Ad imageAd image

ಪಪಂ ಅಧ್ಯಕ್ಷರಾಗಿ ಆಶಾರಾಣಿ, ಉಪಾಧ್ಯಕ್ಷರಾಗಿ ಭಾಗ್ಯ ಅವಿರೋಧ ಆಯ್ಕೆ

Bharath Vaibhav
ಪಪಂ ಅಧ್ಯಕ್ಷರಾಗಿ ಆಶಾರಾಣಿ, ಉಪಾಧ್ಯಕ್ಷರಾಗಿ ಭಾಗ್ಯ ಅವಿರೋಧ ಆಯ್ಕೆ
WhatsApp Group Join Now
Telegram Group Join Now

ತುರುವೇಕೆರೆ:-ಸ್ಥಳೀಯ ಪಟ್ಟಣ ಪಂಚಾಯ್ತಿಯ ಎರಡನೇ ಅವಧಿಗೆ ಇಂದು ನಡೆದ ಚುನಾವಣೆಯಲ್ಲಿ ಆಶಾರಾಣಿ ರಾಜಶೇಖರ್ ಅಧ್ಯಕ್ಷರಾಗಿ, ಕೆ.ಭಾಗ್ಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಭಾರತೀಯ ಜನತಾ ಪಕ್ಷ ಪಟ್ಟಣ ಪಂಚಾಯ್ತಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಆ ಮೂಲಕ ಮೊದಲನೇ ಅವಧಿಯ ಪೂರ್ಣ ಪ್ರಮಾಣದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಪಕ್ಷ ಮತ್ತೊಮ್ಮೆ ಎರಡನೇ ಅವಧಿಯಲ್ಲೂ ಅಧಿಕಾರದ ಗದ್ದುಗೆಗೇರಿದ ಸಾಧನೆ ಮಾಡಿದೆ.

