ಲಿಂಗಸ್ಗೂರು : ಸಿಐಟಿಯು ಹಟ್ಟಿ ಚಿನ್ನದ ಗಣಿ ಕಂಪನಿ ಮುಂದೆ ಪ್ರತಿಭಟನೆ ಅಭಿವೃದ್ಧಿಯ ಹೆಸರಿನಲ್ಲಿ ಕಾರ್ಪೊರೇಟ್ ಕಂಪನಿಗಳ ಸೇವಕರನ್ನಾಗಿ ಮಾಡಲು ರೂಪಿಸಿರುವ ಕಾರ್ಮಿಕ ವಿರೋಧಿ 4 ಕಾರ್ಮಿಕ ಸಂಹಿತೆಗಳನ್ನು ವಾಪಾಸ್ ಪಡೆಯಲು ಆಗ್ರಹಿಸಿ ಸಿಐಟಿಯು ನಿಂದ ಪ್ರತಿಭಟನೆ ನಡೆಸಲಾಯಿತು.
ಮಂಗಳವಾರ ಹಟ್ಟಿ ಚಿನ್ನದ ಗಣಿ ಕಂಪನಿ ಮುಂದೆ ಪ್ರತಿಭಟನೆ ನಡೆಸಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಗಣಿ ಕಂಪನಿ ಆಡಳಿತಕ್ಕೆ ನೀಡಲಾಯಿತು.
ವೇತನ ಸಂಹಿತೆಗಳಲ್ಲಿ 4 ಕಾನೂನು, ಕೈಗಾರಿಕಾ ಬಾಂದವ್ಯ ಸಂಹಿತೆಯಲ್ಲಿ 3 ಕಾನೂನು ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆಯಲ್ಲಿ 13 ಕಾನೂನು ಮತ್ತು ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ 9 ಕಾನೂನು ಸೇರಿದಂತೆ ಒಟ್ಟು 29 ಕಾನೂನುಗಳನ್ನು 4 ಸಂಹಿತೆಗಳಲ್ಲಿ ರೂಪಿಕರಿಸಲಾಗಿದೆ.
ದೇಶದಲ್ಲಿ ಅತೀಹೆಚ್ಚು ಅಸಂಘಟಿತ, ಸ್ಕಿಂ ಮತ್ತು ಅನೌಪಚಾರಿಕ ಕಾರ್ಮಿಕರನ್ನು ಕಾನೂನುಗಳಡಿಯಲ್ಲಿ ತರಬೇಕು ಮತ್ತು 600 ರೂ. ಒಂದು ದಿನದ ವೇತನ ನಿಗದಿ ಮಾಡಬೇಕೆಂಬ ಕೇಂದ್ರ ಕಾರ್ಮಿಕ ಸಂಘಟನೆಗಳ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ವೇತನ ಸಂಹಿತೆಯಲ್ಲಿ 15ನೇ ILC ಯ ಕನಿಷ್ಠ ವೇತನ, ನ್ಯಾಯ ಸಮ್ಮತ ಮತ್ತು ಜೀವಿತ ವೇತನಗಳನ್ನು ನಿಗದಿ ಮಾಡುವ ಅಂಶಗಳನ್ನು ಒಳಗೊಳ್ಳುವ ಬದಲಿಗೆ 187 ರೂ. ನೆಲದ ಕೂಲಿಯನ್ನು ನಿರ್ದಿಷ್ಟಗೊಳಿಸಿದ್ದರಿಂದ ಇನ್ನು ಮುಂದೆ ವೇತನ ಹೆಚ್ಚಳಗಳಿಗೆ ಪೆಟ್ಟು ಬೀಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಮುಂದೆ 18 ಸಾವಿರಕ್ಕಿಂತ ಹೆಚ್ಚು ವೇತನ ಪಡೆಯುವವರು ಸೂಪರ್ವೈಸರ್ಗಳು, ಅಪ್ರೆಂಟೀನ್ಗಳು, 40 ಕಾರ್ಮಿಕರಿದ್ದು ವಿದ್ಯುತ್ರಹಿತ ಉದ್ಯಮಗಳಲ್ಲಿರುವ ಕಾರ್ಮಿಕರು 50ಕ್ಕಿಂತ ಕಡಿಮೆ ಗುತ್ತಿಗೆ ಕಾರ್ಮಿಕರನ್ನು ಹೊಂದಿರುವ ಗುತ್ತಿಗೆದಾರರು ಲೈಸೆನ್ಸ್ ತೆಗೆದುಕೊಳ್ಳಬೇಕಿಲ್ಲ. ಇದರಿಂದಾಗಿ ಭಾರತದ 70% ಕಾರ್ಮಿಕರಿಗೆ ಕಾರ್ಮಿಕ ಕಾನೂನುಗಳು ಅನ್ವಯವಾಗುವುದಿಲ್ಲ.
