ಬೆಳಗಾವಿ : ಬೈಲಹೊಂಗಲ ತಾಲೂಕಿನ ಮುರಕುಂಬಿ ಗ್ರಾಮದ ಇನಾಂದಾರ ಸಕ್ಕರೆ ಕಾರ್ಖಾನೆಯಲ್ಲಿ ಬುಧವಾರ ಸಂಭವಿಸಿದ ಬಾಯ್ಲರ್ ಸ್ಫೋಟದಲ್ಲಿ ಗಾಯಗೊಂಡಿದ್ದ ಐವರು ಗುರುವಾರ ಮೃತಪಟ್ಟಿದ್ದಾರೆ. ಇದರಿಂದಾಗಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 8ಕ್ಕೆ ಏರಿದೆ.
ಬಾಗಲಕೋಟೆಯ ಅಕ್ಷಯ ಸುಭಾಷ ಚೋಪಡೆ (48), ಬೈಲಹೊಂಗಲದ ದೀಪಕ ನಾಗಪ್ಪ ಮುನ್ನೋಳಿ ( 31), ಖಾನಾಪುರದ ಸುದರ್ಶನ ಮಹಾದೇವ ಬನೋಶಿ (25), ಬೈಲಹೊಂಗಲದ ಮಂಜುನಾಥ ಮಡಿವಾಳ, ಅಥಣಿಯ ಮಂಜುನಾಥ ಗೋಪಾಲ, ಬಾಗಲಕೋಟೆಯ ಗುರುಪಾದಪ್ಪ ತಮ್ಮಣ್ಣವರ (26), ಗೋಕಾಕದ ಭರತೇಶ ಬಸಪ್ಪ ಸರವಾಡೆ (27) ಮೃತಪಟ್ಟ ಕಾರ್ಮಿಕರು.
ಅವಘಡ ಸಂಭವಿಸಿ ದಿನ ಕಳೆದರೂ ಪರಿಹಾರ ಘೋಷಿಸಿಲ್ಲ
ಈ ಮಧ್ಯೆ, ಅವಘಡ ಸಂಭವಿಸಿ ದಿನ ಕಳೆದರೂ ಕಾರ್ಖಾನೆಯ ಆಡಳಿತ ಮಂಡಳಿಯವರು ಪರಿಹಾರ ಘೋಷಿಸಿಲ್ಲ, ಆಸ್ಪತ್ರೆಗೆ ಭೇಟಿ ನೀಡಿಲ್ಲ, ಸಂತಾಪ ಕೂಡ ಸೂಚಿಸಿಲ್ಲ ಎಂದು ಮೃತ ಕಾರ್ಮಿಕ ಗುರು ತಮ್ಮಣ್ಣನವರ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿ, ಶವಾಗಾರದ ಎದುರು ಗುರುವಾರ ಪ್ರತಿಭಟನೆ ನಡೆಸಿದರು.