ಪಟ್ಟಣ ಪಂಚಾಯ್ತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಹಾಗೂ ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಯ ಮಹಿಳೆಗೆ ಮೀಸಲಾಗಿತ್ತು. ನಾಮಪತ್ರ ಸಲ್ಲಿಕೆ ವೇಳೆ ಅಧ್ಯಕ್ಷ ಸ್ಥಾನಕ್ಕೆ 13 ನೇ ವಾರ್ಡಿನ ಸದಸ್ಯೆ ಬಿಜೆಪಿಯ ಆಶಾರಾಣಿ ರಾಜಶೇಖರ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 3 ನೇ ವಾರ್ಡ್ ಬಿಜೆಪಿಯ ಕೆ.ಭಾಗ್ಯ ತಮ್ಮ ಉಮೇದುವಾರಿಕೆ ಸಲ್ಲಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿರುವ ಕಾರಣ ಪಟ್ಟಣ ಪಂಚಾಯ್ತಿಯ ನೂತನ ಅಧ್ಯಕ್ಷರಾಗಿ ಆಶಾರಾಣಿ ರಾಜಶೇಖರ್ ಹಾಗೂ ಉಪಾಧ್ಯಕ್ಷರಾಗಿ ಕೆ.ಭಾಗ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ತಹಸೀಲ್ದಾರ್, ಚುನಾವಣಾಧಿಕಾರಿ ಕುಂ.ಞ. ಅಹಮದ್ ಘೋಷಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ಪಪಂ ಮುಖ್ಯಾಧಿಕಾರಿ ಶ್ರೀನಾಥ್ ಬಾಬು, ಚುನಾವಣಾ ಶಾಖೆಯ ಕಾಂತರಾಜು ಹಾಗೂ 12 ಮಂದಿ ಸದಸ್ಯರು ಉಪಸ್ಥಿತರಿದ್ದರು. ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಬಿಜೆಪಿ ಬಾವುಟ ಹಿಡಿದು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನೂತನ ಅಧ್ಯಕ್ಷೆ ಆಶಾರಾಣಿ ರಾಜಶೇಖರ್ ಮಾತನಾಡಿ, ಎರಡನೇ ಬಾರಿಗೆ ಪಟ್ಟಣ ಪಂಚಾಯ್ತಿಯ ಅಧ್ಯಕ್ಷಳಾಗಿ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ ಮಾಜಿ ಶಾಸಕ ಮಸಾಲಾ ಜಯರಾಮ್ ಹಾಗೂ ಪಟ್ಟಣ ಪಂಚಾಯ್ತಿಯ ಎಲ್ಲಾ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು. ಮೊದಲ ಅವಧಿಯಲ್ಲಿಯೂ ಮಸಾಲಾ ಜಯರಾಮ್ ಅವರು ನನಗೆ ಅಧ್ಯಕ್ಷಳಾಗುವುದಕ್ಕೆ ಅವಕಾಶ ಕಲ್ಪಿಸಿದ್ದರು, ಎರಡನೇ ಅವಧಿಯಲ್ಲಿ ಮತ್ತೊಮ್ಮೆ ಅವಕಾಶ ಕಲ್ಪಿಸಿದ್ದು ಅವರಿಗೆ ನಾನು ಚಿರಋಣಿಯಾಗಿರುತ್ತೇನೆ. ಪಟ್ಟಣದಲ್ಲಿ ವಾಣಿಜ್ಯ ಸಂಕೀರ್ಣ ಕಾರ್ಯಾರಂಭ, ಒಳಚರಂಡಿ, ಟ್ರಾಫಿಕ್, ಬೀದಿಬದಿ ವ್ಯಾಪಾರಿಗಳ ಸಮಸ್ಯೆ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು, ಶಾಸಕ ಎಂ.ಟಿ.ಕೃಷ್ಣಪ್ಪ, ಮಾಜಿ ಶಾಸಕ ಮಸಾಲಾ ಜಯರಾಮ್ ಹಾಗೂ ಪಟ್ಟಣ ಪಂಚಾಯ್ತಿಯ ಎಲ್ಲಾ ಸದಸ್ಯರ ಸಹಕಾರದೊಂದಿಗೆ ಸಮಸ್ಯೆಗಳನ್ನು ಬಗೆಹರಿಸಿ ಪಟ್ಟಣವನ್ನು ಅಭಿವೃದ್ದಿ ಪಥದತ್ತ ಮುನ್ನಡೆಸುತ್ತೇನೆ ಎಂದರು.

ನೂತನ ಅಧ್ಯಕ್ಷೆ ಆಶಾರಾಣಿ ರಾಜಶೇಖರ್ ಹಾಗೂ ಉಪಾಧ್ಯಕ್ಷೆ ಕೆ.ಭಾಗ್ಯ ಅವರನ್ನು ತಾಲ್ಲೂಕು ಬಿಜೆಪಿ ಅಧ್ಯಕ್ಷ ಮೃತ್ಯುಂಜಯ, ಪಪಂ ಸದಸ್ಯರಾದ ಟಿ.ಪಿ.ಮಹೇಶ್ (ಯಜಮಾನ್), ಅಂಜನ್ ಕುಮಾರ್, ಆರ್.ಮಧು, ಚಿದಾನಂದ್, ನದೀಮ್ ಅಹಮದ್, ಪ್ರಭಾಕರ್, ಎನ್.ಆರ್.ಸುರೇಶ್, ಕೆ.ರವಿ, ಸ್ವಪ್ನನಟೇಶ್, ಜಯಮ್ಮ, ಮುಖಂಡರಾದ ದುಂಡ ರೇಣುಕಯ್ಯ, ಸೋಮಶೇಖರ್, ತಂಡಗ ಧನಪಾಲ್, ಸಿದ್ದಲಿಂಗಪ್ಪ, ಎಸ್.ಎಂ.ಕುಮಾರಸ್ವಾಮಿ, ಬಿಎಂಎಸ್ ಉಮೇಶ್, ಪ್ರಕಾಶ್ ಯಾದವ್, ರಾಜಶೇಖರ್, ರಾಘವೇಂದ್ರ(ವಾದಿ) ಸೇರಿದಂತೆ ನೂರಾರು ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದು ಅಭಿನಂದಿಸಿದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!