ಹಾಸನ: ಹಾಸನ ನಗರದಲ್ಲಿ ಸಿನಿಮೀಯ ಘಟನೆಯೊಂದು ನಡೆದಿದೆ. ತಾಳಿ ಕಟ್ಟುವ ಸಂದರ್ಭವೇ ವಧು ನನಗೆ ಮದುವೆ ಬೇಡ ಎಂದು ಮಂಟಪದಿಂದ ಹೊರನಡೆದಂತಹ ಘಟನೆ ನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ನಡೆದಿದೆ.
ಬೂವನಹಳ್ಳಿ ಗ್ರಾಮದ ಪಲ್ಲವಿ ಹಾಗೂ ಆಲೂರು ತಾಲೂಕಿನ ವೇಣುಗೋಪಾಲ.ಜಿ ಮದುವೆ ಮುಹೂರ್ತದ ವೇಳೆ ವಧುವಿಗೆ ಕರೆಯೊಂದು ಬಂದಿದ್ದು, ಅದರ ಬೆನ್ನಲ್ಲೇ ವಧು ನಾನು ಬೇರೆ ಯುವಕನನ್ನು ಪ್ರೀತಿಸುತ್ತಿರುವುದಾಗಿ ಹೇಳಿ, ಈ ಮದುವೆ ಬೇಡ ಎಂದು ಹಠ ಹಿಡಿದಿದ್ದಾಳೆ.
ನಂತರ ಪಲ್ಲವಿ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾಳೆ. ಆಕೆಯ ಪೋಷಕು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಯುವತಿ ಕೇಳದೇ ಹೋದಾಗ ವಿಚಾರ ತಿಳಿದು ಬಡಾವಣೆ ಹಾಗೂ ನಗರಠಾಣೆ ಪೊಲೀಸರು ಮಧ್ಯೆ ಪ್ರವೇಶಿಸಿ ಮಾತುಕತೆ ನಡೆಸಿದ್ದಾರೆ. ವಧುವಿನ ಹಠ ನೋಡಿ ವರ ನನಗೂ ಮದುವೆ ಬೇಡ ಎಂದು ಹೊರಟು ಹೋಗಿದ್ದಾನೆ.
ಪಲ್ಲವಿ ಸ್ನಾತಕೋತ್ತರ ಪದವಿ ಓದಿದ್ದು ಯಾವುದೇ ಉದ್ಯೋಗ ಮಾಡುತ್ತಿರಲಿಲ್ಲ. ಆಕೆ ತಾನು ಪ್ರೀತಿಸುತ್ತಿದ್ದ ಯುವಕನ ಬಗ್ಗೆ ಪೋಷಕರಿಗೆ ಇದಕ್ಕೂ ಮೊದಲು ತಿಳಿಸಿಯೂ ಇರಲಿಲ್ಲ ಎನ್ನಲಾಗಿದೆ. ಕಲ್ಯಾಣಮಂಟಪಕ್ಕೆ ನೂರಾರು ಮಂದಿ ಆಗಮಿಸಿದ್ದದ್ದು, ಕೊನೇ ಕ್ಷಣದಲ್ಲಿ ಮಗಳು ಮದುವೆ ನಿಲ್ಲಿಸಿದಳು ಎಂದು ಪೋಷಕರು ಕಣ್ಣೀರು ಹಾಕಿದ್ದಾರೆ.




