷ್ಟು ಸರಿ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

ಒಕ್ಕೂಟದ ಅಧ್ಯಕ್ಷ ರಘೋತ್ತಮ ಕುಲಕರ್ಣಿ, ಉಪಾಧ್ಯಕ್ಷ ಎಸ್.ಎ. ಜಹಾಗೀರದಾರ, ಕಾರ್ಯದರ್ಶಿ ಐ.ಬಿ. ಚಡಿಹಾಳ, ಎಂ.ಜಿ. ರಾಯ್ಕರ, ಶಿರೂರ, ಆರ್.ಎಂ. ಅಣ್ವೇಕರ, ಗುರುನಾಥ ಎಲಿವಾಳ, ಬಸವರಾಜ ಖಾನಾಪುರ ಸೇರಿದಂತೆ ನೂರಾರು ಸಂತ್ರಸ್ಥರು ಪ್ರತಿಭಟನೆ ಪಾಲ್ಗೊಂಡಿದ್ದರು.
ವರದಿ : ಸುಧೀರ್ ಕುಲಕರ್ಣಿ




