ಕೇಂದ್ರ ಸರಕಾರ, ರೇಲ್ವೇ ಸಚಿವರಿಗೆ ಸಂಸದ ಶೆಟ್ಟರ್ ಅಭಿನಂದನೆ
ಬೆಳಗಾವಿ – ಬೆಂಗಳೂರು ವಂದೇ ಭಾರತ್ ರೈಲಿಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರೆತಿದ್ದು, ಬೆಳಗಾವಿ ಜನರ ಬಹುದಿನಗಳ ಕನಸು ಈಗ ನನಸಾಗಿದೆ. ಈ ವಿಚಾರವಾಗಿ ಬೆಳಗಾವಿ ಸಂಸದರಾದ ಜಗದೀಶ್ ಶೆಟ್ಟರ್ ಅವರು ಪ್ರತಿಕ್ರಿಯೆ ನೀಡಿದ್ದು, ನಮ್ಮ ಬೆಳಗಾವಿ ಜನತೆಯ ಕನಸನ್ನು ಸತತ ಪ್ರಯತ್ನದಿಂದ ನನಸು ಮಾಡಿದ ಸಂತೃಪ್ತ ಭಾವ, ನನ್ನ ಸಂತೋಷವನ್ನು ಇಮ್ಮಡಿಗೊಳಿಸಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿ ಮತ್ತು ಬೆಂಗಳೂರಿನ ನಡುವೆ ವಂದೇ ಭಾರತ್ ರೈಲು ಸಂಚಾರದಿಂದ ಪ್ರಯಾಣ ಮತ್ತಷ್ಟು ಸುಗಮವಾಗುವುದಲ್ಲದೇ, ಸಮಯವೂ ಉಳಿತಾಯವಾಗಲಿದೆ. ಅಲ್ಲದೇ, ಬೆಳಗಾವಿಯ ಸಮಗ್ರ ಅಭಿವೃದ್ಧಿಗೂ ಇದು ಪೂರಕವಾಗಲಿದೆ. ಆದಷ್ಟು ಬೇಗ ಸಮಯ ನಿಗದಿಗೊಳಿಸುವಂತೆ ಕೋರುತ್ತೇನೆ ಎಂದು ಅವರು ರೈಲ್ವೆ ಇಲಾಖೆಗೆ ಮನವಿ ಮಾಡಿದ್ದಾರೆ.
ಅಲ್ಲದೇ, ಬೆಳಗಾವಿಯಿಂದ ರಾಜ್ಯದ ರಾಜಧಾನಿಗೆ ವಂದೇ ಭಾರತ್ ರೈಲು ಸಂಪರ್ಕ ಒದಗಿಸುವಂತೆ, ತಮ್ಮ ಮನವಿಗೆ ಸ್ಪಂದಿಸಿದ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರಿಗೆ, ಕೇಂದ್ರ ರೈಲ್ವೆ ಸಚಿವರಾದ ಶ್ರೀ ಅಶ್ವಿನಿ ವೈಷ್ಣವ್ ಅವರಿಗೆ ಹಾಗೂ ಅವರ ಈ ಕಾರ್ಯಕ್ಕೆ ಪ್ರಾರಂಭದಿಂದಲೂ ಸಹಕರಿಸಿದ ಕೇಂದ್ರ ಸಚಿವರಾದ ಶ್ರೀ ಪ್ರಲ್ಹಾದ ಜೋಶಿ ಹಾಗೂ ಕೇಂದ್ರ ರಾಜ್ಯ ಖಾತೆ ರೈಲ್ವೆ ಸಚಿವರಾದ ಶ್ರೀ ವಿ ಸೋಮಣ್ಣ ಅವರಿಗೆ ಹೃತ್ಪೂರ್ವಕ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಸಲ್ಲಿಸಿದ್ದಾರೆ.