ಶ್ರೀನಗರ: ಹಿಂದೂಗಳ ಪವಿತ್ರ ಯಾತ್ರಾ ಸ್ಥಳ ಅಮರನಾಥ ಯಾತ್ರೆ ಜುಲೈ 3ರಿಂದ ಆರಂಭವಾಗಲಿದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ತಿಳಿಸಿದ್ದಾರೆ.
ಅಮರನಾಥ ದೇವಾಲಯ ಮಂಡಳಿಯ (SASB) ಅಧ್ಯಕ್ಷರೂ ಆಗಿರುವ ಮನೋಜ್ ಸಿನ್ಹಾ, ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭವಾಗಲಿದ್ದು, 57 ದಿನಗಳ ನಂತರ ಸಂಪನ್ನಗೊಳ್ಳಲಿದೆ ಅಂದರೆ ಆಗಸ್ಟ್ 28 ರಂದು ರಕ್ಷಾ ಬಂಧನದ ದಿನ ಯಾತ್ರೆ ಮುಕ್ತಾಯಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಶಿವನಿಗೆ ಪ್ರಥಮ ಪೂಜೆಯನ್ನು ಜೂನ್ 29 ಜ್ಯೇಷ್ಠ ಪೂರ್ಣಿಮೆಯಂದು ನೆರವೇರಿಸಲಾಗುವುದು. ಯಾತ್ರೆಗೆ ಮುಂಗಡ ನೋಂದಣಿ ಎಪ್ರಿಲ್ 15 ರಂದು ಆಫ್ಲೈನ್ ಮತ್ತು ಆನ್ಲೈನ್ ವಿಧಾನಗಳ ಮೂಲಕ ಪ್ರಾರಂಭವಾಗಲಿದೆ. ಈ ಸೌಲಭ್ಯವು ದೇಶಾದ್ಯಂತ J&K ಬ್ಯಾಂಕ್, PNB, SBI ಮತ್ತು Yes ಬ್ಯಾಂಕ್ನ 554 ಶಾಖೆಗಳಲ್ಲಿ ಲಭ್ಯವಿರುತ್ತದೆ ಎಂದು ವಿವರಿಸಿದರು..
ಅನಂತ್ನಾಗ್ ಜಿಲ್ಲೆಯ ಸಾಂಪ್ರದಾಯಿಕ 48 ಕಿಲೋಮೀ ನುನ್ವಾನ್-ಪಹಲ್ಗಾಮ್ ಮಾರ್ಗ ಮತ್ತು ಗಂಡೇರ್ಬಾಲ್ ಜಿಲ್ಲೆಯ 14 ಕಿಮೀ ಕಡಿದಾದ ಬಾಲ್ಟಾಲ್ ಮಾರ್ಗವಾದ ಅವಳಿ ಹಳಿಗಳಿಂದ ತೀರ್ಥಯಾತ್ರೆ ಪ್ರಾರಂಭವಾಗಲಿದೆ. ಯಾತ್ರೆಯನ್ನು ಸುರಕ್ಷಿತವಾಗಿ ನಡೆಸಲು ಭದ್ರತೆ ಮತ್ತು ಇತರ ಲಾಜಿಸ್ಟಿಕ್ಸ್ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ.
ಈ ವರ್ಷದ ಫೆಬ್ರವರಿಯಲ್ಲಿ 50ನೇ SASB ಸಭೆಯಲ್ಲಿ, ಶ್ರೀನಗರ ಮತ್ತು ಜಮ್ಮುವಿನಲ್ಲಿ ಲೇಸರ್, ಸೌಂಡ್ ಶೋ ನಡೆಸಲಾಗುವುದು. ಇದನ್ನು ಅನಂತನಾಗ್ ಜಿಲ್ಲೆಯ ಪಹಲ್ಗಾಮ್ ಪ್ರವಾಸಿ ತಾಣದ ಮೇಲಿನ ಬೆಟ್ಟಗಳಲ್ಲಿರುವ ಅಮರನಾಥ ಗುಹೆಯಲ್ಲಿ ಪೂಜಿಸಲ್ಪಡುವ ಹಿಮ ವಿಗ್ರಹವನ್ನು ‘ಬಾಬಾ ಬರ್ಫಾನಿ’ (ಶಿವ)ಗೆ ಸಮರ್ಪಿಸಲಾಗುವುದು ಎಂದು ಸಿನ್ಹಾ ತಿಳಿಸಿದ್ದಾರೆ.
ಈ ಕಾರ್ಯಕ್ರಮವು ಸಾಂಸ್ಕೃತಿಕ ದಾರಿದೀಪವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದ ಶ್ರೀಮಂತ ಧಾರ್ಮಿಕ ಇತಿಹಾಸವನ್ನು ಎತ್ತಿ ತೋರಿಸುತ್ತದೆ.
