ಚೇಳೂರು: ಪಟ್ಟಣದ ತಾಲೂಕು ಕಚೇರಿಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ ಜಯಂತಿ ಆಚರಣೆಯು ಅಧಿಕಾರಿಗಳ ಗೈರುಹಾಜರಿ ಮತ್ತು ಮಾಹಿತಿ ಕೊರತೆಯಿಂದಾಗಿ ವಿವಾದಕ್ಕೆ ಕಾರಣವಾಯಿತು.
ಅಧಿಕಾರಿಗಳ ವಿಳಂಬ ಧೋರಣೆಯನ್ನು ಖಂಡಿಸಿ ದಲಿತ ಸಂಘಟನೆಗಳ ಮುಖಂಡರು ಕಾರ್ಯಕ್ರಮವನ್ನು ಬಹಿಷ್ಕರಿಸಿದರು.
ಸಂಘಟನೆಗಳ ಆಕ್ರೋಶ: ಬೆಳಿಗ್ಗೆ 11 ಗಂಟೆಯಾದರೂ ಕಚೇರಿಯಲ್ಲಿ ಜಯಂತಿ ಆಚರಣೆಗೆ ಯಾವುದೇ ಸಿದ್ಧತೆಗಳಾಗಿಲ್ಲ ಎಂದು ಮುಖಂಡರು ಪ್ರತಿಭಟಿಸಿದರು. ಈ ವೇಳೆ ಮಾತನಾಡಿದ ಕದಸಂಸ ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣಪ್ಪ, ರಾಷ್ಟ್ರನಾಯಕರ ಜಯಂತಿಯಂದು ಅಧಿಕಾರಿಗಳ ಅಸಡ್ಡೆ ದಲಿತ ಸಮುದಾಯಕ್ಕೆ ಮಾಡಿದ ಅವಮಾನ. ಹಲವು ಸಂಘಟನೆಗಳ ಮುಖಂಡರಿಗೆ ಕಾರ್ಯಕ್ರಮದ ಮಾಹಿತಿಯನ್ನೇ ನೀಡಿಲ್ಲ ಎಂದು ಕಿಡಿಕಾರಿದರು. ದಸಂಸ ತಾಲೂಕು ಸಂಚಾಲಕ ಜಿ. ನರಸಿಂಹಪ್ಪ ಮಾತನಾಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮುಖಂಡರೊಂದಿಗೆ ಹೊರನಡೆದರು.
ತಹಸೀಲ್ದಾರ್ ಸ್ಪಷ್ಟನೆ: ಘಟನೆ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ಶ್ವೇತಾ ಬಿ.ಕೆ., ನಾನು ಹಾಗೂ ಅಧಿಕಾರಿಗಳು ಬೆಳಿಗ್ಗೆ 10 ಗಂಟೆಗೇ ಕಚೇರಿಗೆ ಬಂದಿದ್ದೆವು. ಆದರೆ ಮುಖಂಡರ ಬರುವಿಕೆಗಾಗಿ ಕಾಯಲಾಗಿತ್ತು. ಇದೇ ವೇಳೆ ಜನಗಣತಿ ಕಾರ್ಯದ ನಿಮಿತ್ತ ನಾನು ಹೊರಹೋಗಿ ಬರುವಷ್ಟರಲ್ಲಿ ಮುಖಂಡರು ಅಲ್ಲಿಂದ ತೆರಳಿದ್ದರು. ಮಾಹಿತಿ ನೀಡುವಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಲೋಪ ಎಸಗಿದ್ದಾರೆಯೇ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದರು. ನೋಟಿಸ್ ಎಚ್ಚರಿಕೆ: ಪ್ರತಿ ವರ್ಷ ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿಯ ಜೊತೆಗೆ ಬಾಬು ಜಗಜೀವನ್ ರಾಮ್ ಅವರ ಜಯಂತಿಯನ್ನೂ ಅದ್ದೂರಿಯಾಗಿ ಆಚರಿಸಲಾಗುತ್ತದೆ. ಇಂದು ಸಾಂಕೇತಿಕವಾಗಿ ಸರಳವಾಗಿ ಆಚರಿಸಲಾಗಿದೆ. ದಲಿತ ಮುಖಂಡರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂಬುದು ದೃಢಪಟ್ಟರೆ ಮಾಹಿತಿ ನೀಡದ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗುವುದು. ಮುಂದಿನ ಅಂಬೇಡ್ಕರ್ ಜಯಂತಿಯಂದು ಇಬ್ಬರೂ ನಾಯಕರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್.ಐ ಈಶ್ವರ್, ಶಿರಸ್ತೇದಾರ ಸತೀಶ್, ಪಿ.ಡಿ.ಒ ಗೌಸ್ ಪೀರ್, ಎ.ಎಸ್.ಐ ವೆಂಕಟೇಶಪ್ಪ, ಪೊಲೀಸ್ ಪೇದೆ ಬೀರಣ್ಣ, ಸಮಾಜ ಕಲ್ಯಾಣ ಇಲಾಖೆಯ ಮಂಜುನಾಥ, ಗೋಪಿ ನಾಯಕ ಹಾಗೂ ತಾಲೂಕು ಕಚೇರಿಯ ಸಿಬ್ಬಂದಿ ವರ್ಗದವರು ಹಾಜರಿದ್ದರು.
ವರದಿ :ಯಾರಬ್. ಎಂ.




