ಹುಬ್ಬಳ್ಳಿ: ೨೦೨೬ರ ಕರ್ನಾಟಕ ಪಶ್ಚಿಮ ಪದವೀಧರ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಎಲ್ಲ ಅಭಿಪ್ರಾಯ ಪಡೆದು ನನಗೆ ಟಿಕೆಟ್ ನೀಡಲಾಗಿದೆ. ಕುಬೇರಪ್ಪನವರ ಅಸಮಾಧಾನವನ್ನು ಪಕ್ಷದ ವರಿಷ್ಠರು , ಮುಖಂಡರು ಬಗೆಹರಿಸಲಿದ್ದಾರೆ ಎಂದು ಪಶ್ಚಿಮ ಪದವೀಧರ ಮತಕ್ಷೇತ್ರದ ನಿಯೋಜಿತ ಕಾಂಗ್ರೆಸ್ ಅಭ್ಯರ್ಥಿ ಮೋಹನ್ ಲಿಂಬಿಕಾಯಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಶ್ಚಿಮ ಪದವೀಧರ ಮತಕ್ಷೇತ್ರವು ಧಾರವಾಡ, ಹಾವೇರಿ, ಉತ್ತರ ಕನ್ನಡ, ಗದಗ ಜಿಲ್ಲೆಯನ್ನು ಒಳಗೊಂಡಿದೆ. ಅದರಲ್ಲಿ ಧಾರವಾಡ ಜಿಲ್ಲೆಯಲ್ಲಿ ೩೮ ಸಾವಿರ, ೨೮ ಸಾವಿರ ಹಾವೇರಿ, ೧೯ ಸಾವಿರ ಗದಗ ಜಿಲ್ಲೆ, ೧೫ ಸಾವಿರ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರಿದ್ದಾರೆ. ಇದರಲ್ಲಿ ೫೧ ಸಾವಿರ ಪುರುಷ ಮತದಾರರಿದ್ದು, ೩೫ ಸಾವಿರ ಮಹಿಳಾ ಮತದಾರರಿದ್ದಾರೆ. ಆದರೆ ಮತದಾರರ ಪಟ್ಟಿಯಲ್ಲಿ ಹೆಚ್ಚು ಮಹಿಳಾ ಮತದಾರರು ತಿರಸ್ಕಾರಗೊಂಡಿದ್ದಾರೆ. ಇದಕ್ಕೆ ಅವರ ವಿಳಾಸದ ದಾಖಲಾತಿ ಸೇರಿದಂತೆ ಇನ್ನಿತರ ಕಾರಣಗಳಿವೆ. ಹೀಗಾಗಿ ಈ ಬಗ್ಗೆ ಮತದಾರರು ಜಾಗೃತಗೊಂಡು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು.
ಕಳೆದ ಬಾರಿ ೯೪ ಸಾವಿರ ಮತದಾರರಿದ್ದು, ಇದರಲ್ಲಿ ೨೨ ಸಾವಿರ ಬಿಜೆಪಿ ಅಭ್ಯರ್ಥಿ ಮತವನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ೧೩ ಸಾವಿರ ಮತಗಳನ್ನು ಪಡೆದಿದ್ದರು, ಇದಲ್ಲದೇ ಬಂಡಾಯ ಅಭ್ಯರ್ಥಿ ೬ ಸಾವಿರ ಮತಗಳನ್ನು ಪಡೆದುಕೊಂಡು, ಸುಮಾರು ೮ ಸಾವಿರಕ್ಕೂ ಅಧಿಕ ಮತಗಳು ಕುಲಗೆಟ್ಟ ಮತಗಳಾಗಿದ್ದವು. ಇವೆಲ್ಲವನ್ನೂ ನೋಡಿದಾಗ ಬಿಜೆಪಿ ವಿರೋಧಿ ಅಲೆ ನಮಗೆ ಕಂಡು ಬಂದಿದೆ. ಈ ದಿಸೆಯಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ವಿಧಾನ ಪರಿಷತ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲಿದೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಸುಲಭವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಈಗಾಗಲೇ ಪದವೀಧರರ ಸಂಪರ್ಕದಲ್ಲಿದ್ದು ಪ್ರತಿ ಜಿಲ್ಲೆಯಲ್ಲೂ ಸಂಚಾರ ಮಾಡಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾಜಿ ಶಾಸಕ ಎಂ.ಎಸ್.ಅಕ್ಕಿ, ಡಾ.ಲಿಂಗರಾಜ ಅಂಗಡಿ, ಅನಿಲಕುಮಾರ ಪಾಟೀಲ, ಹುಡಾ ಅಧ್ಯಕ್ಷ ಶಾಕೀರ ಸನದಿ ಮುಂತಾದವರಿದ್ದರು.
ವರದಿ: ಸುಧೀರ್ ಕುಲಕರ್ಣಿ




