ಸಮಸಮಾಜ ನಿರ್ಮಾಣದಲ್ಲಿ ಬಾಬೂಜಿ ಅವರ ಕೊಡುಗೆ ಅಪಾರ – ಶಾಸಕ ಲಕ್ಷ್ಮಣ ಸವದಿ
ಐನಾಪುರ: ಭಾರತದಲ್ಲಿ ದೀರ್ಘ ಕಾಲದಿಂದ ಬೆಳೆದುಕೊಂಡು ಬಂದಿದ್ದ ಮೇಲು-ಕೀಳು ತಾರತಮ್ಯ, ಜಾತಿ ಪದ್ಧತಿ, ಅಸ್ಪೃಶ್ಯ ಎಂಬ ಮನೋಭಾವಗಳನ್ನು ತೊಡೆದು ಹಾಕಲು ಸಾಮಾಜಿಕ ನೆಲೆಗಟ್ಟಿನಲ್ಲಿ ಹೋರಾಡಿದವರು ಅನೇಕರು. ಆದರೆ ಅವರ ಏಳಿಗೆಗೆ ಹೆಚ್ಚಿನ ಚುರುಕು ನೀಡಿ ಒಂದು ಸ್ಪಷ್ಟ ರೂಪ ಕೊಟ್ಟ ಕೆಲವೇ ಕೆಲವು ನಾಯಕರಲ್ಲಿ ಬಾಬು ಜಗಜೀವನ ರಾಮ್ ಒಬ್ಬರು. ಬಾಬು ಜಗಜೀವನ ರಾಮ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿ, ಸಂವಿಧಾನ ರಚನಾ ಸಭೆಯ ಸದಸ್ಯರಾಗಿ ಮತ್ತು ಮೊದಲ ಉಪ ಪ್ರಧಾನಿಯಾಗಿ ನಮ್ಮ ದೇಶಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಅಥಣಿ ಪಟ್ಟಣದ ಲಿಡ್ಕರ್ ಕಾಲೋನಿಯಲ್ಲಿ ತಾಲೂಕ ಆಡಳಿತ, ತಾಲೂಕ ಪಂಚಾಯತ, ಅಥಣಿ ಪುರಸಭೆ, ಹಾಗೂ ಸಮಾಜ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಹಸಿರು ಕ್ರಾಂತಿಯ ಹರಿಕಾರ, ಭಾರತದ ಮಾಜಿ ಉಪ ಪ್ರಧಾನಿ ಡಾ. ಬಾಬು ಜಗಜೀವನ್ ರಾಮ್ ಅವರ 119 ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ದೇಶಾದ್ಯಂತ ಬಾಬುಜಿ ಎಂದೇ ಕರೆಯಲ್ಪಡುವ ಜಗಜೀವನ ರಾಮ್ ಧೀಮಂತ ರಾಷ್ಟ್ರೀಯ ನಾಯಕ, ಸ್ವಾತಂತ್ರ್ಯ ಮತ್ತು ಸಾಮಾಜಿಕ ನ್ಯಾಯ ಹೋರಾಟಗಾರ ಹಾಗೂ ಅತ್ಯುತ್ತ್ತಮ ಸಂಸದೀಯ ಪಟುವಾಗಿದ್ದರು.

ಅಸ್ಪೃಶ್ಯತಾ ನಿವಾರಣೆಯ ಹೋರಾಟದ ಮಹಾನ್ ದಲಿತ ನಾಯಕ ಜಗಜೀವನ ರಾಮ ಜಯಂತೋತ್ಸವವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಭಾರತದ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯ ನಂತರದ ರಾಜಕಾರಣದಲ್ಲಿ ಬಾಬು ಜಗಜೀವನರಾಮ್ ಪಾತ್ರ ಪ್ರಮುಖವಾಗಿದೆ. ಬುದ್ಧ ಬಸವ ಅಂಬೇಡ್ಕರ್ ರಂತೆ ಬಾಬೂಜಿ ಅವರು ಕೂಡ ಸಮ ಸಮಾಜದ ನಿರ್ಮಾಣಕ್ಕಾಗಿ ಶ್ರಮಿಸಿದಲ್ಲದೆ ದೇಶದ ಉಪ ಪ್ರಧಾನಿಯಾಗಿ ಸಾಮಾಜಿಕ ಪರಿವರ್ತನೆಗಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.
ಬಾಬುಜಿ ಅವರು ಕೇಂದ್ರ ಸಚಿವರಾಗಿ ದಕ್ಷತೆಯ ಆಡಳಿತವನ್ನು ಮಾಡಿದ್ದಾರೆ. ಕಾರ್ಮಿಕ ಸಚಿವರಾಗಿ, ಭೂ ಸಾರಿಗೆ ಸಚಿವರಾಗಿ, ರಕ್ಷಣಾ ಇಲಾಖೆ ಮತ್ತು ಕೃಷಿ ಇಲಾಖೆಯ ಸಚಿವರಾಗಿ, ದೇಶದ ಉಪ ಪ್ರಧಾನ ಮಂತ್ರಿಗಳಾಗಿ ದಿಟ್ಟ ಆಡಳಿತಗಾರ ಅನ್ನಿಸಿಕೊಂಡರು. ಕೃಷಿ ಸಚಿವರು ಇದ್ದ ಸಂದರ್ಭದಲ್ಲಿ ರೈತರಿಗೆ ಅನೇಕ ಯೋಜನೆಗಳನ್ನು ಜಾರಿಗೆ ತಂದು ಹಸಿರು ಕ್ರಾಂತಿಯ ಹರಿಕಾರ ಎನಿಸಿಕೊಂಡರು. ಅವರ ಆಡಳಿತ ಮತ್ತು ಆದರ್ಶಗಳು ನಮ್ಮೆಲ್ಲರಿಗೆ ಸ್ಪೂರ್ತಿಯಾಗಬೇಕು ಎಂದರು.
