ತುರುವೇಕೆರೆ:- ಮೊಬಿಲಿಟಿ ಇಂಡಿಯಾ ಸಂಸ್ಥೆ ವತಿಯಿಂದ ವಿಕಲಚೇತನ ಮಕ್ಕಳಿಗೆ ನಿರಾಮಯ ಆರೋಗ್ಯ ವಿಮೆ ಕಾರ್ಡ್ ಅನ್ನು ವಿತರಿಸಲಾಯಿತು.
ಆರೋಗ್ಯ ವಿಮೆ ಕಾರ್ಡ್ ವಿತರಿಸಿ ಮಾತನಾಡಿದ ಪಪಂ ಹಿರಿಯ ಆರೋಗ್ಯ ನಿರೀಕ್ಷಕ ರಂಗನಾಥ್, ಮಕ್ಕಳು ಭಗವಂತನ ಸೃಷ್ಟಿ. ದೇವರ ಸೃಷ್ಟಿಯಲ್ಲಿ ಚೇತನ, ವಿಕಲಚೇತನ ಎಲ್ಲರೂ ಒಂದೇ. ಪೋಷಕರು ತಮಗೆ ವಿಕಲಚೇತನ ಮಕ್ಕಳಿದ್ದಾರೆಂದು ಕೊರಗದೆ ಅವರಲ್ಲಿ ಆತ್ಮ ಸ್ಥೈರ್ಯ ತುಂಬಿ, ವಿದ್ಯಾವಂತರನ್ನಾಗಿ ಮಾಡಿ, ಸಮಾಜದಲ್ಲಿ ಉತ್ತಮ ಸ್ಥಾನ ಪಡೆಯುವಂತೆ ಪ್ರೋತ್ಸಾಹಿಸಿ ಎಂದರು.
ಲೆಕ್ಕ ಪರಿಶೋಧಕ ಸದಾನಂದ ಮಾತನಾಡಿ, ವೈಕಲ್ಯವಿರುವವರನ್ನು ಸರ್ಕಾರವೇ ವಿಶೇಷಚೇತನರೆಂದು ಗುರುತಿಸುತ್ತಿದೆ. ದೈಹಿಕವಾಗಿ ವೈಕಲ್ಯ ಹೊಂದಿರುವವರು ವಿಕಲಚೇತನರಲ್ಲ, ಉತ್ತಮ ಮಾನವೀಯ ಗುಣ ಹೊಂದಿಲ್ಲದವರು ವಿಕಲಚೇತನರು ಎಂದರು.
ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕಾರ್ಯಕ್ರಮ ಸಂಯೋಜಕ ರಾಜಣ್ಣ ಮಾತನಾಡಿ, ಸಂಸ್ಥೆ ಕಳೆದ 3 ವರ್ಷದಿಂದ ತಾಲೂಕಿನಲ್ಲಿ 18 ವರ್ಷದೊಳಗಿನ ವಿಕಲಚೇತನರ ಆರೋಗ್ಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದರು.
ನ್ಯಾಷನಲ್ ಟ್ರಸ್ಟ್ ಆಕ್ಟ್ ಅಡಿಯಲ್ಲಿ ವಿಕಲಚೇತನ ಮಕ್ಕಳಿಗೆ ನಿರಾಮಯ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುತ್ತಿದೆ. ಬುದ್ಧಿಮಾಂದ್ಯತೆ, ಮೆದುಳು ಪಕ್ಷಘಾತ, ಬಹುವಿಧದ ಅಂಗವಿಕಲತೆ, ಆಟಿಸಂ ವಿಧಗಳಿಗೆ ಚಿಕಿತ್ಸೆ ಪಡೆಯಲು ಈ ವಿಮೆ ಕಾರ್ಡ್ ಅನುಕೂಲವಾಗಲಿದೆ. ವಿಮೆ ಕಾರ್ಡ್ ಇಂದ ವಾರ್ಷಿಕ 1 ಲಕ್ಷ ರೂ ಚಿಕಿತ್ಸಾ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎಂದ ಅವರು, ವಿಮಾ ಯೋಜನೆಯ ಪ್ರಯೋಜನ, ಉದ್ದೇಶದ ಬಗ್ಗೆ ತಿಳಿಸಿದರು.
ಆಶಾ ಕಾರ್ಯಕರ್ತರ ಸಂಯೋಜಕಿ ಶ್ವೇತಾ, ಸಮತೋಲನ ಆಹಾರ ಮಹತ್ವದ ಬಗ್ಗೆ ಮಾಹಿತಿ ನೀಡಿದರು.ಮೊಬಿಲಿಟಿ ಇಂಡಿಯಾದಿಂದ 25 ಮಕ್ಕಳಿಗೆ ನಿರಾಮಯ ವಿಮಾ ಕಾರ್ಡ್ ವಿತರಿಸಲಾಯಿತು. ಪಿಸಿಯೀಥೆರಪಿಸ್ಟ್ ಪುನೀತ್ ಕುಮಾರ್ ಹಾಗೂ ಪೋಷಕರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್