ಮಂಗಳೂರಿನಲ್ಲಿ ಸುಹಾಸ್ ಶೆಟ್ಟಿ ಹತ್ಯೆ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹಲವು ಅನುಮಾನ ವ್ಯಕ್ತಪಡಿಸಿ ಪ್ರಶ್ನೆಗಳನ್ನು ಎತ್ತಿದ್ದಾರೆ. ಸುಹಾಸ್ ಶೆಟ್ಟರನ್ನೇ ಗುರಿಯಾಗಿಸಿಕೊಂಡು ಬಜೈ ಪೊಲೀಸ್ ಠಾಣೆಯ ಮುಖ್ಯ ಪೇದೆ ರಶೀದ್ ಪದೇ ಪದೇ ಅವರಿಗೆ ಕರೆ ಮಾಡಿ ಮಾನಸಿಕ ಹಿಂಸೆ ನೀಡುತ್ತಿದ್ದು, ಯಾಕೆ?
ಎಂದು ಯತ್ನಾಳ್ ಕೇಳಿದ್ದಾರೆ.
ಆತ್ಮರಕ್ಷಣೆಗೆ ಸುಹಾಸ್ ಅವರು ತಮ್ಮ ಕಾರಿನಲ್ಲಿ ಇಟ್ಟಿದ್ದ ಆಯುಧಗಳನ್ನು ತೆಗೆಯಬೇಕೆಂದು ಸುಹಾಸ್ ಅವರಿಗೆ ರಶೀದ್ ಆದೇಶ ನೀಡಿದ್ದು, ಅಲ್ಲದೆ, ಒಂದು ವೇಳೆ ತೆಗೆಯದಿದ್ದರೆ ಕಳ್ಳತನದ ಕೇಸನ್ನು ಹಾಕುತ್ತೇನೆಂದು ಹೇಳಿರುವ ಬಗ್ಗೆ ತನಿಖೆಯಾಗಲಿ, ರಶೀದ್ ಅವರ ಸಿಡಿಆರ್ (ಕಾಲ್ ಡೀಟೇಲ್ ರೆಕಾರ್ಡ್) ಅನ್ನು ಕೂಡಲೇ ವಶಪಡಿಸಿಕೊಂಡು ರಶೀದನಿಗೆ ಯಾರು ಕರೆ ಮಾಡಿದ್ದರು? ಮೃತ ಸುಹಾಸ್ ಅವರಿಗೆ ಪದೇ ಪದೇ ಕಿರುಕುಳ ನೀಡಲು ಯಾರು ಕುಮ್ಮಕ್ಕು ನೀಡುತ್ತಿದ್ದರು? ಎಂಬುದನ್ನು ತನಿಖೆಗೆ ಒಳಪಡಿಸಲಿ ಎಂದು ಆಗ್ರಹಿಸಿದ್ದಾರೆ.
ಪ್ರಾಣ ಬೆದರಿಕೆ ಇರುವ ಹಿಂದೂ ಕಾರ್ಯಕರ್ತರು ತಮ್ಮ ಹಾಗೂ ತಮ್ಮ ಪರಿವಾರದ ಸದಸ್ಯರ ಆತ್ಮರಕ್ಷಣೆಗೆ ವಾಹನದಲ್ಲಿ ಹಾಗೂ ಮನೆಯಲ್ಲಿ ಆಯುಧಗಳನ್ನು ಇಟ್ಟುಕೊಳ್ಳಲು ಪೊಲೀಸರು ಅವಕಾಶ ಕಲ್ಪಿಸಿಕೊಡಬೇಕು. ತಾಂತ್ರಿಕ ಕಾರಣವೊಡ್ಡಿ ನಿರಾಕರಿಸಬಾರದು. ಒಂದು ವೇಳೆ ನಿರಾಕರಿಸಿ, ಅದರಿಂದ ನಮ್ಮ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆಯಾದರೆ, ಅದಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೇ ನೇರ ಹೊಣೆಯಾಗಿರುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಜಿಹಾದಿಗಳ ಉಪಟಳದಿಂದ ಕರಾವಳಿಯ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸುಹಾಸ್ ಶೆಟ್ಟಿ ಅವರ ಸಾವು ಸಮಸ್ತ ಹಿಂದೂ ಬಳಗಕ್ಕೆ ಮರೆಯಲಾಗದಂತಹ ನೋವಾಗಿದೆ. ಕಳ್ಳ ಬೆಕ್ಕಿನಂತೆ ಬಂದ ಆಗಂತುಕರು ಸುಹಾಸ್ ಮತ್ತು ಸಹಚರರ ಮೇಲೆ ದಾಳಿ ಮಾಡಿರುವುದು ಇವರು ಎಂತ ಹೇಡಿಗಳು? ಅಂಜುಬುರುಕರು ಎಂದು ತೋರಿಸುತ್ತದೆ. ದ್ವೇಷ, ಭಿನ್ನಾಭಿಪ್ರಾಯ, ವೈಚಾರಿಕವಾಗಿ ಹಾಗೂ ಸೈದ್ಧಾಂತಿಕವಾಗಿರಬೇಕೇ ಹೊರತು ಕೊಲೆ ಮಾಡುವ ಮಟ್ಟಕ್ಕಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೊಲೆಗಡುಕರಿಗೆ ಅರ್ಥ ಆಗುವಂತಹ ಭಾಷೆಯಲ್ಲಿ ಸರ್ಕಾರ ವ್ಯವಹರಿಸಲಿ. ಅವರ ಜಮೀನು, ಆಸ್ತಿಯನ್ನು ಮುಟ್ಟುಗೋಲು ಹಾಕಲಿ. ತನ್ನ ಜೀವವನ್ನೂ ಲೆಕ್ಕಿಸದೆ ಸ್ವಂತಕ್ಕೆ ಸ್ವಲ್ಪ, ಸಮಾಜಕ್ಕೆ ಸರ್ವಸ್ವ ಎಂದು ದುಡಿಯುವ ಹಿಂದೂ ಕಾರ್ಯಕರ್ತರ ನೋವು ನನಗೆ ಸಂಪೂರ್ಣವಾಗಿ ಅರ್ಥವಾಗುತ್ತದೆ. ಸುಹಾಸ್ನನ್ನು ಕಳೆದುಕೊಂಡಿದ್ದೇವೆ. ಪುತ್ರನ ಅಕಾಲಿಕ ಮರಣದಿಂದ ಅವರ ಕುಟುಂಬ ಜರ್ಜರಿತವಾಗಿದೆ. ಈ ಸಂದರ್ಭದಲ್ಲಿ ನಾನು ನನ್ನ ಅಲ್ಪ ಸಹಾಯ ಮಾಡಿದ್ದೇನೆ. ಗೋ ಮಾತೆಯ ಸೇವೆ ಮಾಡುವವರು, ಗೋ ಮಾತೆಯ ರಕ್ಷಣೆ ಮಾಡುವವರ ಹಿಂದೆ ನಾನು ಸದಾ ಇರುತ್ತೇನೆ ಎಂದು ಯತ್ನಾಳ್ ಭರವಸೆ ನೀಡಿದ್ದಾರೆ.