100ಕ್ಕಿಂತ ಹೆಚ್ಚು ಕಾರ್ಮಿಕರಿದ್ದರೆ ಕಾರ್ಖಾನೆಗಳ ಲೇಆಫ್, ರಿಟ್ರಿಂಚ್ ಮೆಂಟ್ ಮತ್ತು ಕಾರ್ಖಾನೆ ಮುಚ್ಚುವಿಕೆಗೆ ಸರ್ಕಾರದ ಪೂರ್ವನುಮತಿ ಪಡೆಯಬೇಕಿತ್ತು. ಈಗ 300 ಕಾರ್ಮಿಕರಿಗೆ ಹೆಚ್ಚಿಸಲಾಗಿದೆ. ಇದರಿಂದ ಯಾವಾಗ ಬೇಕಾದರೂ ಕಾರ್ಖಾನೆ ತೆರೆಯಬಹುದು, ಬೇಡದಿದ್ದರೆ ಮುಚ್ಚಬಹುದಾದ ಸ್ವಾತಂತ್ರ್ಯವನ್ನು ಮಾಲೀಕರಿಗೆ ಕೊಡಲಾಗಿದೆ ಎಂದರು.
ಬೇಡಿಕೆಗಳ ಪಟ್ಟಿ, ಮುಷ್ಕರ ನೋಟಿಸ್ ನೀಡಿದ ಕೂಡಲೇ ಸಂಧಾನ ಪ್ರಕ್ರಿಯೆ ಪ್ರಾರಂಭವಾಗುತ್ತದೆ. ರಾಜೀ ಸಂಧಾನ ನಡೆಯುವಾಗ ಬೇಡಿಕೆಗಳು ಈಡೇರದಿದ್ದರೂ ಮುಷ್ಕರ ಮಾಡುವ ಹಾಗಿಲ್ಲ, ಮಾಡಿದರೆ ಅದನ್ನು ಕಾನೂನು ಬಾಹಿರ ಮುಷ್ಕರ ಎಂದು ಪರಿಗಣಿಸಿ ಮುಷ್ಕರ ಮಾಡಿದವರನ್ನು, ಮುಷ್ಕರಕ್ಕೆ ಬೆಂಬಲಿಸಿದವರಿಗೂ ಜೈಲು, ಜಾಮೀನುರಹಿತ ಕೇಸುಗಳು, ದಂಡ, ಕೆಲಸದ ನಿರಾಕರಣೆ ಮಾಡುವ ಹಕ್ಕನ್ನು ಮತ್ತು ಕಾರ್ಮಿಕ ಸಂಘದ ನೊಂದಾವಣಿಯನ್ನು ರದ್ದುಗೊಳಿಸುವ ಅಂಶಗಳನ್ನು ಈ ಸಂಹಿತೆಗಳಲ್ಲಿ ತರಲಾಗಿದೆ. ಇದರಿಂದ ಕಾರ್ಮಿಕರ ಸಾಮೂಹಿಕ ಚೌಕಾಸಿಯ ಬೆನ್ನೆಲುಬಾಗಿದ್ದ ಮುಷ್ಕರದ ಹಕ್ಕನ್ನು ನಿರಾಕರಿಸಲಾಗಿದೆ.