ಕಳೆದ ಕೆಲವು ವರ್ಷಗಳಿಂದ, ಗಂದೇರ್ಬಾಲ್ನ ಬಾಲ್ಟಾಲ್ ಮತ್ತು ಅನಂತ್ನಾಗ್ನ ಪಹಲ್ಗಾಮ್ನಿಂದ ರಸ್ತೆಗಳನ್ನು ಗಡಿ ರಸ್ತೆಗಳ ಸಂಸ್ಥೆ ಯಾತ್ರಿಕರ ಸುಗಮ ಸಂಚಾರಕ್ಕಾಗಿ ಡಾಂಬರು ಹಾಕಿ ಅಗಲೀಕರಣಗೊಳಿಸಿದೆ.
SASB ನೋಂದಾಯಿತ ಯಾತ್ರಿಕರು, ಸೇವೆ ಒದಗಿಸುವವರು, ಅಧಿಕಾರಿಗಳು, ಕೆಲಸಗಾರರು ಮತ್ತು ಪೂಜಾರಿಗಳಿಗೆ ಅಪಘಾತ ವಿಮಾ ರಕ್ಷಣೆಯನ್ನು 5 ಲಕ್ಷ ರೂ.ಗಳಿಂದ 10 ಲಕ್ಷ ರೂ.ಗಳಿಗೆ ಹೆಚ್ಚಿಸಿದೆ ಎಂದರು.
ಮಹತ್ವದ ಸೂಚನೆ:
ದೇಗುಲ ಮಂಡಳಿ ಹೊರಡಿಸಿದ ನಿರ್ದೇಶನದ ಪ್ರಕಾರ, 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮತ್ತು 70 ವರ್ಷಕ್ಕಿಂತ ಮೇಲ್ಪಟ್ಟ ಯಾವುದೇ ವ್ಯಕ್ತಿ ಈ ವರ್ಷದ ತೀರ್ಥಯಾತ್ರೆಗೆ ನೋಂದಾಯಿಸಲು ಅನುಮತಿಸಿಲ್ಲ. ಇದಲ್ಲದೆ, ಆರು ವಾರಗಳಿಗಿಂತ ಹೆಚ್ಚಿನ ಗರ್ಭಿಣಿಯರಿಗೂ ಕೂಡ ತೀರ್ಥಯಾತ್ರೆಯನ್ನು ಕೈಗೊಳ್ಳಲು ಅನುಮತಿ ಇರುವುದಿಲ್ಲ. ಯಾತ್ರೆಗೆ ನೋಂದಾಯಿಸುವ ಮೊದಲು ಯಾತ್ರಿಕರು ಮತ್ತು ವೈದ್ಯರು ಭರ್ತಿ ಮಾಡಬೇಕಾದ ವಿವರವಾದ ವೈದ್ಯಕೀಯ ಮಾರ್ಗಸೂಚಿಗಳನ್ನೂ ಸಹ ಬಿಡುಗಡೆ ಮಾಡಿದೆ.
SASB ನೀಡುವ ಕಡ್ಡಾಯ ಆರೋಗ್ಯ ಪ್ರಮಾಣಪತ್ರ ವನ್ನು ಅರ್ಜಿದಾರರು ಎಪ್ರಿಲ್ 8ರಂದು ಅಥವಾ ನಂತರ ಭರ್ತಿ ಮಾಡಬೇಕು. ಅರ್ಜಿಯಲ್ಲಿ ಯಾತ್ರಿಕರು ತಮ್ಮ ಆರೋಗ್ಯ ಸಂಬಂಧಿತ ಸಮಸ್ಯೆಗಳ ಬಗ್ಗೆ ಸಂಪೂರ್ಣ ವಿವರಗಳೊಂದಿಗೆ ಪ್ರತಿ ಪರವಾನಗಿಗೆ 150 ರೂ.ಗಳ ನಿಗದಿತ ಶುಲ್ಕದೊಂದಿಗೆ ಹೆಸರು, ಪ್ರಯಾಣದ ದಿನಾಂಕ, ಆಧಾರ್ ಕಾರ್ಡ್ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯವಿರುವ ಎಲ್ಲಾ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಿ ಗೊತ್ತುಪಡಿಸಿದ ಶಾಖೆಯಲ್ಲಿ ಸಲ್ಲಿಸಬೇಕಾಗುತ್ತದೆ.
ಇದಲ್ಲದೇ ಪ್ರಮಾಣಪತ್ರದಲ್ಲಿ, ಅರ್ಜಿದಾರರು ಉಸಿರಾಟದ ತೊಂದರೆ ಇದ್ದಲ್ಲಿ, ಮಧುಮೇಹ, ಉಸಿರಾಟದ ಕಾಯಿಲೆ, ಅಧಿಕ ರಕ್ತದೊತ್ತಡ, ಅಸ್ತಮಾ, ರಕ್ತಸ್ರಾವದ ಪ್ರವೃತ್ತಿ, ಅಪಸ್ಮಾರ, ಹೃದಯ ಕಾಯಿಲೆ, ನರಗಳ ತೊಂದರೆ, ಕೀಲು ನೋವು, ಕಿವಿಯಿಂದ ಸೋರುವಿಕೆ, ಪಾರ್ಶ್ವವಾಯು ಮತ್ತು ಧೂಮಪಾನಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೆ ಈ ಬಗ್ಗೆ ವಿವರ ನೀಡಬೇಕಾಗುತ್ತದೆ ಎಂದು ಸೂಚಿಸಲಾಗಿದೆ.




