ಸಿರುಗುಪ್ಪ : ನಗರದ ಸಿಡಿಪಿಓ ಕಛೇರಿಯ ಸಭಾಂಗಣದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ, ಕೃಷಿ ಇಲಾಖೆಗಳ ಸಹಯೋಗದಲ್ಲಿ ಗುಣ ನಿಯಂತ್ರಣ ಕಾರ್ಯಕ್ರಮದಡಿ ಕೃಷಿ ಪರಿಕರ ಮತ್ತು ಮಾರಾಟಗಾರರ ಸಭೆ ನಡೆಯಿತು.
ಕೃಷಿ ಉಪನಿರ್ದೇಶಕ ಮಂಜುನಾಥ ಅವರು ಮಾತನಾಡಿ ರೈತರ ಪ್ರಗತಿಗೆ ಕೃಷಿ ಇಲಾಖೆ ಹಾಗೂ ಕೃಷಿ ಪರಿಕರಗಳ ಮಾರಾಟಗಾರರ ಪಾತ್ರ ಮಹತ್ವದಾಗಿದೆ.

ಆದ್ದರಿಂದ ಎಲ್ಲಾ ಮಾರಾಟಗಾರರು ಕಾನೂನಿ ಅಡಿಯಲ್ಲಿ ಪರವಾನಗಿ ಹೊಂದಿದ ಕಂಪನಿಗಳ ಬೀಜ, ಗೊಬ್ಬರ, ಕೀಟನಾಶಕಗಳನ್ನು ಮಾರಾಟ ಮಾಡಬೇಕು.
ಜಿಲ್ಲೆಯಲ್ಲಿ ಗೊಬ್ಬರದ ಕೊರತೆ ಇರುವುದಿಲ್ಲ. ಯಾರಾದರೂ ಕೃತಕ ಅಭಾವ ಸೃಷ್ಟಿಸಿ ಕಾಳಸಂತೆಯಲ್ಲಿ ಮಾರಾಟ ಮಾಡಿದಲ್ಲಿ ಅಂತಹವರ ವಿರುದ್ದ ಕ್ರಮದ ಜೊತೆಗೆ ಪರವಾನಗಿಯನ್ನು ರದ್ದುಗೊಳಿಸಲಾಗುವುದು ಎಂದರು.
ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ.ಪಾಟೀಲ್ ಅವರು ಮಾತನಾಡಿ ರೈತರು ಖರೀದಿಸಿದ ಬೀಜ, ಗೊಬ್ಬರ ಮತ್ತು ಕೀಟನಾಶಕಗಳಿಗೆ ಪ್ರತ್ಯೇಕವಾಗಿ ರಶೀದಿಯನ್ನು ಕಡ್ಡಾಯವಾಗಿ ಕೊಡಬೇಕು.
ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ರೈತರಿಂದ ದೂರುಗಳು ಬಂದಿದ್ದು, ಎಲ್ಲಾ ಮಾಲಿಕರು ತಮ್ಮ ಅಂಗಡಿಗಳಲ್ಲಿ ದೊರೆಯುವ ಬೀಜ, ಗೊಬ್ಬರದ ಬಗ್ಗೆ ಎಲ್ಲರಿಗೂ ಕಾಣಿಸುವಂತೆ ದರಪಟ್ಟಿಯನ್ನು ಹಾಕಬೇಕು. ಕಾಲ ಕಾಲಕ್ಕೆ ತಮ್ಮ ಪರವಾನಗಿ ಪತ್ರವನ್ನು ನವೀಕರಿಸಬೇಕೆಂದು ತಿಳಿಸಿದರು.
ಜಾಗೃತ ಕೋಶದ ಸಹಾಯಕ ನಿರ್ದೇಶಕ ಮುಜ್ಬುಲ್ ರೆಹಮಾನ್ ಅವರು ಮಾತನಾಡಿ ನಮ್ಮ ರಾಜ್ಯದಲ್ಲಿ ಮಾರಾಟಕ್ಕೆ ಅಧಿಕಾರವಿರುವ ಕಂಪನಿಗಳ ಪರವಾನಗಿ ನೋಡಿಕೊಂಡು ಅಂತಹ ಕಂಪನಿಗಳ ಬೀಜಗಳನ್ನು ಖರೀದಿಸಿ ಮಾರಾಟ ಮಾಡಬೇಕು.
ನಮ್ಮ ರಾಜ್ಯಕ್ಕೆ ಬೇಡಿಕೆಯಿರುವ ಗೊಬ್ಬರವನ್ನು ಖರೀದಿಸಿ ಪರವಾನಗಿಯಲ್ಲಿ ನಮೂದಿಸಿದ ಗೋದಾಮಿ ಮತ್ತು ಅಂಗಡಿಗಳಲ್ಲಿ ಮಾತ್ರ ದಾಸ್ತಾನು ಮಾಡಬೇಕು.
ಅನಧಿಕೃತ ಗೋದಾಮಿನಲ್ಲಿ ಮಾರಾಟ ಮಾಡಿದರೆ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ವರದಿ : ಶ್ರೀನಿವಾಸ ನಾಯ್ಕ