ಕಾರ್ಮಿಕ ಸಂಘಗಳಿಗೆ ಮಾನ್ಯತೆ ನೀಡಬೇಕೆಂಬ ಬೇಡಿಕೆಯನ್ನು ತಿರಸ್ಕರಿಸಿ ಕಾರ್ಮಿಕ ಸಂಘ/ಚಳುವಳಿಗಳಿಲ್ಲದ ಮುಕ್ತ ವಾತವರಣ ರೂಪಿಸಲಿಕ್ಕಾಗಿ ಒಟ್ಟು ಕಾರ್ಮಿಕರಲ್ಲಿ 10% ಕಾರ್ಮಿಕರು ಮೊದಲೇ ಸದಸ್ಯರಾಗಿರಬೇಕು, ಸಂಘ ನೋಂದಣಿ ಮಾಡುವ ಅಥವಾ ತಿರಸ್ಕರಿಸುವ ಅಧಿಕಾರವನ್ನು ಕಾರ್ಮಿಕ ಇಲಾಖೆಗೆ ನೀಡಲಾಗಿದೆ. ಸಂಘಕ್ಕೆ ಮಾನ್ಯತೆ ನೀಡುವ, ಸಂಘದೊಂದಿಗೆ ಚೌಕಾಸಿ ಮಾಡುವ ಸಂಪೂರ್ಣ ಹಕ್ಕು ಮಾಲೀಕರ ಮರ್ಜಿಗೆ ಬಿಡಲಾಗಿದೆ ಎಂದು ಟೀಕಿಸಿದರು.
ಕಾರ್ಮಿಕರ ವೆಚ್ಚ ಉಳಿಸಲು, ಶತಮಾನಗಳ ಹೋರಾಟಗಳ, ತ್ಯಾಗ-ಬಲಿದಾನಗಳ ಮುಖಾಂತರ ಬಂದಿರುವ 8 ಗಂಟೆಯಿಂದ 12 ಗಂಟೆಗೆ ಹೆಚ್ಚಿಸಲು ಓವರ್ ಟೈಮ(O.T)ನ್ನು 3 ತಿಂಗಳಿಗೆ 50 ಗಂಟೆ ಇದ್ದುದ್ದು, ಈಗ 125 ಗಂಟೆಗೆ ಹೆಚ್ಚಿಸಲು ಅನುಮತಿ ನೀಡಲು ಈ ಸಂಹಿತೆಗಳಲ್ಲಿ ತಿದ್ದುಪಡಿ ತರಲಾಗಿದೆ. ಇದರಿಂದ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಹೆಚ್ಚಾಗಿ ಕಡಿಮೆ ವಯಸ್ಸಿನಲ್ಲಿಯೇ ಕಾರ್ಮಿಕರಿಗೆ ಹೃದಯ ಸಂಬಂಧಿ, ಪಾರ್ಶ್ವವಾಯು, ಮಾನಸಿಕ ಖಿನ್ನತೆಯಂತಹ ಖಾಯಿಲೆಗಳು ಹೆಚ್ಚಾಗುತ್ತಿದೆ.
ಸಾಮೂಹಿಕ ಭದ್ರತೆಯ ಭಾಗವಾಗಿ ನಿವೃತ್ತಿಯಾದ ಕಾರ್ಮಿಕರಿಗೆ ಕನಿಷ್ಠ 9000 ರೂ ನಿವೃತ್ತಿ ವೇತನ ನೀಡುವ ಬದಲಿಗೆ ESI ಮತ್ತು PF ನ ಆಯ್ಕೆಯ ಸ್ವಾತಂತ್ರ್ಯವನ್ನು ಮಾಲೀಕರಿಗೆ ನೀಡಿ, ನಿಧಿಗಳ ನಿರ್ವಹಣೆಯ ಅಧಿಕಾರವನ್ನು ಕಾರ್ಯಾಂಗಕ್ಕೆ ನೀಡಿದೆ. ESI, PF, ಗುತ್ತಿಗೆ ಕಾರ್ಮಿಕರ, ಕಟ್ಟಡ ಕಾರ್ಮಿಕರ ಕನಿಷ್ಠ ವೇತನದ ಎಲ್ಲಾ ತ್ರಿಪಕ್ಷೀಯ ಸಮಿತಿಗಳನ್ನು ರದ್ದುಗೊಳಿಸುವ ಅಥವಾ ಅದರ ಪ್ರಾಮುಖ್ಯತೆಯನ್ನು ಇಲ್ಲವಾಗಿಸಿ ಮಾಲೀಕರಿಗೆ ಅಧಿಕಾರವನ್ನು ನೀಡಿ, ಕಾರ್ಮಿಕರನ್ನು ಪ್ರತಿನಿಧಿಸುವ ಎಲ್ಲಾ ವ್ಯವಸ್ಥೆಗಳಿಗೆ ತಿಲಾಂಜಲಿ ನೀಡಲಾಗುತ್ತಿದೆ. ILO ಒಡಂಬಡಿಕೆಗಳಿಗೂ ತಿಲಾಂಜಲಿ ನೀಡಿ ILC ಯನ್ನು ಕಡೆಗಣಿಸುವ ಮುಖಾಂತರ ಮೋದಿ ಸರ್ಕಾರ ತನ್ನ ಸರ್ವಾಧಿಕಾರವನ್ನು ಪ್ರದರ್ಶಿಸುತ್ತಿದೆ ಎಂದರು.
