ಹಾಸನ: ಮನೆ ಸಮೀಪ ಬಂದ 12 ಅಡಿ ಉದ್ದದ ಕಾಳಿಂಗ ಸರ್ಪದೊಂದಿಗೆ ಭಾರೀ ಕಾದಾಟ ನಡೆಸಿ, ಮಾಲೀಕನ ಮಕ್ಕಳ ರಕ್ಷಣೆ ಮಾಡಿದ ಶ್ವಾನವೊಂದು ಪ್ರಾಣ ತ್ಯಾಗ ಮಾಡಿರುವ ಘಟನೆ ಹಾಸನ ತಾಲೂಕು ಕಟ್ಟಾಯ ಗ್ರಾಮದಲ್ಲಿ ಬುಧವಾರ ನಡೆದಿದೆ.
ಶಮಂತ್ ಎನ್ನುವವರ ತೋಟದಲ್ಲಿ ಪಿಟ್ಬುಲ್ ಹಾಗೂ ಡಾಬರ್ಮನ್ ತಳಿಯ ನಾಯಿಗಳನ್ನು ಸಾಕಿದ್ದರು. ಪಿಟ್ಬುಲ್ ಶ್ವಾನಕ್ಕೆ ಶಮಂತ್ ಅವರು ಭೀಮಾ ಎಂದು ಹೆಸರಿಟ್ಟಿದ್ದರು. ತೋಟದಲ್ಲಿ ಕೆಲಸಗಾರರು ಕೆಲಸ ಮಾಡುತ್ತಿದ್ದ ಸಂದರ್ಭ ಕಾಳಿಂಗ ಸರ್ಪವೊಂದು ಬಂದಿದೆ. ಈ ವೇಳೆ ಹೊರಗಡೆ ಮಕ್ಕಳು ಆಟವಾಡುತ್ತಿದ್ದು, ಕಾಳಿಂಗ ಸರ್ಪ ತೆಂಗಿನ ಗರಿಗಳ ಕೆಳಗೆ ಹೋಗಿದೆ. ಇದನ್ನು ಕಂಡ ನಾಯಿಗಳು ತೆಂಗಿನಗರಿಗಳ ಅಡಿಯಲ್ಲಿದ್ದ ಸರ್ಪವನ್ನು ಎಳೆದ ತಂದು ಸೆಣಸಾಡಲು ಶುರು ಮಾಡಿವೆ.
ಈ ನಡುವೆ ನಾಯಿಗಳ ಶಬ್ಧ ಕೇಳಿಸಿಕೊಂಡ ಶಮಂತ್ ಅವರು, ಹೊರಗೆ ಬಂದು ಕಾದಾಟವನ್ನು ನಿಲ್ಲಿಸಲು ಪ್ರಯತ್ನಿಸಿದ್ದಾರೆ. ಆದರೆ, ಭೀಮಾ ತನ್ನ ಕಾದಾಟವನ್ನು ಮುಂದುವರೆಸಿದ್ದಾನೆ. ಹಾವಿನೊಂದಿಗೆ ಸುಮಾರು ಹದಿನೈದು ನಿಮಿಷಕ್ಕೂ ಹೆಚ್ಚು ಕಾಲ ಸೆಣಸಾಡಿದ ಭೀಮಾ ನಾಯಿ, ಸುಮಾರು 12 ಅಡಿ ಸರ್ಪವನ್ನು ಮೂರು ತುಂಡುಗಳನ್ನಾಗಿ ಮಾಡಿ ಕೊಂದಿದೆ. ಕಾದಾಟದ ವೇಳೆ ನಾಯಿಯ ಮುಖದ ಭಾಗಕ್ಕೆ ಕಾಳಿಂಗ ಸರ್ಪ ಹಲವು ಬಾರಿ ಕಚ್ಚಿದ್ದು, ವಿಷದ ಪರಿಣಾಮ ಶ್ವಾನ ಸಾವನ್ನಪ್ಪಿದೆ. ಸರ್ಪದೊಂದಿಗೆ ಕಾದಾಡಿದ ಮತ್ತೊಂದು ನಾಯಿ ಆರೋಗ್ಯವಾಗಿದೆ.
ನಾಯಿ ಹಾಗೂ ಕಾಳಿಂಗ ಸರ್ಪದ ಕಾದಾಟವನ್ನು ಸ್ಥಳೀಯ ನಿವಾಸಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭೀಮಾ ಒಂದು ವಂಶಾವಳಿಯ ನಾಯಿಯಾಗಿದ್ದು, ಹಲವು ಡಾಗ್ ಶೋನಲ್ಲಿ ಬಹುಮಾನ ಪಡೆದಿತ್ತು ಎಂದು ಶಮಂತ್ ಅವರು ಹೇಳಿದ್ದಾರೆ.