ಸೇಡಂ: ತಾಲೂಕಿನ ಮುಧೋಳ ಗಡಿಭಾಗದಲ್ಲಿ ರಾಜಾರೋಷವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿರುವ ಹಿನ್ನೆಲೆ ಅಂಬೇಡ್ಕರ್ ಯುವ ಸೇನೆ ತಾಲೂಕು ಸಮಿತಿ ವತಿಯಿಂದ ಗುರುವಾರ ಅಬಕಾರಿ ನಿರೀಕ್ಷಕರಿಗೆ ಮನವಿ ಸಲ್ಲಿಸಿದರು.
ಮನವಿ ಸಲ್ಲಿಸಿ ಅಧ್ಯಕ್ಷ ಗೋಪಾಲ್ ಎಲ್ ನಾಟೀಕಾರ ಮಾತನಾಡಿ, ‘ರೇಣುಕಾ ಮದ್ಯದ ಅಂಗಡಿಯಿಂದ ದಿನನಿತ್ಯ ಮದ್ಯವನ್ನು ಅಕ್ರಮವಾಗಿ ಗ್ರಾಮಗಳಿಗೆ ಸಾಗಾಣಿಕೆ ಮಾಡಲಾಗುತ್ತಿದೆ ಎಂದು ದೂರಿದರು. ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಮದ್ಯವನ್ನು ಸಂಗ್ರಹಿಸಿ ಮಧ್ಯವರ್ತಿಗಳ ಮೂಲಕ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ’ ಎಂದು ಆರೋಪಿಸಿದರು.
‘ಈ ರೀತಿಯ ಚಟುವಟಿಕೆಗಳು ಕರ್ನಾಟಕ ಅಬಕಾರಿ ಕಾಯ್ದೆ, 1965 ಹಾಗೂ ಸಂಬಂಧಿತ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ’ ಎಂದು ಆರೋಪಿಸಿದ್ದಾರೆ.
ಆದ್ದರಿಂದ, ಸಂಬಂಧಿತ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ದಾಳಿ ನಡೆಸಿ ಪರಿಶೀಲನೆ ಕೈಗೊಳ್ಳಬೇಕು. ಅಕ್ರಮ ಮದ್ಯ ಸಂಗ್ರಹಣೆ ಹಾಗೂ ಮಾರಾಟದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ, ಅಗತ್ಯವಿದ್ದಲ್ಲಿ ಪರವಾನಿಗೆ ರದ್ದುಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಯುವ ಸೇನೆ ತಾಲೂಕ ಅಧ್ಯಕ್ಷರಾದ ಗೋಪಾಲ ಎಲ್ ನಾಟಿಕರ್, ಮುಧೋಳ ವಲಯ ಉಪಾಧ್ಯಕ್ಷ ಕೈಲಾಸ ಮೌರ್ಯ ಸೇರಿದಂತೆ ಅಂಬೇಡ್ಕರ್ ಯುವ ಸೇನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




