ಬೆಳಗಾವಿ: ಜಿಲ್ಲೆಯ ರಾಮದುರ್ಗ ತಾಲೂಕು ಸೇರಿದಂತೆ ಬೆಳಗಾವಿ ಜಿಲ್ಲೆಯ ಎಲ್ಲಾ 15 ತಾಲೂಕುಗಳಲ್ಲಿ ಟ್ರ್ಯಾಕ್ಟರ್ ಚಾಲಕರು ಟೇಪ್ ನಲ್ಲಿ ಜೋರಾದ ಸೌಂಡ್ ಇಟ್ಟು ಹಾಡುಗಳನ್ನು ಹಾಕುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಶ್ರೀನಿವಾಸಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ವಾಹನಗಳಲ್ಲಿ ಜೋರಾದ ಸೌಂಡ್ ನಲ್ಲಿ ಹಾಡುಗಳನ್ನು ಹಾಕುವಂತಹ ಚಾಲಕರ ವಿರುದ್ಧ ಕಠಿಣ ಕ್ರಮ ಜರುಗಿಸಲು ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಅವರು ಇದೇ ಡಿಸೆಂಬರ್ 23 ರಿಂದ ಪಟ್ಟಣದ ತಹಶೀಲ್ದಾರ್ ಕಛೇರಿ ಪಕ್ಕದಲ್ಲಿರುವ ಎ ಆರ್ ಟಿ ಓ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ಆರಂಭಿಸಿದ್ದಾರೆ.
ಈ ಕುರಿತು ಮಾಧ್ಯಮ ದವರೊಂದಿಗೆ ಮಾತನಾಡಿದ ಅವರು “ ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಸೇರಿ ಎಲ್ಲ ತಾಲೂಕುಗಳಲ್ಲಿ ಟ್ರ್ಯಾಕ್ಟರ್ ಚಾಲಕರು ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಜೋರಾದ ಸೌಂಡ್ ನಲ್ಲಿ ಹಾಡು ಹಾಕಿ ಸಾರ್ವಜನಿಕರಿಗೆ ನೀಡುತ್ತಿರುವ ತೊಂದರೆಗಳು ಮಿತಿ ಮೀರುತ್ತಿವೆ. ಕಾನೂನು ಬಾಹಿರವಾಗಿ ಅಳವಡಿಸಿರುವ ಟ್ರ್ಯಾಕ್ಟರ್ ವಾಹನಗಳಲ್ಲಿ ದೊಡ್ಡ ದೊಡ್ಡ ಧ್ವನಿವರ್ಧಕಗಳ ಶಬ್ದ ಮಾಲಿನ್ಯದಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ, ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಭಂಗ ಹೆಚ್ಚಾಗುತ್ತಿದೆ. ಇದರ ಜತೆಗೆ ರಸ್ತೆ ಪಕ್ಕ ಗಳಲ್ಲಿರುವ ಶಾಲಾ ಕಾಲೇಜು, ಆಸ್ಪತ್ರೆಗಳು ಇರುವುದರಿಂದ ಈ ಟ್ರ್ಯಾಕ್ಟರ್ ಚಾಲಕರ ಧ್ವನಿವರ್ಧಕಗಳ ಶಬ್ದ ಮಾಲಿನ್ಯದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸದಲ್ಲಿ ಮತ್ತು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಚಿಕ್ಕ ಮಕ್ಕಳು, ಮಹಿಳೆಯರು, ಗರ್ಭಿಣಿಯರು, ವೃದ್ಧರು ರಸ್ತೆಯಲ್ಲಿ ಅಲೆದಾಡುವುದೇ ಕಷ್ಟವಾಗಿದೆ.
ಸಾರ್ವಜನಿಕರಿಗೆ ಈ ರೀತಿ ಹಲವಾರು ತೊಂದರೆಗಳು ಆಗುತ್ತಿರುವುದರಿಂದ ಇದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಾವು ಕಳೆದ ತಿಂಗಳು ದೂರು ಸಲ್ಲಿಸಿದರೂ ಕೂಡ ಬೆಳಗಾವಿ ಜಂಟಿ ಸಾರಿಗೆ ಆಯುಕ್ತರು ಹಾಗೂ ರಾಮದುರ್ಗ ಆರ್ ಟಿ ಓ ಅವರು ಈವರೆಗೂ ಸೂಕ್ತ ಕ್ರಮ ಕೈಗೊಳ್ಳದೇ ಘೋರ ಕರ್ತವ್ಯ ನಿರ್ಲಕ್ಷ್ಯ ವಹಿಸಿರುತ್ತಾರೆ.
ಆದ್ದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಜೋರಾಗಿ ಸೌಂಡ್ ನಲ್ಲಿ ಹಾಡುಗಳನ್ನು ಹಾಕಿ ಶಾಂತಿ ಭಂಗ ಮತ್ತು ಶಬ್ದ ಮಾಲಿನ್ಯ ಮಾಡುತ್ತಿರುವ ವಾಹನಗಳ ಮೇಲೆ ಹೆಚ್ಚಿನ ದಂಡ ಹಾಕುವ ಜತೆಗೆ ಕ್ರಿಮಿನಲ್ ಮೊಕದ್ದಮೆ ಹಾಕಬೇಕು. ಈ ಕುರಿತು ಈಗಾಗಲೇ ಮನವಿ ಸಲ್ಲಿಸಿದರೂ ಕೂಡ ಸೂಕ್ತ ಕ್ರಮ ಕೈಗೊಳ್ಳದೇ ಕರ್ತವ್ಯ ನಿರ್ಲಕ್ಷ್ಯ ವಹಿಸಿದ ರಾಮದುರ್ಗ ಎ ಆರ್ ಟಿ ಓ ಬಸವರಾಜ ಬಾಗಲ್ ಅವರನ್ನು ವಜಾಗೊಳಿಸಿ ಅವರ ಮೇಲೆ ಶಿಸ್ತುಕ್ರಮ ಜರುಗಿಸಬೇಕೆಂದು ಆಗ್ರಹಿಸಿ ನಾವು ಅನಿರ್ದಿಷ್ಟಾವಧಿ ಅಹೋರಾತ್ರಿ ಉಪವಾಸ ಸತ್ಯಾಗ್ರಹವನ್ನು ನಡೆಸುತ್ತಿದ್ದೇವೆ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳವವರೆಗೂ ನಮ್ಮ ಸತ್ಯಾಗ್ರಹ ಮುಂದುವರಿಯಲಿದೆ ಎಂದು ಹೇಳಿದರು.
ವರದಿ: ಮಂಜುನಾಥ ಕಲಾದಗಿ




