ಭಾಲ್ಕಿ : ನಾವು ಪರಿಸರವನ್ನು ರಕ್ಷಿಸಿದಾಗ ಮಾತ್ರ ಪರಿಸರ ನಮ್ಮನ್ನು ರಕ್ಷಿಸುತ್ತದೆ ಈ ನಿಟ್ಟಿನಲ್ಲಿ ಎಲ್ಲರು ಪರಿಸರ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಸೂರ್ಯ ಫೌಂಡೇಶನ್ ದಕ್ಷಿಣ ಭಾರತದ ಸಂಯೋಜಕರಾದ ಅಜಯ ಖರಸನ್ ಹೇಳಿದರು.
ಭಾಲ್ಕಿ ತಾಲ್ಲೂಕಿನ ರಾಚಪ್ಪಾ ಗೌಡಗಾಂವ ಗ್ರಾಮದಲ್ಲಿ ಸೂರ್ಯ ಫೌಂಡೇಶನ್ ವತಿಯಿಂದ ಸಸಿ ನೆಟ್ಟು ಅವರು ಮಾತನಾಡಿದರು.

ಭೂಮಿಯ ಮೇಲೆ ಜೀವವಿರುವ ಪ್ರತಿಯೊಂದು ಜೀವ ರಾಶಿಗೆ ಆಹಾರದ ಜೊತೆಗೆ ಗಾಳಿ ಅತ್ಯಗತ್ಯವಾಗಿದೆ ಇಂದಿನ ಸ್ಥಿತಿಗತಿಯನ್ನು ನೋಡುತ್ತಿದ್ದರೆ ಮಾನವನಿಗೆ ಗಿಡಗಳ ಮಹತ್ವದ ಅರಿವು ಉಂಟಾಗುತ್ತಿದೆ. ಮಾನವ ಚಟುವಟಿಕೆಗಳಿಂದ ಪರಿಸರಕ್ಕೆ ಆಗುವ ಹಾನಿಯನ್ನು ತಡೆಗಟ್ಟುವುದು ಮತ್ತು ಭೂಮಿಯನ್ನು ರಕ್ಷಿಸುವುದು ಎಲ್ಲರ ಗುರಿಯಾಗಬೇಕು ಎಂದರು.
ಸೂರ್ಯ ಫೌಂಡೇಶನ್ ರಾಜ್ಯ ಸಂಯೋಜಕ ಗುರುನಾಥ ರಾಜಗೀರಾ ಮಾತನಾಡಿ ಸೂರ್ಯ ಫೌಂಡೇಶನ್ ವತಿಯಿಂದ ಜಿಲ್ಲೆಯಾದ್ಯಂತ ಪರಿಸರದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅನೇಕ ಜಾಗೃತಿ ಕಾರ್ಯಕ್ರಮ ಹಾಗೂ ಸಸಿ ನೆಡುವ ಕಾರ್ಯಕ್ರಮವಾಗುತ್ತಿವೆ, ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವುದು ಮತ್ತು ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಪ್ರಮುಖರಾದ ರಂಗರಾವ ಬಿರಾದಾರ, ಮಲ್ಲಿಕಾರ್ಜುನ ಪಾಟೀಲ ಸೇರಿದಂತೆ ಇತರರಿದ್ದರು.
ವರದಿ: ಸಂತೋಷ ಬಿಜಿ ಪಾಟೀಲ