ಶಿವಶರಣ ಹರಳಯ್ಯ ಸಮಾಜ ಬಂಧುಗಳು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ನೀಡಬೇಕು. ಶಿಕ್ಷಣದಿಂದಲೇ ಕುಟುಂಬದ ಮತ್ತು ಸಮಾಜದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಅತಿಥಿ ಉಪನ್ಯಾಸಕರಾಗಿದ್ದ ಹಾರೂಗೇರಿಯ ಪ್ರಾಚಾರ್ಯ ಟಿ ಎನ್ ವಂಟಗುಡಿ ಮಾತನಾಡಿ ಬಾಬೂಜಿಯವರ ಹುಟ್ಟು ಮತ್ತು ಬೆಳವಣಿಗೆ, ದಲಿತರ ಮತ್ತು ಶೋಷಿತರ ಹಕ್ಕುಗಳಿಗಾಗಿ ನಡೆಸಿದ ಹೋರಾಟ, ದೇಶದ ಧೀಮಂತ ನಾಯಕರಾಗಿ ಮಾಡಿದ ಸುಧಾರಣೆಗಳ ಬಗ್ಗೆ ಬಣ್ಣಿಸಿದರು.
ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಶಿವಲೀಲಾ ಬೂಟಾಳಿ, ಉಪಾಧ್ಯಕ್ಷ ಭುವನೇಶ್ವರಿ ಯಕ್ಕoಚಿ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕಾ ಅಧ್ಯಕ್ಷ ಸಿದ್ಧಾರ್ಥ ಸಿಂಗೆ ಮಾತನಾಡಿದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷ ಎಸ್ ಎಸ್ ಎಲ್ ಸಿ ಮುತ್ತು ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹರಳಯ್ಯ ಸಮಾಜದ ಸಾಧಕರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ವಿಲೀನರಾಜ ಯಳಮಲ್ಲೆ, ಕಲ್ಲೇಶ ಮಡ್ಡಿ, ಬಸವರಾಜ ನಾಯಕ, ತಹಸೀಲ್ದಾರ ಸಿದರಾಯ ಬೋಸಗಿ, ತಾ. ಪಂ. ಅಧಿಕಾರಿ ಶಿವಾನಂದ ಕಲ್ಲಾಪುರ, ಸಿಪಿಐ ಸಂತೋಷ ಹಳ್ಳೂರ, ಪುರಸಭೆ ಮುಖ್ಯಧಿಕಾರಿ ಅಶೋಕ ಗುಡಿಮನಿ, ಸಮಾಜ ಕಲ್ಯಾಣ ಅಧಿಕಾರಿ ಪರಶುರಾಮ ಪತ್ತಾರ, ಪಿಎಸ್ಐ ಗಿರಿಮಲ್ಲಪ್ಪ ಉಪ್ಪಾರ, ತಾಲೂಕ ವೈದ್ಯಾಧಿಕಾರಿ ಡಾ. ಬಸಗೌಡ ಕಾಗೆ, ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜೆ, ಕೃಷಿ ಇಲಾಖೆಯ ನಿರ್ದೇಶಕ ನಿಂಗನಗೌಡ ಬಿರಾದರ, ಸಿಡಿಪಿಓ ಮಂಜುನಾಥ, ಅಭಿಯಂತರ್ ಪ್ರವೀಣ ಹುಣಸಿಕಟ್ಟಿ, ಹರಳಯ್ಯ ಸಮಾಜದ ಅಧ್ಯಕ್ಷ ಸದಾಶಿವ ಶಿಕರೇ, ದಿಲೀಪ ಕಾಂಬಳೆ, ಅನಿಲ್ ಸೌದಾಗರ, ಸುಂದರ ಸೌದಾಗರ , ಶಿದರಾಯ ಸಣ್ಣಕ್ಕಿ, ಶಿವಾನಂದ ಸೌದಾಗರ,ರಾಜೆಂದ್ರ ಐಹೊಳೆ, ಶಂಕರ ಹಿರೇಮನಿ, ರಾಜಶೇಖರ ಹಿರೇಮನಿ,ಸದಾಶಿವ ಮಾಂಗ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಕಲ್ಯಾಣ ಅಧಿಕಾರಿ ಪರಶುರಾಮ ಪತ್ತಾರ ಸ್ವಾಗತಿಸಿದರು. ಶಿಕ್ಷಕ ಸಂಗಮೇಶ ಹಚ್ಚರಾದ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮಣ ಜಯಗುಣಿ ವಂದಿಸಿದರು.
ವರದಿ:ಮುರಗೇಶ ಗಸ್ತಿ




