ಸಿರುಗುಪ್ಪ : ನಗರದ ತಾಲೂಕು ಕಛೇರಿಯಲ್ಲಿ ಪೆ.11ರಂದು ಒಂಟಿ ಮಹಿಳೆಯರ ಪುನರ್ವಸತಿ ಹಾಗೂ ಸರಂಕ್ಷಣೆಗೆ ಕ್ರಮ ವಹಿಸುವಂತೆ ಕರ್ನಾಟಕ ರಾಜ್ಯ ಒಂಟಿ ಮಹಿಳೆಯರ ಸಂರಕ್ಷಣ ಸಂಘ ತಾಲೂಕು ಸಮಿತಿಯಿಂದ ಸಿರಸ್ಥೆದಾರ ಮಂಜುನಾಥಗೌಡ ಅವರ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ತಾಲೂಕು ಸಂಚಾಲಕರಾದ ಕೆ.ಈರಮ್ಮ ಅವರು ಮಾತನಾಡಿ ದೇವದಾಸಿಯೇತರ ಒಂಟಿ ಮಹಿಳೆಯರ ಗಣತಿ ಮಾಡಿ ಪುನರ್ವಸತಿ ಕಲ್ಪಿಸಬೇಕು. ಒಂಟಿ ಮಹಿಳೆಯರಿಗೆ ಮಾಸಿಕ ಸಹಾಯಧನ ಕನಿಷ್ಠ 6ಸಾವಿರ ನೀಡಬೇಕು. ಗಂಡ ಸತ್ತ ಅಥವಾ ಬಿಟ್ಟು ಒಂಟಿಯಾಗಿರುವ ಯುವತಿಯರು ಹಾಗೂ 50 ವರ್ಷದೊಳಗಿನ ಮಹಿಳೆಯರ ಸಾಮಾಜಿಕ ಬಹಿಷ್ಕಾರದ ಪರಿಹಾರವಾಗಿ 10ಲಕ್ಷ ರೂಪಾಯಿ ಇಡುಗಂಟು ಘೋಷಿಸಬೇಕು. ದೌರ್ಜನ್ಯಕ್ಕೊಳಗಾಗಿ ಗರ್ಭಿಣಿ ಹಾಗೂ ಬಾಣಂತಿಯರಾದ ಒಂಟಿ ಮಹಿಳೆಯರಿಗೆ 18 ತಿಂಗಳ ಕಾಲ ಮಾಸಿಕ 10 ಸಾವಿರ ರೂಪಾಯಿಗಳ ವಿಶೇಷ ನೆರವು ಹಾಗೂ ವೈದ್ಯಕೀಯ ರಕ್ಷಣೆ ರಕ್ಷಣೆ ಸಿಗಬೇಕು. ಅವರ ಮಕ್ಕಳಿಗೆ ಸೂಕ್ತ ಕಾನೂನು ರಚಿಸಿ ಶಿಕ್ಷಣ ಹಾಗೂ ಉದ್ಯೋಗಕ್ಕೆ ಅಗತ್ಯ ನೆರವು ನೀಡಬೇಕು.

ನಿವೇಶನ ಸಹಿತ ಉಚಿತ ಮನೆಯನ್ನು ನೀಡುವ ಮೂಲಕ ಇನ್ನಿತರ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು.
ಸ್ವಯಂ ಉದ್ಯೋಗ ತರಬೇತಿಗೆ ಶೇ.75ರ ಸಹಾಯಧನ, ಉಳಿದ ಶೇ.25ಕ್ಕೆ ಐದು ವರ್ಷಗಳ ಕಾಲ ಬಡ್ಡಿರಹಿತ ಸಾಲ ಒದಗಿಸುವಂತೆ ಒತ್ತಾಯಿಸಿದರು.
ಇದೇ ವೇಳೆ ಸಹ ಸಂಚಾಲಕರಾದ ಅಂಬಮ್ಮ, ಗಂಗಮ್ಮ, ಹಂಪಮ್ಮ, ಲಕ್ಷ್ಮಿ, ಹನುಮಂತಿ, ಮಾಳಮ್ಮ, ದುರುಗಮ್ಮ, ಈರಮ್ಮ, ಮುಖಂಡರಾದ ಹೆಚ್.ತಿಪ್ಪಯ್ಯ, ವಿ.ಮಾರುತಿ, ಬಿ.ಎಲ್.ಈರಣ್ಣ, ಸೇರಿದಂತೆ ಇನ್ನಿತರರಿದ್ದರು.
ವರದಿ : ಶ್ರೀನಿವಾಸ ನಾಯ್ಕ




