ತುರುವೇಕೆರೆ : ತಾಲ್ಲೂಕು ಭಾರತೀಯ ಜನತಾ ಪಕ್ಷದ ಕಛೇರಿಯಲ್ಲಿ ಪಕ್ಷ ಕಟ್ಟಿ ಬೆಳೆಸಿದ ಹಿರಿಯ ಕಾರ್ಯಕರ್ತರನ್ನು ಸನ್ಮಾನಿಸುವ ಮೂಲಕ ಬಿಜೆಪಿ ಪಕ್ಷದ 46 ನೇ ಸಂಸ್ಥಾಪನಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಪಕ್ಷದ ಮಂಡಲಾಧ್ಯಕ್ಷ ಪ್ರಕಾಶ್ ಯಾದವ್ ಮಾತನಾಡಿ, ದೇಶಾಭಿಮಾನದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ, ಪಕ್ಷ ದೇಶದ ಚುಕ್ಕಾಣಿ ಹಿಡಿಯುವ ಮಟ್ಟಕ್ಕೆ ತರುವಲ್ಲಿ ಹಿರಿಯ ನಾಯಕರು, ಕೋಟ್ಯಾಂತರ ಕಾರ್ಯಕರ್ತರ ಹೋರಾಟ, ತ್ಯಾಗ, ಪರಿಶ್ರಮ ಸಾಕಷ್ಟಿದೆ. ಅವರೆಲ್ಲರ ನಿರಂತರ ಹೋರಾಟದ ಫಲವಾಗಿ ಇಂದು ಪಕ್ಷ ವಿಶ್ವದಲ್ಲೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಪಕ್ಷವಾಗಿ ಸತತ ಮೂರನೇ ಬಾರಿಗೆ ದೇಶದ ಅಧಿಕಾರದ ಗದ್ದುಗೆಗೇರಿ ಬಡವರು, ದೀನದಲಿತರು, ರೈತ ಪರವಾದ ಯೋಜನೆಗಳನ್ನು ಜಾರಿಗೊಳಿಸಿ ಸದೃಢ ದೇಶವನ್ನು ನಿರ್ಮಾಣ ಮಾಡಲು ಸಾಧ್ಯವಾಗಿದೆ ಎಂದರು.
ತುರುವೇಕೆರೆ ತಾಲ್ಲೂಕಿನಲ್ಲೂ ಪಕ್ಷ ಸಂಘಟನಾತ್ಮಕವಾಗಿ ಬಲಿಷ್ಠವಾಗಿದೆ. ಪಕ್ಷ ಸದೃಢವಾಗಿರಲು ಪಕ್ಷ ಕಟ್ಟಿ ಬೆಳೆಸಿದ ಹಿರಿಯರು ಕಾರಣ. ಭಾರತೀಯ ಜನತಾ ಪಕ್ಷ ಈ ಹಿಂದೆ ತಾಲೂಕಿನಲ್ಲಿ ಅಧಿಕಾರ ಚುಕ್ಕಾಣಿ ಹಿಡಿದು, ಎಂ.ಡಿ.ಲಕ್ಷ್ಮೀನಾರಾಯಣ್ ಶಾಸಕರಾಗಿದ್ದರು. ತದನಂತರದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿರಲಿಲ್ಲ. ಆದರೆ ಮಸಾಲಾ ಜಯರಾಮ್ ಅವರು ಪಕ್ಷದ ನೇತೃತ್ವದ ವಹಿಸಿಕೊಂಡ ನಂತರ ಪಕ್ಷ ವಿಧಾನಸಭಾ ಚುನಾವಣೆಯಲ್ಲಿ 60ಸಾವಿರಕ್ಕೂ ಮತ ಪಡೆಯುತ್ತಾ ಬಂದಿದೆ. 2018 ರಲ್ಲಿ ಮಸಾಲಾ ಜಯರಾಮ್ ಅವರು ಶಾಸಕರಾಗಿ ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದ್ದರು. ಆದರೆ 2023 ರ ಚುನಾವಣೆಯಲ್ಲಿ ಅಲ್ಪಮತಗಳಿಂದ ನಾವು ಅಧಿಕಾರ ವಂಚಿತರಾಗಬೇಕಾಯಿತು. ಮುಂದಿನ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಸದೃಢವಾಗಿ ಸಂಘಟಿಸುವುದರೊಂದಿಗೆ 2028 ರಲ್ಲಿ ಮಸಾಲಾ ಜಯರಾಮ್ ಅವರನ್ನು ಮತ್ತೆ ಶಾಸಕರನ್ನಾಗಿ ಮಾಡಿ ಕ್ಷೇತ್ರದ ಅಭಿವೃದ್ದಿಗೆ ಸಹಕಾರ ನೀಡಬೇಕಿದೆ ಎಂದರು.
ಬಿಜೆಪಿಯ 46 ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಪಕ್ಷ ಕಟ್ಟಿ ಬೆಳೆಸಿದ ಹಿರಿಯ ಕಾರ್ಯಕರ್ತರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು. ಪಕ್ಷದ ಉಪಾಧ್ಯಕ್ಷರಾದ ಸಂತೋಷ್ ಕಂಟ್ಲಿ, ಸಿದ್ದಪ್ಪಾಜಿ, ಮಹಿಳಾ ಅಧ್ಯಕ್ಷೆ ರಾಧಾಮಣಿ, ಕಾರ್ಯದರ್ಶಿ ಯೋಗಾನಂದ್, ಮಹೇಶ್, ಖಜಾಂಚಿ ಹರಿಕಾರನಹಳ್ಳಿ ಪ್ರಸಾದ್, ಹಿರಿಯ ಮುಖಂಡರಾದ ಅರಳೀಕೆರೆ ಶಿವಯ್ಯ, ಎಂ.ಡಿ.ಮೂರ್ತಿ, ವಿ.ಬಿ.ಸುರೇಶ್, ಕಡೇಹಳ್ಳಿ ಸಿದ್ದೇಗೌಡ, ಎಂ.ಡಿ.ಶಿವನಂಜಪ್ಪ, ಯುವ ಮೋರ್ಚಾ ಅಧ್ಯಕ್ಷ ತೀರ್ಥಕುಮಾರ್ (ತಿಲಿ), ಮಾಜಿ ಅಧ್ಯಕ್ಷ ಗೌರೀಶ್, ಮುಖಂಡರಾದ ಉಮಾರಾಜ್, ನಡುವನಹಳ್ಳಿ ಚಂದ್ರಣ್ಣ, ಹಾಲೇಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್