ಕಾರ್ಮಿಕರು ಮಾಡುವ ಮುಷ್ಕರವನ್ನು ಸಂಘಟಿತ ಅಪರಾಧ ಎನ್ನುವ ಸರ್ಕಾರ ಬಾಯ್ಸರ್ ಕಾಯ್ದೆ, ಅರಣ್ಯ ಕಾಯ್ದೆ, ಚಹಾ ಕಾಯ್ದೆ, ರಬ್ಬರ್ ಕಾಯ್ದೆ ಹಲವಾರು ಔಷಧವಲಯಗಳಿಗೆ ಸಂಬಂಧಿಸಿದ 41 ಕಾನೂನುಗಳಡಿಯಲ್ಲಿ 180 ಅಪರಾಧಗಳಿಂದ ಜನಾವಶ್ಯಕ ಕಾಯ್ದೆಯ ನಿಬಂಧನೆಗಳ ಪ್ರಕಾರ ಮಾಲಿಕರನ್ನು ಮುಕ್ತಗೊಳಿಸಿದೆ.
ಈ ಹಿನ್ನೆಲೆಯಲ್ಲಿ ಕಾರ್ಮಿಕರ ಹಿತಾಸಕತಿಯನ್ನು ಅವರ ಹಕ್ಕುಗಳಿಗೆ ಧಕ್ಕೆ ತರುವಂತಹ 4 ಕಾರ್ಮಿಕ ಸಂಹಿತೆಗಳನ್ನು ರದ್ದುಗೊಳಿಸಲು ಕೇಂದ್ರ ಸರ್ಕಾರ ಮುಂದಾಗಬೇಕೆಂದು ಇಂದು ಪ್ರತಿಭಟನೆಯ ಮೂಲಕ ಸಿಐಟಿಯು ಲಿಂಗಸೂರು ತಾಲೂಕು ಸಮಿತಿಯೂ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತದೆ. ಒಂದು ವೇಳೆ ಸಂಹಿತೆಗಳನ್ನು ವಾಪಾಸ್ ಪಡೆಯುವಲ್ಲಿ ಸರ್ಕಾರ ನಿರ್ಲಕ್ಷಿಸಿದರೆ ಜುಲೈ 9, 2025 ರಂದು ದೇಶದ ಎಲ್ಲಾ ಕಾರ್ಮಿಕ ಸಂಘಟನೆಗಳು ಸಾರ್ವತ್ರಿಕ ಮುಷ್ಕರ ನಡೆಸುವುದರ ಮೂಲಕ ಕೇಂದ್ರ ಸರ್ಕಾರಕ್ಕೆ ಪಾಠ ಕಲಿಸಲು ತೀರ್ಮಾನಿಸಲಾಗಿದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡರಾದ ಹನೀಫ್, ರಮೇಶ ವೀರಾಪೂರು, ನಿಂಗಪ್ಪ ವೀರಾಪೂರ್, ಹಟ್ಟಿ ಚಿನ್ನದ ಗಣಿ ಘಟಕದ ಅಧ್ಯಕ್ಷ ಫಕ್ರುದ್ದೀನ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಗೋರಕಲ್, ಅಲ್ಲಾಭಕ್ಷ, ಶ್ರೀದರ್, ದಾವೂದ್, ಪಾಲ್ ಸನ್, ಖಾಜಾ ಮೈನುದ್ದೀನ್, ಮಾಜಿ ಚುನಾಯಿತ ಸದಸ್ಯ ಪೆಂಚಲಯ್ಯ, ಡಿವೈಎಫ್ ಐ ಮುಖಂಡ ಚನ್ನಬಸವ, ಜನವಾದಿ ಮಹಿಳಾ ಸಂಘಟನೆ ತಾಲೂಕಾಧ್ಯಕ್ಷೆ ವನಜಾಕ್ಷಿ, ಶಾಂತಕುಮಾರಿ, ಈರಮ್ಮ, ಅಂಬಮ್ಮ, ಶಿವಮ್ಮ, ಗೌರಮ್ಮ, ಕನಕಮ್ಮ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ : ಶ್ರೀನಿವಾಸ ಮಧುಶ್ರೀ




