ತುರುವೇಕೆರೆ: ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ರಾಜ್ಯ ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಫೆಡರೇಷನ್ ತಾಲ್ಲೂಕು ಘಟಕ ನೌಕರರ ಸಂಘ (ಸಿಐಟಿಯು) ಇಂದು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿತು. ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಹಿನ್ನೆಲೆಯಲ್ಲಿ ತುರುವೇಕೆರೆ ತಾಲೂಕು ಅಂಗನವಾಡಿ ನೌಕರರುಗಳು ಈ ದಿನ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಎಫ್.ಆರ್.ಎಸ್. ಪದ್ಧತಿಯಿಂದ ಇಕೆವೈಸಿ, ಒಟಿಪಿ ಸೇರಿದಂತೆ ಹಲವು ತಾಂತ್ರಿಕ ತೊಂದರೆಗಳಾಗುತ್ತಿದೆ. ಇದನ್ನು ಪರಿಹರಿಸದೆ ಅಧಿಕಾರಿಗಳು ಕಾರ್ಯಕತೆಯರ ಗೌರವಧನ ಕಡಿತ, ನೋಟೀಸ್ ನೀಡುವ ಬೆದರಿಕೆ ಹಾಕುತ್ತಿದ್ದಾರೆಂದು ಆರೋಪಿಸಿದ ಪ್ರತಿಭಟನಾಕಾರರು, ಅಂಗನವಾಡಿಯಲ್ಲಿ ನಿವೃತ್ತರಾದವರಿಗೆ ಕನಿಷ್ಠ 10 ಸಾವಿರ ಪಿಂಚಣಿ ನೀಡಬೇಕು. ಹಾಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಗೌರವಧನ ಹೆಚ್ಚಿಸಬೇಕು. ಅಂಗನವಾಡಿ ಕಾರ್ಯಕರ್ತೆಯರ ನಿವೃತ್ತಿಯ ವಯಸ್ಸನ್ನು 65 ವರ್ಷಕ್ಕೆ ಹೆಚ್ಚಳ ಮಾಡಬೇಕು. ಕಾರ್ಮಿಕರ ಹಿತಕ್ಕೆ ಮಾರಕವಾಗಿರುವ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆದು ಹಿಂದೆ ಇದ್ದ ಕಾನೂನನ್ನೇ ಪುನರ್ ಸ್ಥಾಪಿಸಬೇಕು. ನ್ಯಾಯಾಲಯದ ತೀರ್ಪಿನಂತೆ ಅಂಗನವಾಡಿ ಉದ್ಯೋಗಿಗಳ ಸೇವೆ ಮತ್ತು ಗೌರವವನ್ನು ನಾಗರೀಕ ಸೇವೆಯಾಗಿ ಪರಿಗಣಿಸಿ ಕಾರ್ಯಕರ್ತೆ ಮತ್ತು ಸಹಾಯಕಿಯರನ್ನು ಸಿ ಮತ್ತು ಡಿ ದರ್ಜೆಯ ನೌಕರರನ್ನಾಗಿ ಖಾಯಂಗೊಳಿಸಬೇಕೆಂದು ಆಗ್ರಹಿಸಿದರು.
ಪ್ರತಿಭಟನೆ ನಂತರ ರಾಜ್ಯ ಅಂಗನವಾಡಿ ಕಾರ್ಯಕರ್ತರ ಮತ್ತು ಸಹಾಯಕಿಯರ ಫೆಡರೇಷನ್ ತಾಲ್ಲೂಕು ಘಟಕ ನೌಕರರ ಸಂಘ (ಸಿಐಟಿಯು) ಕಾರ್ಯಕರ್ತರು, ಗ್ರೇಡ್ 2 ತಹಸೀಲ್ದಾರ್ ಸುಮತಿ ಅವರಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷೆ ನೇತ್ರಾವತಿ, ಕಾರ್ಯದರ್ಶಿ ದಾನಮ್ಮ, ರಂಗಮ್ಮ, ಶೋಭಾ ಸೇರಿದಂತೆ ಹಲವರು ಭಾಗವಹಿಸಿದ್ದರು.
ವರದಿ: ಗಿರೀಶ್ ಕೆ ಭಟ್, ತುರುವೇಕೆರೆ