ಸಿರುಗುಪ್ಪ: ನಗರದ ಸಿಡಿಪಿಓ ಕಛೇರಿಯ ಸಭಾಂಗಣದಲ್ಲಿ ಗುರುವಾದಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ತಾಲೂಕಾಧ್ಯಕ್ಷರು, ತಹಶೀಲ್ದಾರ್ ಗೌಸಿಯಾ ಬೇಗಂ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕನಕದಾಸರ ಪೂರ್ವಭಾವಿ ಸಭೆ ಜರುಗಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ತಹಶಿಲ್ದಾರರು ದಾಸಶ್ರೇಷ್ಠ ಶ್ರೀ ಕನಕದಾಸರ ಜಯಂತ್ಯೋತ್ಸವದ ಮೆರವಣಿಗೆ ಚಾಲನೆ ನೀಡಿ ನಂತರ ವೇದಿಕೆ ಕಾರ್ಯಕ್ರಮ ಜರುಗಲಿದೆ. ಕಾರ್ಯಕ್ರಮದ ಯಶಸ್ವಿಗೆ, ರೂಪುರೇಷೆಗಳ ಬಗ್ಗೆ ತಮ್ಮ ಅಭಿಪ್ರಾಯ ಮತ್ತು ಸಲಹೆ ನೀಡುವಂತೆ ಸೂಚಿಸಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪವನ್ಕುಮಾರ್.ಎಸ್.ದಂಡಪ್ಪನವರ್ ಮಾತನಾಡಿ ಚಿಕ್ಕ ಮಕ್ಕಳಿಗೆ ವೇಷಭೂಷಣ ತೊಡಿಸಿ ಕೀರ್ತನಗಳ ಮೂಲಕ ವಚನ ಸಾಹಿತ್ಯವನ್ನು ಉಣಬಡಿಸಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಕುರುಬ ಸಮಾಜದ ತಾಲೂಕಾಧ್ಯಕ್ಷ ದಮ್ಮೂರು ಸೋಮಪ್ಪ, ಕಾರ್ಯದರ್ಶಿ ಎನ್.ಕರಿಬಸಪ್ಪ ಅವರು ಮಾತನಾಡಿ ಪ್ರತಿವರ್ಷದಂತೆ ನಡೆಸಿಕೊಡಬೇಕು ಅಲ್ಲದೇ ವಿಶೇಷ ಭಾಷಣಕಾರರನ್ನು ಕರೆಸಿ ಶ್ರೀ ಕನಕದಾಸರ ತ್ಯಾಗದ ಜೀವನ, ಸಮಾಜದ ಹಿನ್ನಲೆಯನ್ನು ಜಾಗೃತಿ ಮೂಡಿಸಬೇಕೆಂದು ತಿಳಿಸಿದರು.
ವಕೀಲರ ಸಂಘದ ಅಧ್ಯಕ್ಷ ಉಪ್ಪಾರ ವೆಂಕೋಬ ಅವರು ಮಾತನಾಡಿ ಕಾರ್ಯಕ್ರಮ ರೂಪುರೇಷೆಗಳ ಬಗ್ಗೆ ಕೆಲವೇ ಕೆಲವು ಮುಖಂಡರಿಗೆ ಮಾಹಿತಿ ನೀಡಲಾಗುತ್ತಿದೆ. ಅಲ್ಲದೇ ಕೆಲವು ಇಲಾಖೆಗಳ ಅಧಿಕಾರಿಗಳು ಮಾತ್ರ ಹಾಜರಾಗುತ್ತಿದ್ದಾರೆ. ಇನ್ನೂ ಅನೇಕ ಇಲಾಖೆಗಳ ಅಧಿಕಾರಿಗಳು ಹಾಜರಾಗುತ್ತಿಲ್ಲ ಅಂತಹವರಿಗೆ ನೋಟೀಸ್ ಜಾರಿ ಮಾಡಬೇಕು.
ಇನ್ನು ಮುಂದೆ ಎಲ್ಲರಿಗೂ ತಿಳಿಯುವಂತೆ ಬ್ಯಾನರ್ಗಳ ಅಳವಡಿಕೆ ಮಾಡಬೇಕು. ಇದಕ್ಕೆ ಸಂಬಂದಿಸಿದ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ತಿಳಿಸಿದರು. ಮುಖಂಡರಾದ ದೇವಲಾಪುರ ಮಾರೆಪ್ಪ ಹಾಗೂ ತಾಲೂಕು ಸರ್ವಧರ್ಮೀಯರ ಅಂಬೇಡ್ಕರ್ ಸಂಘದ ಅಧ್ಯಕ್ಷ ಡಾ.ಕೊಡ್ಲೆ ಮಲ್ಲಿಕಾರ್ಜುನ ಬೋವಿ ಸಮಾಜದ ಅಧ್ಯಕ್ಷ ವಿ.ಗಾಳೆಪ್ಪ ಮಾತನಾಡಿ ಕನಕದಾಸರು ಎಲ್ಲಾ ಸಮಾಜದ ಸೇರಿದ ಮಹಾನ್ ವ್ಯಕ್ತಿಯಾಗಿದ್ದು ಅವರ ಜಯಂತ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಬೇಕೆಂದರು.
ಇದೇ ವೇಳೆ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಕೆ.ಮಲ್ಲಿಕಾರ್ಜುನ, ಕುರುಬ ಸಮಾಜದ ಪದಾಧಿಕಾರಿಗಳು ಮತ್ತು ದೇವೇಂದ್ರಪ್ಪ ಬಸವರಾಜ ಗೊರವ ಶ್ರೀನಿವಾಸ, ಇನ್ನಿತರ ಸಮಾಜದ ಮುಖಂಡರಾದ ಡಾ.ಕೊಡ್ಲೆ ಮಲ್ಲಿಕಾರ್ಜುನ, ಹನುಮಂತಪ್ಪ, ಮಾರೇಶ, ಗಾಳೆಪ್ಪ, ಸಿದ್ದಲಿಂಗನಗೌಡ, ಡಾ.ಶಿವಪ್ರಕಾಶ, ಸೇರಿದಂತೆ ಇನ್ನಿತರರಿದ್ದರು.
ವರದಿ : ಶ್ರೀನಿವಾಸ ನಾಯ್ಕ




