ಕೊಪ್ಪಳ: ಗಂಗಾವತಿ ತಾಲ್ಲೂಕಿನ ಮರಕುಂಬಿಯಲ್ಲಿ ಹತ್ತು ವರ್ಷಗಳ ಹಿಂದೆ ದಲಿತರು ಹಾಗೂ ಸವರ್ಣೀಯರ ನಡುವೆ ನಡೆದ ಜಾತಿ ಸಂಘರ್ಷಕ್ಕೆ ಸಂಬಂಧಿಸಿದಂತೆ ಒಟ್ಟು 101 ಜನ ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇವರಿಗೆ ತಲಾ 5000 ದಂಡ ಹಾಕಲಾಗಿದೆ.
ಇನ್ನುಳಿದ ಮೂವರು ಅಪರಾಧಿಗಳಿಗೆ ತಲಾ ಎರಡು ಸಾವಿರ ದಂಡ ಹಾಗೂ ಐದು ವರ್ಷ ಶಿಕ್ಷೆ ವಿಧಿಸಿ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಲಯ ನ್ಯಾಯಾಧೀಶ ಚಂದ್ರಶೇಖರ ಸಿ. ಆದೇಶ ನೀಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಒಟ್ಟು 117 ಜನ ಆರೋಪಿಗಳಿದ್ದರು. ಇದರಲ್ಲಿ 101 ಜನರ ಮೇಲಿನ ಆರೋಪ ದೃಢಪಟ್ಟಿದೆ. ಇದರಲ್ಲಿ ಕೆಲವರು ಮೃತಪಟ್ಟಿದ್ದಾರೆ.
ದಶಕದ ಹಿಂದೆ ಗಂಗಾವತಿಯಲ್ಲಿ ಸಿನಿಮಾ ನೋಡಲು ಹೋಗಿದ್ದಾಗ ಟಿಕೆಟ್ ವಿಚಾರಕ್ಕೆ ಆರಂಭವಾಗಿದ್ದ ಜಗಳ ಸಂಘರ್ಷಕ್ಕೆ ಕಾರಣವಾಗಿತ್ತು.
ಐದು ವರ್ಷ ಶಿಕ್ಷೆಗೆ ಒಳಗಾಗಿರುವ ಮೂವರು ಅಪರಾಧಿಗಳು ಎಸ್.ಸಿ, ಎಸ್.ಟಿ. ವರ್ಗಕ್ಕೆ ಸೇರಿದವರಾಗಿದ್ದಾರೆ. ಅವರಿಗೆ ಜಾತಿನಿಂದನೆ ಕಾಯ್ದೆ ಅನ್ವಯ ಆಗಿಲ್ಲ.