ಸಿರುಗುಪ್ಪ : ನಗರದ ತಾಲೂಕು ಕಛೇರಿಯಲ್ಲಿ ನೆರೆಹಾವಳಿಯ ಸಂಧರ್ಭದಲ್ಲಿ ಸರ್ಕಾರದ ವತಿಯಿಂದ ನಮಗೆ ನವಗ್ರಾಮದಲ್ಲಿ ಹಂಚಿಕೆಯಾಗಿದ್ದು ಸದ್ಯ ವಾಸ ಮಾಡುತ್ತಿರುವ ನಮಗೆ ಮನೆಗಳನ್ನು ಖಾಲಿ ಮಾಡುವಂತೆ ಅನ್ಯ ಗ್ರಾಮದವರು ಒತ್ತಡ ಹಾಕುತ್ತಿದ್ದು ಸೂಕ್ತ ಕ್ರಮ ಜರುಗಿಸುವಂತೆ ತಹಶೀಲ್ದಾರ್ ಗೌಸಿಯಾ ಬೇಗಂ ಅವರಿಗೆ ಹೊನ್ನಾರಳ್ಳಿ ಗ್ರಾಮದ ಮಹಿಳೆಯರಿಂದ ಮನವಿ ಸಲ್ಲಿಸಲಾಯಿತು.
ಗ್ರಾಮದ ಮಹಿಳೆಯರು ಮಾತನಾಡಿ 2009ರ ನೆರೆ ಹಾವಳಿ ಸಂದರ್ಭದಲ್ಲಿ ಹೊನ್ನರಳ್ಳಿ ಗ್ರಾಮದ ನಿವಾಸಿಗಳಿಗೆ ಸರ್ಕಾರದ ವತಿಯಿಂದ ಮನೆಗಳನ್ನು ಕಟ್ಟಿಸಿಕೊಟ್ಟು ವಾಸಿಸಲು ಹಂಚಿಕೆ ಮಾಡಲಾಗಿತ್ತು.
ಶಾಸಕರು ನಮಗೆ 10 ವರ್ಷಗಳ ಕಾಲ ವಾಸ ಮಾಡಿದ ನಂತರ ಮನೆ ಹಕ್ಕುಪತ್ರ ನೀಡುವುದಾಗಿ ತಿಳಿಸಿದ್ದರು. ಇದುವರೆಗೂ ನಮಗೆ ಮನೆಗಳ ಪಟ್ಟಾ ನೀಡಿರುವುದಿಲ್ಲ. ಸುಮಾರು 15 ವರ್ಷಗಳಿಂದ ನಾವು ಹೊನ್ನಾರಳ್ಳಿ ಗ್ರಾಮದವರಿಗೆ ಹಂಚಿಕೆಯಾದ ಮನೆಗಳಲ್ಲಿ ವಾಸವಿರುತ್ತೇವೆ.
ಆದರೆ ಅನ್ಯ ಗ್ರಾಮದ ರಮಾದೇವಿ ಗಂಡ ನಾಥನಾಯಕ, ಮನೆ ನಂ.100, ಡಿ.ಮದುಸೂಧನ ತಂದೆ ದ್ಯಾವಣ್ಣ ಮನೆ ನಂ.101, ರೇಣುಕಮ್ಮ ಗಂಡ ಸುರೇಶ್.ಹೆಚ್.ಕೆ ಮನೆ ನಂ.102 ಇವರುಗಳಿಗೆ ಪಟ್ಟಾದಾರರ ಹೆಸರು ಇಲ್ಲದಿದ್ದರೂ ತಮಗೆ ಪಟ್ಟ ಕೊಟ್ಟಿರುವುದಾಗಿ ಮನೆಗಳನ್ನು ಖಾಲಿಮಾಡುವಂತೆ ದೌರ್ಜನ್ಯ ಮಾಡುತ್ತಿದ್ದಾರೆ.
ಅಲ್ಲದೇ ಏಪ್ರಿಲ್ 6ನೇ ತಾರೀಖಿನಂದು ತಮಗೆ ಮೌಖಿಕವಾಗಿ ದೂರು ನೀಡಲೆಂದು ಕಛೇರಿಗೆ ಬಂದಾಗ ತಮ್ಮ ವಾಹನ ಚಾಲಕ ಮತ್ತು ಇನ್ನಿತರರು ನಮ್ಮೊಂದಿಗೆ ಅನುಚಿತವಾಗಿ ವರ್ತಿಸಿ ಅಸಭ್ಯವಾಗಿ ಮಾತನಾಡಿರುತ್ತಾರೆ.
ಅಲ್ಲದೇ ನಮ್ಮ ಮನೆಯವರಿಗೂ ಕರೆಮಾಡಿ ಬೆದರಿಸಿದ್ದು, ಇದೇ ರೀತಿ ಮುಂದುವರೆದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಕೆಲಸದಿಂದ ತೆಗಿಸಿ ಹಾಕುವುದಾಗಿ ಬೆದರಿಸಿದ್ದಾರೆ.
ಆದಕಾರಣ ತಮ್ಮ ಕಛೇರಿಯಲ್ಲಿನ ಸಿಸಿ ಟಿವಿ ದೃಶ್ಯಾವಳಿ ಆಧರಿಸಿ ಮತ್ತು ಪ್ರತ್ಯಕ್ಷ ದರ್ಶಿಗಳನ್ನು ವಿಚಾರಿಸಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.
ಇದೇ ವೇಳೆ ಗ್ರಾಮಸ್ಥರಾದ ವಿಶಲಾಕ್ಷಿ, ಬಸಮ್ಮ, ಈರಮ್ಮ, ಕವಿತಾ, ನೀಲಮ್ಮ, ಕಾವೇರಿ, ಶ್ರೀದೇವಿ, ಅನುಸೂಯಮ್ಮ, ವಿರುಪಮ್ಮ, ನಾಗರತ್ನ, ಸೇರಿದಂತೆ ಇನ್ನಿತರ ಮಹಿಳೆಯರಿದ್ದರು.
ವರದಿ : ಶ್ರೀನಿವಾಸ ನಾಯ್ಕ.




